ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಯಲ್ಲಿ ಕನ್ನಡ ಹಾಡು, ಕಚಡಾ ಇಂಗ್ಲಿಷು, ದೈನೇಸಿ ಮನವಿ
ರಾಮನಗರ, ಮೇ 4: ಸಬ್ಜೆಕ್ಟ್ ಇರಬಾರದ ಸಿನಿಮಾ ಥರ ಎಂಬ ಸಾಲನ್ನು ಯೋಗರಾಜ್ ಭಟ್ ತಮ್ಮ ಸಿನಿಮಾ ಪರಮಾತ್ಮದಲ್ಲಿ ಹಾಡೊಂದಕ್ಕೆ ಬರೆದ ಸಾಲು. ಎಸ್ಸೆಸ್ಸೆಲ್ಸಿಯಲ್ಲಿ ಕೆಲ ವಿದ್ಯಾರ್ಥಿ ಮಹಾಶಯರ ಉತ್ತರ ನೋಡಿದರೆ, ಹೌದು, ಯೋಗರಾಜ ಭಟ್ಟರೇ ಸರಿ ಎನಿಸುತ್ತದೆ.
ಸಿನಿಮಾ ಹಾಡು, ಲವ್ ಲೆಟರ್, ದಯನೀಯವಾದ ಬೇಡಿಕೆ..ಇಂಥವನ್ನೆಲ್ಲ ಉತ್ತರ ಪತ್ರಿಕೆಗಳಲ್ಲಿ ಬರೆದಿದ್ದಾರೆ ವಿದ್ಯಾರ್ಥಿಗಳು. ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಸ್ಸೆಸ್ಸೆಲ್ಸಿ. ಇಲ್ಲಿ ಶ್ರಮ ವಹಿಸಿ, ಚೆನ್ನಾಗಿ ಕಲಿತು ಪರೀಕ್ಷೆ ಬರೆದಿದ್ದೇ ಆದರೆ ಮುಂದಿನ ಶೈಕ್ಷಣಿಕ ಬದುಕಿಗೆ ಅಡಿಪಾಯವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.[SSLC ಪರೀಕ್ಷೆಗೆ ಇಂದು ಮಂಗಳ, ಕಾಲೇಜಿಗೆ ದಾರಿ ಯಾವುದಯ್ಯ]
ಆದರೆ ಈ ಪರೀಕ್ಷೆಯನ್ನೇ ಸಮರ್ಪಕವಾಗಿ ಮಾಡದೆ, ತಮಗೆ ತೋಚಿದಂತೆ ಗೀಚಿದ, ಮೌಲ್ಯಮಾಪಕರಿಗೆ ಮನವಿ ಮಾಡುವ ಬರಹಗಳು ಕಂಡು ಬಂದಿವೆ. ಅದರಲ್ಲೂ ರಾಮನಗರ ಜಿಲ್ಲಾ ಮೌಲ್ಯಮಾಪನ ಕೇಂದ್ರದಲ್ಲಿ ಉತ್ತರ ಪತ್ರಿಕೆಯಲ್ಲಿ ಕಂಡು ಬಂದ ಹಲವು ವಿಚಿತ್ರ ಬರಹಗಳು ಗಮನ ಸೆಳೆದಿವೆ. ಅಷ್ಟೇ ಅಲ್ಲ ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಿವೆ.
ಚಾಮರಾಜನಗರ ಜಿಲ್ಲೆ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದ್ದು, ಇಲ್ಲಿನ ಶಿಕ್ಷಣ ಮಟ್ಟವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಅದು ಪ್ರಗತಿಯಾಗಿಲ್ಲ ಎನ್ನುವುದು ಅಲ್ಲಿಂದ ರಾಮನಗರದ ಮೌಲ್ಯ ಮಾಪನ ಕೇಂದ್ರಕ್ಕೆ ಬಂದಿದ್ದ ಉತ್ತರ ಪತ್ರಿಕೆಗಳಲ್ಲಿದ್ದ ಉತ್ತರ ರೀತಿಯ ಬರಹಗಳೇ ಸಾಕ್ಷಿಯಾಗಿದೆ.[ಎಸೆಸೆಲ್ಸಿಯಲ್ಲಿ ತುಳು ಪರೀಕ್ಷೆ ಬರೆದ ದಾಖಲೆಯ 313 ವಿದ್ಯಾರ್ಥಿಗಳು]
ಕಿಂಗ್ ಗೆ ಕನ್ನಡ ಅರ್ಥ ಸಿಗರೇಟ್!
