ಭೂಮಿ ಬರಿದು ಮಾಡಿದ ನಮಗೆ ಕೊನೆಗೆ ಉಳಿದಿದ್ದು ಭೀಕರ ಬಿಸಿಲು...
ಏಪ್ರಿಲ್ ನ ಅರಂಭದಲ್ಲೇ ಬೇಸಿಗೆ ತಾಪಮಾನ ನಲವತ್ತು ಡಿಗ್ರಿ ಸೆಲ್ಷಿಯಸ್ ಗಿಂತ ಹೆಚ್ಚಾಗಿದೆ. ನೀರಿಗೆ ತತ್ವಾರ ಆಗಿದೆ. ಇಂದಿನ ಪರಿಸ್ಥಿತಿಗೆ ಕಾರಣ ಏನು, ಯಾರು ಅಂದರೆ ನಮ್ಮದೇ ಅತಿಯಾಸೆ, ಆಸೆಬುರುಕತನ ಕಣ್ಣೆದುರು ನಿಲ್ಲುತ್ತದೆ
ಇದು ಏಪ್ರಿಲ್ ತಿಂಗಳ ನಾಲ್ಕನೇ ದಿನ. ಬಿಸಿಲು ಉಪವಾಸವಿದೆಯೇನೋ ಎಂಬಂತೆ ಸಿಟ್ಟು ತೋರುತ್ತಿದೆ. ಅದಾಗಲೇ ಬಳ್ಳಾರಿ, ರಾಯಚೂರು, ಕಲಬುರಗಿಯಲ್ಲಿ ಬಿಸಿಲು 40 ಡಿಗ್ರಿ ದಾಟಿದೆ. ಕೆಲ ದಿನ 42 ,43 ಡಿಗ್ರಿ ದಾಖಲಾಗಿದೆ. ಬೇಸಿಗೆಯ ದಿನಗಳಲ್ಲೂ ಕಡಿಮೆ ಉಷ್ಣಾಂಶ ಇರುತ್ತಿದ್ದ ಬೆಂಗಳೂರಿನಲ್ಲಿ ಕೂಡ ಉಷ್ಣಾಂಶ 34 ಡಿಗ್ರಿ ದಾಟಿದೆ. ಇನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿನ ಬಿಸಿಲು 38 ಡಿಗ್ರಿಯ ಹತ್ತಿರ ಸುಳಿದರೂ ಆಶ್ಚರ್ಯವಿಲ್ಲ.
ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಈಗಾಗಲೇ 35 ಡಿಗ್ರಿಯ ಹತ್ತಿರ ಸುಳಿದಾಡುತ್ತಿವೆ. ಮಾಯದಂಥ ಮಳೆ ಬಂತಣ್ಣೋ ಎಂಬ ಹಾಡಿನ ಸಾಲಿಗಷ್ಟೇ ನಾವು ಖುಷಿ ಪಡಬೇಕಿದೆ. ಇಂದಿನ ಸ್ಥಿತಿಗೆ ಕಾರಣವೇನು ಎಂದು ಪ್ರಶ್ನಿಸಿಕೊಂಡರೆ ಉತ್ತರ ಸಿಗದಿರುವಂಥದ್ದೇನಲ್ಲ.[ಭೂತಾಪಮಾನ ಹೀಗೇ ಏರುತ್ತಿದ್ದರೆ ಜಗತ್ಪ್ರಳಯ ಗ್ಯಾರಂಟಿ!]
ಏಕೆಂದರೆ, ಹವಾಮಾನ ಬದಲಾಗುತ್ತಿದೆ. ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಪ್ರಕೃತಿಯ ಸಂಪನ್ಮೂಲಗಳನ್ನು ನಾವು ವಿವೇಚನೆ ಇಲ್ಲದೆ ಬಳಸುತ್ತಿದ್ದೇವೆ. ಮೂರು ಕೊಡ ನೀರು ಬಳಸುವಲ್ಲಿ ಆರು ಕೊಡ ನೀರನ್ನು ಚೆಲ್ಲುತ್ತಿದ್ದೇವೆ. ಅರಣ್ಯ ಉತ್ಪನ್ನಗಳ ಬಳಕೆಗೆ ಮಿತಿಯನ್ನೇ ಹಾಕಿಕೊಂಡಿಲ್ಲ.
