ಚಿಕ್ಕಮಗಳೂರಿನ ಶತಾಯುಷಿ ಕೆ.ಎಸ್.ಮಲ್ಲೇಗೌಡರಿಗೆ ಅಂತಿಮ ನಮನ
ಚಿಕ್ಕಮಗಳೂರು ಜಿಲ್ಲೆಯ ಶತಾಯುಷಿ, ಮಾಜಿ ರಾಜ್ಯಸಭಾ ಸದಸ್ಯ, ಕೊಡಗಿನ ಮಾಜಿ ಜಿಲ್ಲಾಧಿಕಾರಿಯಾಗಿದ್ದ ಕೆ.ಎಸ್.ಮಲ್ಲೇಗೌಡ ಅವರು ಬೆಂಗಳೂರಿನಲ್ಲಿ ಗುರುವಾರದಂದು ನಿಧನರಾಗಿದ್ದಾರೆ.
ಬೆಂಗಳೂರು/ಚಿಕ್ಕಮಗಳೂರು, ಏಪ್ರಿಲ್ 07: ಚಿಕ್ಕಮಗಳೂರು ಜಿಲ್ಲೆಯ ಶತಾಯುಷಿ, ಮಾಜಿ ರಾಜ್ಯಸಭಾ ಸದಸ್ಯ, ಕೊಡಗಿನ ಮಾಜಿ ಜಿಲ್ಲಾಧಿಕಾರಿಯಾಗಿದ್ದ ಕೆ.ಎಸ್.ಮಲ್ಲೇಗೌಡ ಅವರು ಬೆಂಗಳೂರಿನಲ್ಲಿ ಗುರುವಾರದಂದು ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಚಿಕ್ಕಮಗಳೂರು ಜಿಲ್ಲೆಯ ಶಿವಗಂಗೆ ಎಸ್ಟೇಟ್ ನಲ್ಲಿ ಶುಕ್ರವಾರದಂದು ನೆರವೇರಿಸಲಾಗಿದೆ.
ಮೃತರಿಗೆ ಪುತ್ರ ಶಶಿಧರ್ ಹಾಗೂ ಶರ ತುಳಸೀದಾಸ್, ಸುಧಾ ಬಾಲಕೃಷ್ಣ, ಶೈಲಾ ವೇಣುಗೋಪಾಲ್ ಮತ್ತು ಶಚಿದೇವಿ ಸುಧಾಕರ್ ಪುತ್ರಿಯರಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಶುಕ್ರವಾರ ಮಧ್ಯಾಹ್ನ ನಂತರ ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರು ಬಳಿ ಇರುವ ಶಿವಗಂಗೆ ಕಾಫಿತೋಟದಲ್ಲಿ ನಡೆಸಲಾಗಿದೆ.
ಚಿಕ್ಕಮಗಳೂರಿನ ಕಬ್ಬಿನಹಳ್ಳಿ ಮೂಲದವರಾದ ಮಲ್ಲೇಗೌಡರು, ಜಿಲ್ಲೆಯಿಂದ ಆಯ್ಕೆಯಾದ ಒಕ್ಕಲಿಗ ಜನಾಂಗದ ಮೊಟ್ಟ ಮೊದಲ ಗೆಜೆಟೆಡ್ ಅಧಿಕಾರಿ ಎಂಬ ಕೀರ್ತಿ ಹೊಂದಿದ್ದಾರೆ. ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ, ಕೊಡಗು ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಲೇಖಕರಾಗಿ ಮಲ್ಲೇಗೌಡರು: ಅವರ ಆತ್ಮಕಥನ 'ಹಳ್ಳಿಯಿಂದ ಡೆಲ್ಲಿಗೆ' ಆರ್ಯಭಟ ಸಾಹಿತ್ಯ ಪ್ರಶಸ್ತಿ, 'ಭಾರತ ಎತ್ತ ಸಾಗಿದೆ' ಎಂಬ ಕೃತಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 'ರೂರಲ್ ಪಾವರ್ಟಿ ಫಾರ್ ಪವರ್', 'ಅಧಿಕಾರಕ್ಕೋ ಅಥವಾ ಜನತೆಗಾಗಿಯೋ', 'ವಿದರ್ ರೂರಲ್ ಇಂಡಿಯಾ' ಎಂಬ ಕೃತಿಗಳನ್ನು ಇಂಗ್ಲೀಷ್ ನಲ್ಲಿ ರಚಿಸಿದ್ದಾರೆ. 2000ರಲ್ಲಿ ನಡೆದ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ್ದನ್ನು ಕಟುವಾಗಿ ಟೀಕಿಸಿ ಭಾಷಣ ಮಾಡಿದ್ದರು. ರಾಜಧನ ರದ್ದತಿ ಕಾಯ್ದೆ ತಂದಾಗ ಅದನ್ನು ಪ್ರಬಲವಾಗಿ ವಿರೋಧಿಸಿದ್ದರು.