ಇಂದಿನ ಸ್ಥಿತಿಗೆ ವೀರಶೈವರಲ್ಲಿನ ಅವಿವೇಕವೇ ಕಾರಣ: ಚಿದಾನಂದ ಮೂರ್ತಿ
ಬೆಂಗಳೂರು, ಜುಲೈ 26: 'ಇಂದಿನ ಸ್ಥಿತಿಗೆ ವೀರಶೈವರಲ್ಲಿನ ಅವಿವೇಕವೇ ಕಾರಣ. ವೀರಶೈವ ಲಿಂಗಾಯತ ಅನ್ನೋದು ಒಂದೇ. ಹಿಂದೂ ಧರ್ಮದ ಒಂದು ಭಾಗ. ಈಗ ಪ್ರತ್ಯೇಕ ಧರ್ಮ ಸ್ಥಾನಮಾನಕ್ಕೆ ಒತ್ತಾಯಿಸುತ್ತಿರುವುದು ಮೂರ್ಖತನದ ಕೆಲಸ' ಎಂದು ಸಂಶೋಧಕರಾದ ಚಿದಾನಂದ ಮೂರ್ತಿಯವರು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟದ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು. 'ಹುಟ್ಟಿನಿಂದ ಶೈವ ಬ್ರಾಹ್ಮಣನಾಗಿದ್ದ ನಾನು, ಭಕ್ತಿ ಮಾರ್ಗಕ್ಕೆ ಮನಸೋತು ವೀರಶೈವನಾದೆ' ಎಂದು ಬಸವಣ್ಣ ಹೇಳುತ್ತಾನೆ.
ಲಿಂಗಾಯತ ಧರ್ಮ ವಿವಾದ : ಎಸ್ಎಲ್ ಭೈರಪ್ಪ ಸಂದರ್ಶನ
ಅಂದಹಾಗೆ ಶಿವನಿಗೆ ವೀರ ನಿಷ್ಠೆ ಹೊಂದಿರುವವನು ವೀರಶೈವ. ಮೈಮೇಲೆ ಲಿಂಗ ಧರಿಸಿದವ ಲಿಂಗಾಯತ ಎಂಬುದು ಆ ಎರಡು ಪದಗಳ ವಿವರಣೆ ಎಂದು ಅವರು ಹೇಳಿದರು.
ಚುನಾವಣಾ ಕಾಲದಲ್ಲಿ ಏನಿದು ಲಿಂಗಾಯಿತ ಸಮುದಾಯ ಇಬ್ಬಾಗದ ಕೂಗು?
ಹಿರಿಯ ಸಂಶೋಧಕರು ಹಾಗೂ ಪ್ರಾಜ್ಞರಾದ ಚಿದಾನಂದ ಮೂರ್ತಿ ಅವರು ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದ ಬಗ್ಗೆ ಒನ್ಇಂಡಿಯಾ ಕನ್ನಡಕ್ಕೆ ಸಂದರ್ಶನ ನೀಡಿದ್ದಾರೆ. ಕೆಲವು ಉದಾಹರಣೆಯ ಸಹಿತ ವೀರಶೈವ ಲಿಂಗಾಯತ ಎಂಬುದು ಹೇಗೆ ಹಿಂದೂ ಧರ್ಮದ ಭಾಗ ಎಂಬುದನ್ನು ಕೂಡ ತಿಳಿಸಿದ್ದಾರೆ. ಪ್ರಶ್ನೋತ್ತರಗಳಿಗೆ ಮುಂದೆ ಓದಿ.
ಪ್ರಶ್ನೆ: ಲಿಂಗಾಯತ-ವೀರಶೈವ ಈ ಪದಗಳ ಬಳಕೆ ಮೊದಲಿಗೆ ಎಲ್ಲಿ ಕಂಡುಬರುತ್ತದೆ?
ಉತ್ತರ: ಕ್ರಿಸ್ತಶಕ 1100ರಲ್ಲಿ ಅಂದರೆ ಬಸವಣ್ಣನ ಕಾಲಘಟ್ಟದ 60 ವರ್ಷಗಳ ಹಿಂದೆಯೇ ಚಾಲುಕ್ಯರ ಮಂತ್ರಿ ಕೊಂಡಗುಳಿ ಕೇಶಿರಾಜನ ಕಂದಪದ್ಯದಲ್ಲಿ ಈ ಪದಗಳು ಕಂಡುಬರುತ್ತವೆ.
ಆತ ವಚನಗಳನ್ನೇನೂ ಬರೆದಿಲ್ಲ. ಆದರೆ ಆತನ ಕಂದಪದ್ಯಗಳಲ್ಲಿ ಈ ಪದಗಳು ಕಂಡುಬರುತ್ತವೆ.
ಪ್ರಶ್ನೆ: ಆದರೆ, ನೀವು ಮಾತನಾಡುವಾಗಲೂ ವೀರಶೈವ ಲಿಂಗಾಯತ ಧರ್ಮ ಎಂದು ಬಳಸಿದರಲ್ಲಾ?
ಉತ್ತರ: ಇಲ್ಲಿ ಧರ್ಮ ಎಂಬುದಕ್ಕೆ ಉದಾತ್ತವಾದ ಅರ್ಥ ಇದೆ. ರಾಜಧರ್ಮ, ಕ್ಷತ್ರಿಯ ಧರ್ಮ, ಗೃಹಸ್ಥ ಧರ್ಮ ಅಂತೆಲ್ಲ ಇರುವ ಹಾಗೆ ನಾನು ಧರ್ಮ ಎಂದರ್ಥದಲ್ಲಿ ಬಳಸಿದ್ದೇನೆ.
