ಟಿಪ್ಪು ಜಯಂತಿ: ಸರಕಾರದ ಮುಖ್ಯ ಕಾರ್ಯದರ್ಶಿ ನಿರ್ಧರಿಸಲಿ, ಹೈಕೋರ್ಟ್
ಟಿಪ್ಪು ಜಯಂತಿ ಆಚರಣೆ ಸಂಬಂಧ ಎದ್ದಿರುವ ಪರ ವಿರೋಧ ಕೂಗಿಗೆ ರಾಜ್ಯ ಉಚ್ಚ ನ್ಯಾಯಾಲಯ ಸದ್ಯದ ಮಟ್ಟಿಗೆ ವಿರಾಮ ಹಾಕಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಈ ಬಗ್ಗೆ ನಿರ್ಧರಿಸಲಿ ಎಂದು ಕೋರ್ಟ್ ತೀರ್ಪು ನೀಡಿದೆ.
ಬೆಂಗಳೂರು, ನ 4:ಟಿಪ್ಪು ಜಯಂತಿ ಆಚರಣೆ ಸಂಬಂಧ ಎದ್ದಿರುವ ಪರ ವಿರೋಧ ಕೂಗಿಗೆ ರಾಜ್ಯ ಉಚ್ಚ ನ್ಯಾಯಾಲಯ ಸದ್ಯದ ಮಟ್ಟಿಗೆ ವಿರಾಮ ಹಾಕಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಈ ಬಗ್ಗೆ ನಿರ್ಧರಿಸಲಿ ಎಂದು ಕೋರ್ಟ್ ಗುರುವಾರ (ನ 3) ತೀರ್ಪು ನೀಡಿದೆ.
ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಿಸದಂತೆ ಸರಕಾರಕ್ಕೆ ಆದೇಶ ನೀಡಬೇಕೆಂದು ಮಂಜುನಾಥ್ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಶಕ್ತಿ ಅರ್ಜಿಯ ವಿಚಾರಣೆಯ ವೇಳೆ ಸಿಜೆ ನ್ಯಾ. ಎಸ್ ಕೆ ಮುಖರ್ಜಿ ಮತ್ತು ನ್ಯಾ. ಬೂದಿಹಾಳ್ ಅವರ ನ್ಯಾಯಪೀಠ ಈ ತೀರ್ಪು ನೀಡಿದೆ. (ಕೊಡಗು, ಪೊಲೀಸ್ ಭದ್ರತೆಯಲ್ಲಿ ಟಿಪ್ಪು ಜಯಂತಿ)
ಟಿಪ್ಪು ಸುಲ್ತಾನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರನೇ, ಟಿಪ್ಪು ಜಯಂತಿ ಏಕೆ ಎಂದು ಬುಧವಾರ (ನ 2) ಪ್ರಶ್ನಿಸಿದ್ದ ಹೈಕೋರ್ಟಿಗೆ ವ್ಯಂಗ್ಯವಾಗಿ ತಿರುಗೇಟು ನೀಡಿರುವ ಕಾಂಗ್ರೆಸ್ ಮುಖಂಡ, ಮುಖ್ಯ ನ್ಯಾಯಮೂರ್ತಿಗಳಿಗೆ ಇತಿಹಾಸದ ಪುಸ್ತಕ ಕಳುಹಿಸಿ ಕೊಡುತ್ತೇನೆ, ಟಿಪ್ಪು ಇಲ್ಲದಿದ್ದರೆ ಹಿಂದೂ ದೇವಾಲಯಗಳು ಜೀರ್ಣೋದ್ದಾರ ಆಗುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಮುಖ್ಯ ಕಾರ್ಯದರ್ಶಿಯ ಬಳಿ ನವೆಂಬರ್ ನಾಲ್ಕರಂದು ಆಕ್ಷೇಪಣಾ ಅರ್ಜಿ ಸಲ್ಲಿಸಿ, ಅಲ್ಲಿಂದ ನಿಮಗೆ ಸೂಕ್ತ ಉತ್ತರ ಬರದಿದ್ದಲ್ಲಿ ಮತ್ತೆ ನಮ್ಮ ಬಳಿ ಬನ್ನಿ ಎಂದು ಕೋರ್ಟ್ ಸೂಚಿಸಿ, ಸಿಎಸ್ ಅವರಿಗೆ ನವೆಂಬರ್ ಎಂಟರೊಳಗೆ ಸರಕಾರದ ಅಂತಿಮ ನಿರ್ಧಾರ ಪ್ರಕಟಿಸಿ ಎಂದು ಆದೇಶ ನೀಡಿದೆ.
ಟಿಪ್ಪು ಜಯಂತಿ ನಾವೇ ಆಚರಿಸಿಕೊಳ್ಳುತ್ತೇವೆ, ದಯವಿಟ್ಟು ಸರಕಾರದ ವತಿಯಿಂದ ಈ ಜಯಂತಿ ಆಚರಣೆ ಬೇಡ ಎಂದು ಟಿಪ್ಪು ಸುಲ್ತಾನ್ ವೇದಿಕೆಯ ಮುಖಂಡರು ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆಯುವ ಮೂಲಕ ಸರಕಾರವನ್ನು ಮುಜುಗರಕ್ಕೀಡು ಮಾಡಿದ್ದಾರೆ.
ಟಿಪ್ಪು ಜಯಂತಿ ಆಚರಣೆ, ಬಾಲ್ ಮತ್ತೆ ಸಿದ್ದರಾಮಯ್ಯ ಅಂಗಣದಲ್ಲಿ. ಮುಂದೆ ಓದಿ..
ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನೇ?