ಒಟ್ಟಿನಲ್ಲಿ ನಮ್ಮ ಸುಖಕ್ಕಾಗಿ ಪ್ರಕೃತಿಯ ಸಂಪನ್ಮೂಲವನ್ನು ಬರಿದು ಮಾಡುತ್ತಿದ್ದೇವೆ. ಇಷ್ಟೆಲ್ಲ ಮಾಡಿದ ನಂತರವೂ ಪ್ರಕೃತಿ ಮಾತೆಯ ಮೇಲಿನ ಆಕ್ರಮಣಕ್ಕೆ ಬೆಲೆ ತೆರುವ ದಿನಗಳು ಬಹಳ ದೂರವಿದೆಯೆಂದು ಈವರೆಗೂ ನಾವು ಭಾವಿಸಿದ್ದೆವು. ಆದರೆ ಈಗ ನಾವಂದು ಕೊಂಡಿದ್ದಕ್ಕಿಂತಲೂ ಮುಂಚೆಯೇ ಅದು ನಮ್ಮ ಮನೆಯ ಬಾಗಿಲ ಬಳಿ ಬಂದು ನಿಂತಿದೆ.[ಮಳೆ ಬಾರದಿದ್ದರೆ ತಮಿಳುನಾಡಿಗೆ ಕಾವೇರಿ ನೀರಿಲ್ಲ: ಸಿದ್ದರಾಮಯ್ಯ]
'ಮುಂದಾಲೋಚನೆ ಇಲ್ಲದೆ ನನ್ನ ಸಂಪತ್ತನ್ನು ಸೂರೆ ಹೊಡೆದ ನೀವು ಈಗ ಅದಕ್ಕೆ ಬೆಲೆ ತೆತ್ತು ಪಶ್ಚಾತ್ತಾಪ ಪಡಿರಿ' ಎಂದು ಪ್ರಕೃತಿ ಮಾತೆ ಮುನಿದು ನಿಂತಿದ್ದಾಳೆ. ಈಗ ನಾವು ಮಾಡಿದ ತಪ್ಪಿಗೆ ದಂಡ ತೆತ್ತು, ಕ್ಷಮೆ ಕೇಳಿ, ತಪ್ಪೊಪ್ಪಿಕೊಂಡು ನಮ್ಮ ಪ್ರಕೃತಿಯನ್ನು ಇನ್ನಷ್ಟು ದಷ್ಟಪುಷ್ಟ ಮಾಡಿ, ಮುಂದಿನ ತಲೆಮಾರಿಗೆ ವರ್ಗಾಯಿಸದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.
ಹಿಂದೆ ನಮ್ಮ ಹಳ್ಳಿಗಳಲ್ಲಿ ಸಣ್ಣ ಪುಟ್ಟ ಹಳ್ಳ- ಕೊಳ್ಳಗಳಿರುತ್ತಿದ್ದವು. ಬೇಸಿಗೆಯಲ್ಲಿ ಕೂಡ ಅಲ್ಲಿ ಅಲ್ಪ ಸ್ವಲ್ಪ ನೀರು ಇರುತ್ತಿತ್ತು. ಮುಂದಿನ ಮಳೆಗಾಲ ಎಟುಕಿಸಿಕೊಳ್ಳುವವರೆಗೆ ನಾವು ಅದನ್ನು ಜೋಪಾನದಿಂದ ಬಳಸಿಕೊಳ್ಳುತ್ತಿದ್ದೆವು. ಆದರೆ ಈಗ ಏನಾಗಿದೆ? ಬೇಸಿಗೆ ಕಾಲದ ಹೊಸ್ತಿಲಿನಲ್ಲಿ ಇರುವಾಗಲೇ ನಮ್ಮ ಎಲ್ಲ ಜಲ ಮೂಲಗಳು ಬತ್ತಿ ಹೋಗಿವೆ. ಮೇಲಾಗಿ ಬಿಸಿ ಗಾಳಿ ಬೀಸುತ್ತಿದೆ. ಮುಂದಿನ ಎರಡು ತಿಂಗಳನ್ನು ಹೇಗೆ ಕಳೆಯಬೇಕು ಎಂಬುದೇ ತಿಳಿಯುತ್ತಿಲ್ಲ.[ಬಿಸಿಲ ಬೇಗೆಯ ನಡುವೆ ಮಂಗಳೂರಲ್ಲಿ ಶುರುವಾಯಿತೇ ನೀರಿನ ದಂಧೆ ?]
ನೀರು ದುಡ್ಡು ಕೊಟ್ಟು ಕೊಂಡುಕೊಳ್ಳುವ ಸಂಪನ್ಮೂಲವಲ್ಲ. ಅದನ್ನು ಉತ್ಪಾದನೆ ಮಾಡುವುದು ಸಹ ಕಾರ್ಯ ಸಾಧುವಲ್ಲ. ಏನು ಮಾಡುವುದು? ಮುನಿಸಿಕೊಂಡಿರುವ ಪ್ರಕೃತಿ ಮಾತೆಯನ್ನು ಪ್ರಾರ್ಥಿಸಿ ಮಳೆ ತರಲೂ ಸಾಧ್ಯವಿಲ್ಲ. ಇರುವ ಅಲ್ಪ ಸ್ವಲ್ಪ ಜಲವನ್ನು ಮುಂದಿನ ಮಳೆಗಾಲದವರೆಗೆ ಜತನದಿಂದ ಬಳಸಿ ಕೊಳ್ಳುವುದಷ್ಟೇ ನಮಗೆ ಉಳಿದಿರುವ ಏಕೈಕ ಮಾರ್ಗ.