ಬದುಕುವ ಕ್ರಮ ಅಥವಾ ಬದುಕಲು ಅನುಸರಿಸಬೇಕಾದ ಕ್ರಮವನ್ನು ಧರ್ಮ ಅಂತ ಬಳಸಿದ್ದೇನೆ.
ಪ್ರಶ್ನೆ: ಲಿಂಗಾಯತರಲ್ಲೇ ಕೆಲವರು ಬಸವಣ್ಣನನ್ನು ಒಪ್ಪುವುದಿಲ್ಲ ಅನ್ನೋ ಮಾತುಗಳನ್ನು ಸಚಿವರಾದ ಎಂ.ಬಿ.ಪಾಟೀಲ್ ಆಡಿದ್ದಾರಲ್ಲಾ?
ಉತ್ತರ: ಹದಿನಾರನೇ ಶತಮಾನದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಎಂಬಾತ ಕ್ರಿಶ್ಚಿಯನ್ನರಲ್ಲಿ ಪ್ರೊಟಿಸ್ಟೆಂಟ್ ಎಂದು ಆರಂಭಿಸಿದ. ಅಂದರೆ ಅದು ಧರ್ಮದ ಒಳಗೆ ಹುಟ್ಟಿಕೊಂಡ ಚಳವಳಿ. ಅಲ್ಲಿಂದ ಬದಲಾವಣೆ ಆಯಿತು.
ಬಸವಣ್ಣ ಕೂಡ ಅಂಥದೇ ಬದಲಾವಣೆಯನ್ನು ವೀರಶೈವ ಲಿಂಗಾಯತರಲ್ಲಿ ತಂದ. ಅದು ಆ ವರೆಗಿನ ವ್ಯವಸ್ಥೆ ವಿರುದ್ಧದ ಧ್ವನಿ. ಬಸವಣ್ಣನವರನ್ನು ಲಿಂಗಾಯತರು ಯಾರೂ ವಿರೋಧಿಸಲ್ಲ.
ಪ್ರಶ್ನೆ: ಒಂದು ವೇಳೆ ಲಿಂಗಾಯತ ಸ್ವತಂತ್ರ ಧರ್ಮ ಎಂದು ಕೇಂದ್ರ ಸರಕಾರ ಘೋಷಣೆ ಮಾಡಿದರೆ ಮುಂದೇನು?
ಉತ್ತರ: ಅದು ಅಷ್ಟು ಸಲೀಸಲ್ಲ. ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಸಂಸತ್ ನ ಎರಡೂ ಸದನಗಳಲ್ಲಿ ಒಪ್ಪಿಗೆ ಸಿಕ್ಕಿ ತಿದ್ದುಪಡಿ ತರಬೇಕು. ಅದು ಅಷ್ಟು ಸುಲಭವಲ್ಲ.
ಪ್ರಶ್ನೆ: ವೀರಶೈವ ಲಿಂಗಾಯತ ಅನ್ನೋದು ಹಿಂದೂ ಧರ್ಮದ ಭಾಗವೇ ಅನ್ನೋದಿಕ್ಕೆ ಇನ್ನಷ್ಟು ಪುರಾವೆ ಹೇಳ್ತೀರಾ?
ಉತ್ತರ: ವೀರಶೈವ ಮಠಗಳಲ್ಲಿ ಈಗಲೂ ವೇದ ಪಾಠಶಾಲೆಗಳಿವೆ. ಸಿದ್ದಗಂಗಾ ಮಠದಲ್ಲಿ ಪ್ರತಿ ಸಾಯಂಕಾಲ ವೇದ ಘೋಷ ನಡೆಯುತ್ತದೆ. ಮಕ್ಕಳಿಗೆ ಭಗವದ್ಗೀತೆ ಕಂಠ ಪಾಠ ಮಾಡಿಸಲಾಗುತ್ತದೆ. ಇನ್ನೂ ಸಾಕ್ಷ್ಯಗಳು ಬೇಕಾ?
ಪ್ರಶ್ನೆ: ಈ ಹಿಂದೆ ಧಾರವಾಡದಲ್ಲಿ ನಡೆದ ಸಮಾವೇಶದಲ್ಲಿ ವೀರಶೈವ ಲಿಂಗಾಯತರು ಹಿಂದೂ ಧರ್ಮದ ಭಾಗ ಎಂದು ಒಪ್ಪಿದ್ದರಂತಲ್ಲ?
ಉತ್ತರ: ಅಖಿಲ ಭಾರತ ವೀರಶೈವ ಮಹಾಧಿವೇಶನ 1904ರಲ್ಲಿ ಧಾರವಾಡದಲ್ಲಿ ನಡೆಯಿತು. ಆಗಮ-ಉಪನಿಷತ್ ಆಧಾರದ ವೀರಶೈವ ಲಿಂಗಾಯತರು ಎಂದು ಆಗ ಕರೆಯಲಾಯಿತು. ಈ ಆಗಮ- ಉಪನಿಷತ್ ಇವೆಲ್ಲ ಹಿಂದೂ ಧರ್ಮದ್ದೇ ಅಲ್ಲವೆ?