ಮೌಲ್ಯ ಮಾಪಕರ ಕೈಗೆ ಸಿಕ್ಕ ಉತ್ತರ ಪತ್ರಿಕೆಯಲ್ಲಿದ್ದ ಕೆಲವು ಮಾದರಿಗಳು ಹೀಗಿವೆ. ಆಂಗ್ಲಪದದ ಕನ್ನಡ ಅರ್ಥ ಬರೆಯಿರಿ ಎಂಬುದಕ್ಕೆ ಮೂರರ ಪೈಕಿ ಒಂದಕ್ಕೆ ಮಾತ್ರ ಬರೆದಿರುವ ವಿದ್ಯಾರ್ಥಿ ಕಿಂಗ್ ಎಂಬುದಕ್ಕೆ ಕನ್ನಡದಲ್ಲಿ ಸಿಗರೇಟ್ ಎಂದು ಬರೆದಿದ್ದರೆ, ವಿಜ್ಞಾನದ ವಿಷಯದ ಸಂಗ್ರಹಮೂಲ ಮತ್ತು ವಿನಿಮಯ ಮೂಲಗಳ ನಡುವಣ ಯಾವುದಾದರೂ ಎರಡು ವ್ಯತ್ಯಾಸಗಳನ್ನು ಬರೆಯಿರಿ ಎಂಬ ಪ್ರಶ್ನೆಗೆ "ಅನಿಸುತಿದೆ ಯಾಕೋ ಇಂದು...." ಎಂಬ ಸಿನಿಮಾದ ಹಾಡನ್ನು ಬರೆದಿಟ್ಟಿದ್ದಾರೆ.
ಐ ಲವ್ ಲೋ ಮಿನಿಸ್ಟರ್
ನೆಹರು ಅವರು ಅಂಬೇಡ್ಕರ್ ರನ್ನು ಕಾನೂನು ಸಚಿವರನ್ನಾಗಿ ಆಯ್ಕೆ ಮಾಡಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ಐ ಲವ್ ಯು ಫಸ್ಟ್ ಲೋ ಮಿನಿಸ್ಟರ್ ಆಫ್ ಇಂಡಿಯಾ ಎಂದು ಇಂಗ್ಲಿಷ್ ನಲ್ಲಿ ಬರೆದು ಕನ್ನಡದಲ್ಲಿ ಮತ್ತೆ ಬನ್ನಿ ಪ್ರೀತಿಸೋಣ ಎಂದು ಉತ್ತರಿಸಿದ್ದಾರೆ.
ಗಣಿತ ಶಿಕ್ಷಕರಿಲ್ಲ
ಇವರ ನಡುವೆ ಮತ್ತೊಬ್ಬರು ವಿದ್ಯಾರ್ಥಿ, ಗಣಿತ ಶಿಕ್ಷಕರಿಲ್ಲ, ಅರವತ್ತು ನಂಬರು ಕೊಟ್ಟು ಪಾಸು ಮಾಡಿ ಎಂಬ ಮನವಿ ಮಾಡಿದ್ದಾರೆ. ಒಟ್ಟಾರೆ ವಿಭಿನ್ನ ಮತ್ತು ವಿಚಿತ್ರವಾಗಿ ಬರೆದಿರುವ ಉತ್ತರ ಪತ್ರಿಕೆಗಳನ್ನು ಕಂಡ ಮೌಲ್ಯಮಾಪಕರು ಮಾತ್ರ ಸುಸ್ತಾಗಿದ್ದಾರೆ. ಪರೀಕ್ಷೆ ಬಗೆಗಿನ ಗಂಭೀರತೆ ಮತ್ತು ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದಕ್ಕೆ ಈ ಉತ್ತರ ಪತ್ರಿಕೆಗಳು ಸಾಕ್ಷಿ ಎಂಬಂತಿವೆ.
ರಾಜ್ಯಾದ್ಯಂತ ಎಷ್ಟು ಸಿಕ್ಕಿವೆಯೋ
ರಾಜ್ಯಾದ್ಯಂತ ಇಂತಹ ಅದೆಷ್ಟು ಉತ್ತರ ಪತ್ರಿಕೆಗಳು ಮೌಲ್ಯಮಾಪಕರಿಗೆ ಸಿಕ್ಕಿವೆಯೋ? ಒಂದರಿಂದ ಹತ್ತನೇ ತರಗತಿವರೆಗೆ ಹೇಗೋ ತಳ್ಳಿಕೊಂಡು ಬರುವ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವಾಗ ಏನೇನೋ ಬರೆದಿಟ್ಟು ಹೋಗುತ್ತಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ಅಣಕ ಮಾಡುವಂತಿದೆ.