ಮಾಡಿದ್ದುಣ್ಣೋ ಮಹರಾಯ ಎನ್ನುವ ನಾಣ್ನುಡಿ ನೆನಪಾಗುತ್ತಿದೆ. ಮಾಡಿರುವ ತಪ್ಪನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಆ ತಪ್ಪನ್ನು ಮತ್ತೆ ಮಾಡುವುದಿಲ್ಲ ಎನ್ನುವ ಸಂಕಲ್ಪ ತೊಟ್ಟು, ಇಂದಿನಿಂದಲೇ ಕಾರ್ಯ ತತ್ಪರರಾದರೆ ಮಾತ್ರ ಮುಂದಿನ ದಿನಗಳು ನಮಗೆ ಆಶಾದಾಯಕವಾಗಲಿವೆ. ಇಲ್ಲದಿದ್ದರೆ ಕುಡಿಯುವ ನೀರಿಗಾಗಿ ನಾವು ಬಡಿದಾಡಿ ಸಾಯುವ ದಿನಗಳು ಬಹಳ ದೂರವೇನಿಲ್ಲ.[ಬರ ಬಂದು ಬಾಗಿಲಲಿ ನಿಂತಿಹುದು ಬದುಕು ಹೇಗೆ ಪ್ರಭುವೆ?]
ಇನ್ನು ಕಾಡಿನಲ್ಲಿರುವ ಪ್ರಾಣಿಗಳನ್ನು ಕಾಪಾಡುವವರು ಯಾರು? ನೀರಿಗಾಗಿ ನಾಡಿನ ಕಡೆಗೆ ಮುಖ ಮಾಡಿ ಬರುತ್ತಿರುವ ಪ್ರಾಣಿಗಳ ಪರಿಸ್ಥಿತಿ ನೀಡಿದರೆ ಕರುಳು ಚುರುಕ್ಕೆನ್ನುತ್ತದೆ. ನೀರಿಲ್ಲದೆ ಬಾಯಾರಿ ಜೀವ ಕಳೆದು ಕೊಂಡಿರುವ ಜಿಂಕೆಯ ಕಣ್ಣಿನಲ್ಲಿ ಕಾಣುವ ಆರ್ದ್ರತೆಯ ನೋಟವನ್ನು ನೋಡಿದರೆ ಕಣ್ಣ ಅಂಚಿನಲ್ಲಿ ನೀರು ಜಿನುಗುತ್ತದೆ.
ಕಾಡಾನೆಯೇ ಕೃಶವಾಗಿ, ಮೂಳೆ- ಚಕ್ಕಳ ಬಿಟ್ಟುಕೊಂಡು ಮಂಡಿಯೂರಿ ನೀರಿಗಾಗಿ ಅಂಗಲಾಚುವ ದೃಶ್ಯ ನೋಡಿದರೆ ಮರುಕ ಹುಟ್ಟುತ್ತದೆ. ನಮ್ಮ ದರ್ಪದ ಬದುಕಿಗಾಗಿ ಮೂಕ ಪ್ರಾಣಿಗಳು ಬಲಿಯಾಗುತ್ತಿರುವುದನ್ನು ನೋಡಿದರೆ ನಾಚಿ ತಲೆ ತಗ್ಗಿಸಬೇಕು. ನಾವು ಕ್ಷಮೆಗೆ ಅರ್ಹತೆಯನ್ನು ಹೊಂದಿಲ್ಲ. ಇದು ಅತಿರೇಕದ ಮಾತು ಅನ್ನಿಸಬಹುದು.
ಆದರೆ, ಕೆಲವು ಹಿರಿಯ ಪರಿಸರ ತಜ್ಞರು ಹೇಳುವಂತೆ, ನಾವು ಮಾನವರು ಅರಣ್ಯದ ಕಡೆಗೆ ತಲೆ ಹಾಕದಿದ್ದರೆ ಪ್ರಕೃತಿಯೇ ತನ್ನ ಸುರಕ್ಷತೆಯನ್ನು ಮಾಡಿಕೊಳ್ಳುತ್ತದೆಯಂತೆ. ನಾವು ಕನಿಷ್ಠ ಪಕ್ಷ ಅದನ್ನಾದರೂ ಮಾಡಬಹುದೇ?