ತನ್ನ ಸಾಮ್ರಾಜ್ಯ ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ದ ಹೋರಾಡಿದರೆ, ಅಂತವರನ್ನು ಸ್ವಾತಂತ್ರ್ಯ ಹೋರಾಟಗಾರ ಎನ್ನಲು ಸಾಧ್ಯವೇ? ಸುಮಾರು ಐದು ದಶಕಗಳಿಂದ ನಡೆಸದ ಟಿಪ್ಪು ಜಯಂತಿಯ ಬಗ್ಗೆ ನಿಮಗ್ಯಾಕೆ ಈಗ ಆಸಕ್ತಿ, ಇದರಿಂದ ರಾಜ್ಯಕ್ಕಾಗುವ ಲಾಭವೇನು ಎಂದು ಹೈಕೋರ್ಟ್ ಸರಕಾರವನ್ನು ಖಾರವಾಗಿ ಪ್ರಶ್ನಿಸಿತ್ತು.
ರಿಜ್ವಾನ್ ಅರ್ಷದ್
ಕಾಂಗ್ರೆಸ್ ಯುವ ಮುಖಂಡ ರಿಜ್ವಾನ್ ಅರ್ಷದ್ ಟಿಪ್ಪು ಜಯಂತಿ ಆಚರಣೆ ಸಂಬಂಧವಿರುವ ವಿರೋಧದ ಬಗ್ಗೆ ಪ್ರತಿಕ್ರಿಯಿಸುತ್ತಾ, ಬಿಜೆಪಿ ಮತ್ತು ಸಂಘ ಪರಿವಾರದವರಿಗೆ ಮಾಡಲು ಬೇರೆ ಕೆಲಸವಿಲ್ಲ. ಟಿಪ್ಪು ಹಿಂದೂ ವಿರೋಧಿಯಾಗಿದ್ದರೆ, ಆ ಕಾಲದಲ್ಲಿ ದೇವಾಲಯಗಳು ಜೀರ್ಣೋದ್ಧಾರವಾಗುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.
ಇತಿಹಾಸದ ಪುಸ್ತಕ ಕಳುಹಿಸುತ್ತೇನೆ
ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ನಮ್ಮ ರಾಜ್ಯದ ಇತಿಹಾಸದ ಬಗ್ಗೆ ತಿಳಿದಂತಿಲ್ಲ. ಅದಕ್ಕಾಗಿ ನಮ್ಮ ಘನ ಇತಿಹಾಸದ ಪುಸ್ತಕಗಳನ್ನು ಅವರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ - ರಿಜ್ವಾನ್ ಅರ್ಷದ್.
ಟಿಪ್ಪು ಸುಲ್ತಾನ್ ವೇದಿಕೆ
ಟಿಪ್ಪು ಜಯಂತಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬೇಡಿ. ನಿಮ್ಮ ರಾಜಕೀಯದಾಟಕ್ಕೆ ಟಿಪ್ಪು ಹೆಸರನ್ನು ಬಳಸಬೇಡಿ, ನಿಮಗೆ ಮುಸ್ಲಿಮರು ಎಂದರೆ ವೋಟ್ ಬ್ಯಾಂಕ್ ಆಗಿದೆ. ಟಿಪ್ಪು ಅಭಿಮಾನಿಗಳಲ್ಲಿ ಎಲ್ಲಾ ಕೋಮಿನವರಿದ್ದಾರೆ. ಟಿಪ್ಪು ಜಯಂತಿಯನ್ನು ನಾವೇ ಆಚರಿಸಿಕೊಳ್ಳುತ್ತೇವೆ - ಟಿಪ್ಪು ಸುಲ್ತಾನ್ ವೇದಿಕೆ ಮುಖ್ಯಸ್ಥ ಮುಸ್ತಫಾ. (ಚಿತ್ರ: ಪಬ್ಲಿಕ್ ಟಿವಿ)
ಅರ್ಜಿದಾರರ ಪರ ವಾದ
ಪಿಐಎಲ್ ಸಲ್ಲಿಸಿದ್ದ ಮಂಜುನಾಥ್ ಪರ ವಾದ ಮಾಡುತ್ತಿದ್ದ ಪೂವಯ್ಯ, ಟಿಪ್ಪು ಸುಲ್ತಾನ್ ಒಬ್ಬ ನರಹಂತಕ, ಮತಾಂತರಿ, ಸರಕಾರ ಒಂದು ಸಮುದಾಯದ ಮತಬ್ಯಾಂಕಿಗಾಗಿ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದೆ. ಇದೊಂದು ಕಾನೂನು ಬಾಹಿರ ನಿರ್ಧಾರ, ನ್ಯಾಯಾಲಯ ಇದಕ್ಕೆ ಅನುಮತಿ ನೀಡಬಾರದೆಂದು ವಾದಿಸಿದರು.
ವಿಚಾರಣೆ ಮುಂದೂಡಿಕೆ
ಟಿಪ್ಪು ಒಬ್ಬ ಸ್ವಾತ್ರಂತ್ರ್ಯ ಹೋರಾಟಗಾರ ಎನ್ನುವುದರ ಬಗ್ಗೆ ಇತಿಹಾಸಕಾರರು ನಿರ್ಧರಿಸಲಿ. ನಿಮ್ಮ ಆಕ್ಷೇಪಣೆಯನ್ನು ಮುಖ್ಯ ಕಾರ್ಯದರ್ಶಿವರಿಗೆ ಸಲ್ಲಿಸಿ, ಎಂದು ವಿಭಾಗೀಯ ಪೀಠ ಮುಂದಿನ ವಿಚಾರಣೆಯನ್ನು ನವೆಂಬರ್ 8ಕ್ಕೆ ಮುಂದೂಡಿದೆ.