ಮಾ. 14ರಂದು ಬಳ್ಳಾರಿಯಲ್ಲಿ ಆಸ್ಪತ್ರೆಗಳು ಬಂದ್!!
ಮಾ. 4ರಂದು ನಡೆದಿದ್ದ ವಿಮ್ಸ್ ವೈದ್ಯರ ಮೇಲಿನ ದಾಳಿಯನ್ನು ಖಂಡಿಸಿ ಬಂದ್ ಗೆ ಕರೆ. ವಿಮ್ಸ್ ವೈದ್ಯರ ಬಂದ್ ಕರೆಗೆ ಕೈ ಜೋಡಿಸಿರುವ ಕೆಲ ಖಾಸಗಿ ಆಸ್ಪತ್ರೆ ವೈದ್ಯರು.
ಬಳ್ಳಾರಿ, ಮಾರ್ಚ್ 13: ಬಳ್ಳಾರಿಯ ವಿಜಯ ನಗರ ವೈದ್ಯಕೀಯ ಸಂಸ್ಥೆ (ವಿಮ್ಸ್) ಆಸ್ಪತ್ರೆಯಲ್ಲಿ ಇತ್ತೀಚೆಗೆ ಬಾಣಂತಿ ಹಾಗೂ ಮಗು ಸಾವು ಹಿನ್ನೆಲೆಯಲ್ಲಿ ಆಕೆಯ ಸಂಬಂಧಿಗಳು ವಿಮ್ಸ್ ವೈದ್ಯರ ಮೇಲೆ ಮಾಡಿದ್ದ ದಾಳಿಯನ್ನು ಖಂಡಿಸಿ ಮಾರ್ಚ್ 14ರಂದು ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಕೆಲವಾರು ಸರ್ಕಾರಿ ಆಸ್ಪತ್ರೆಗಳು ಬಂದ್ ಘೋಷಿಸಿವೆ. ಇದಕ್ಕೆ ಕೆಲವು ಖಾಸಗಿ ಆಸ್ಪತ್ರೆಗಳೂ ಕೈ ಜೋಡಿಸಿವೆ ಎಂದು ಹೇಳಲಾಗಿದೆ.
ಆದರೆ, ಇನ್ನೂ ಕೆಲವು ಆಸ್ಪತ್ರೆಗಳು ಬಂದ್ ಗೆ ಬೆಂಬಲ ನೀಡಿಲ್ಲವೆಂದು ಹೇಳಲಾಗಿದ್ದು ಅವು ಮಾತ್ರ ಕಾರ್ಯ ನಿರ್ವಹಿಸಲಿವೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ, ಇದೇ ತಿಂಗಳ 4ರಂದು ಸಂಡೂರಿನಿಂದ ಸುಜಾತ (27) ಎಂಬ ಗರ್ಭಿಣಿಯೊಬ್ಬರು ಹೆರಿಗೆಗಾಗಿ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಮಾ. 5ರ ಬೆಳಗಿನ ಜಾವ ತಾಯಿ ಮತ್ತು ಮಗು ನಿಧನ ಹೊಂದಿದ್ದರು.
ಆದರೆ, ಶಿಶುವಿನ ಮೃತದೇಹ ಹಸ್ತಾಂತರ ಮಾಡುವಾಗ ವಿಮ್ಸ್ ಆಸ್ಪತ್ರೆಯ ನಾಲ್ವರು ಸಿಬ್ಬಂದಿಗಳು ಸುಜಾತ ಸಂಬಂಧಿಗಳಿಂದ ಲಂಚ ಪಡೆದಿದ್ದಾರೆಂದು ಆರೋಪಿಸಿ ಸುಜಾತ ಸಂಬಂಧಿಕರು ವಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು.
ಇದಲ್ಲದೆ, ಹೊರ ರೋಗಿಗಳ ವಿಭಾಗ ಸೇರಿದಂತೆ ಹಲವಾರು ವಿಭಾಗಗಳ ಮೇಲೆ ದಾಳಿ ಮಾಡಿ ಕಿಟಕಿಯ ಗಾಜು, ಮೇಜು, ಕುರ್ಚಿಗಳನ್ನು ಧ್ವಂಸಗೊಳಿಸಿದ್ದಲ್ಲದೆ, ಆಸ್ಪತ್ರೆಯಲ್ಲಿ ಕಂಡ ಕಂಡ, ಸುಜಾತ ಪ್ರಕರಣಕ್ಕೆ ಸಂಬಂಧವಿಲ್ಲದ ವೈದ್ಯರನ್ನೂ ಹೊಡೆದಿದ್ದರು. ವೈದ್ಯಕೀಯ ವಿದ್ಯಾರ್ಥಿಗಳೂ ಇವರ ದಾಳಿಗೆ ಸಿಲುಕಿ ಗಾಯಾಳುಗಳಾಗಬೇಕಾಯಿತು.[ಶಿಶು ಶವ ಹಸ್ತಾಂತರಕ್ಕೆ ಲಂಚ: ವಿಮ್ಸ್ ಆಸ್ಪತ್ರೆಯ ನಾಲ್ವರು ನೌಕರರ ವಜಾ]
ದಾಳಿಯ ನಂತರ ಶವವನ್ನು ಆಸ್ಪತ್ರೆಯ ಮುಂಬಾಗಿನಲ್ಲಿಟ್ಟು ಆ ಸಂಬಂಧಿಕರು ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ, ವಿಮ್ಸ್ ನಿರ್ದೇಶಕ ಕೃಷ್ಣಮೂರ್ತಿಯವರು ಲಂಚ ಪಡೆದ ಆರೋಪ ಹೊತ್ತಿದ್ದ ನಾಲ್ವರು ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಿದ್ದರು. ಆನಂತರವಷ್ಟೇ ಪ್ರತಿಭಟನೆ ತಣ್ಣಗಾಗಿತ್ತು.[ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್]
ಆದರೆ, ಈ ಘಟನೆಯಿಂದ ಜರ್ಝರಿತವಾಗಿರುವ ವೈದ್ಯರು, ವೈದ್ಯರಿಗೆ ಆಸ್ಪತ್ರೆಗಳಲ್ಲಿ ರಕ್ಷಣೆಯಿಲ್ಲ ಎಂದು ಕಿಡಿಕಾರಿದ್ದಾರೆ. ವಿಮ್ಸ್ ವೈದ್ಯರ ಮೇಲಾದ ದಾಳಿಯ ವಿರುದ್ಧ ಎಲ್ಲರೂ ಕೈ ಜೋಡಿಸಿರುವ ಬಳ್ಳಾರಿ ವೈದ್ಯರು ಮಾರ್ಚ್ 14ರಂದು ತಮ್ಮ ಸಂಸ್ಥೆಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ.