ಯಡಿಯೂರಪ್ಪಗೆ ರಿಲೀಫ್ ನೀಡಿದ 5 ಪ್ರಕರಣಗಳು ಯಾವುವು?
ಬೆಂಗಳೂರು, ನವೆಂಬರ್ 25 : ಮಾಜಿ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಸಂಸದ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಐದು ಅಕ್ರಮ ಡಿ-ನೋಟಿಫಿಕೇಷನ್ ಪ್ರಕರಣಗಳಲ್ಲಿ ಹಿಂದಿನ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ನೀಡಿದ್ದ ಪೂರ್ವಾನುಮತಿಯನ್ನು ಕೋರ್ಟ್ ರದ್ದುಪಡಿಸಿದೆ.
2010ರ ಜನವರಿ 22 ಮತ್ತು 24ರಂದು ಸಿರಾಜಿನ್ ಬಾಷಾ ಅವರು 5 ಪ್ರತ್ಯೇಕ ಖಾಸಗಿ ದೂರುಗಳನ್ನು ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 2011ರಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಯಡಿಯೂರಪ್ಪ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದರು. [ಯಡಿಯೂರಪ್ಪಗೆ ಬಿಗ್ ರಿಲೀಫ್]
ತಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಯಡಿಯೂರಪ್ಪ ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾ.ವಿನೀತ್ ಸರಣ್ ಅವರಿದ್ದ ಪೀಠ ರಾಜ್ಯಪಾಲರು ನೀಡಿರುವ ಪೂರ್ವಾನುಮತಿ ಕಾನೂನು ಬಾಹಿರವಾಗಿದೆ ಎಂದು ಹೇಳಿದೆ. [ಯಡಿಯೂರಪ್ಪ ವಿರುದ್ಧ ತನಿಖೆ, ಸುಪ್ರೀಂ ಮೆಟ್ಟಿಲೇರಿದ ಸರ್ಕಾರ]
ಹಾಗಾದರೆ ಯಡಿಯೂರಪ್ಪ ಅವರ ವಿರುದ್ಧದ ಆರೋಪಗಳೇನು?, ಯಾರು-ಯಾರು ಆರೋಪಿಗಳಾಗಿದ್ದರು? ಮುಂತಾದ ವಿವರಗಳು ಚಿತ್ರಗಳಲ್ಲಿವೆ ನೋಡಿ.....
ಬಿಎಸ್ವೈ ವಿರುದ್ಧದದ ಮೊದಲ ದೂರು
ಯಡಿಯೂರಪ್ಪ ಅವರ ವಿರುದ್ಧದ ಮೊದಲ ದೂರಿನಲ್ಲಿ ರಾಚೇನಹಳ್ಳಿಯಲ್ಲಿ ಕುಟುಂಬ ಸದಸ್ಯರಿಗೆ 1 ಎಕರೆ 2 ಗುಂಟೆ ಭೂಮಿ ಡಿನೋಟಿಫಿಕೇಷನ್ ಮಾಡಿಕೊಟ್ಟ ಆರೋಪವಿತ್ತು. ಸರ್ವೆ ನಂ 56ರಲ್ಲಿನ 16 ಗುಂಟೆ ಜಾಗವನ್ನು ಕುಟುಂಬದ ಸದಸ್ಯರ ಒಡೆತನದ ಧವಳಗಿರಿ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ಗೆ ವರ್ಗಾವಣೆ ಮಾಡಲಾಗಿದೆ. ವೈಯಾಲಿಕಾವಲ್ ಸೊಸೈಟಿಗೆ ಸೇರಿದ್ದ ಜಾಗವನ್ನು ರಸ್ತೆಗೆ ಎಂದು ನೋಟಿಫೈ ಮಾಡಿ ಅದರಲ್ಲಿ 47,972 ಚದರ ಅಡಿ ಜಾಗ ಡಿನೋಟಿಫಿಕೇಷನ್ ಮಾಡಿ ಧವಳಗಿರಿ ಪ್ರಾಪರ್ಟೀಸ್ ಗೆ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವಿತ್ತು. ಯಡಿಯೂರಪ್ಪ, ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ. ಆರ್.ಎನ್, ಸೋಹನ್ ಕುಮಾರ್ ಮುಂತಾದವರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.
ಎರಡನೇ ದೂರಿನ ವಿವರಗಳು ಹೀಗಿವೆ
ಯಡಿಯೂರಪ್ಪ ಅವರ ವಿರುದ್ಧ 2ನೇ ದೂರಿನಲ್ಲಿ ಅರಕೆರೆಯಲ್ಲಿ 2.5 ಎಕರೆಗೆ ಭೂಮಿಯನ್ನು ಬೇನಾಮಿ ಹೆಸರಿಗೆ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿಕೊಟ್ಟಿರುವುದು, ದೇವರಚಿಕ್ಕನಹಳ್ಳಿಯಲ್ಲಿ ಕೆ.ಮಂಜುನಾಥ್ ಅವರಿಗೆ 1.7 ಎಕರೆ ಡಿ ನೋಟಿಫಿಕೇಷನ್ ಮಾಡಿಕೊಟ್ಟಿರುವುದು, ಗೆದ್ದಲಹಳ್ಳಿಯಲ್ಲಿ ಮಂಜುನಾಥ್ ಮತ್ತು ಕೆ.ಶಿವಪ್ಪ ಎನ್ನುವವರಿಗೆ 4 ಎಕರೆ ಅಕ್ರಮವಾಗಿ ಡಿ ನೋಟಿಫಿಫೈ ಮಾಡಿಕೊಟ್ಟಿರುವುದು ಸೇರಿದಂತೆ ಇತರ ಆರೋಪಗಳಿದ್ದವು. ಈ ಪ್ರಕರಣಗಳಲ್ಲಿ ಬಿಎಸ್ವೈ, ಎನ್.ಅಕ್ಕಮಹಾದೇವಿ, ಎನ್.ಎಸ್.ಮಹಾಬಲೇಶ್ವರ, ಸತ್ಯಕುಮಾರಿ, ಮೋಹನ ರಾಜ್ ಮುಂತಾದವರು ಆರೋಪಿಗಳು.
3ನೇ ದೂರಿನ ವಿವರಗಳು
ರಾಚೇನಹಳ್ಳಿಯಲ್ಲಿ 9 ಎಕರೆ ಜಮೀನನ್ನು ಬೇನಾಮಿ ಹೆಸರಿನಲ್ಲಿ ಅಕ್ರಮವಾಗಿ ಡಿ ನೋಟಿಫೈ ಮಾಡಲಾಗಿದೆ. ಉತ್ತರಹಳ್ಳಿಯಲ್ಲಿ ಹೇಮಚಂದ್ರ ಸಾಗರ್ ಹೆಸರಿಗೆ 10 ಎಕರೆಗೆ ಅಕ್ರಮವಾಗಿ ಡಿ ನೋಟಿಫೈ ಮಾಡಿಕೊಡಲಾಗಿದೆ. ಈ ಪ್ರಕರಣದಲ್ಲಿ ಯಡಿಯೂರಪ್ಪ, ಪ್ರವೀಣ್ ಚಂದ್ರ, ಎಸ್.ಎಸ್.ಉಗೇಂದ್ರ, ನಮ್ರತಾ ಶಿಲ್ಪಿ, ಆರ್.ಸುಗುಣಾ, ಹೇಮಚಂದ್ರ ಸಾಗರ್ ಮುಂತಾದವರು ಆರೋಪಿಗಳು.
4ನೇ ದೂರಿನ ವಿವರಗಳು
ಪ್ರಕಾಶ್ ಶೆಟ್ಟಿ ಎಂಬುವವರಿಗೆ ನಗರದ ವಿವಿಧೆಡೆ 3.35 ಎಕರೆ ಭೂಮಿ ಅಕ್ರಮವಾಗಿ ಡಿ ನೋಟಿಫೈ ಮಾಡಿಕೊಟ್ಟಿರುವುದು. ಶ್ರೀರಾಂಪುರದಲ್ಲಿ ಡಾ.ಬಿ.ಆರ್.ಶೆಟ್ಟಿಗೆ 11.25 ಎಕರೆ ಅಕ್ರಮವಾಗಿ ಡಿನೋಟಿಫೈ ಮಾಡಿಕೊಟ್ಟಿರುವುದು. ಈ ಪ್ರಕರಣದಲ್ಲಿ ಬಿಎಸ್ವೈ, ಧವಳಗಿರಿ ಪ್ರಾಪರ್ಟೀಸ್, ಆದರ್ಶ ಡೆವಲಪರ್ಸ್, ಕರುಣೇಶ್ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು.
5ನೇ ದೂರಿನ ವಿವರಗಳು
ಹೈಕೋರ್ಟ್ ತೀರ್ಪಿನ ವಿರುದ್ಧವಾಗಿ ನಾಗರಭಾವಿಯಲ್ಲಿ 5.13 ಎಕರೆ ಅಕ್ರಮ ಡಿ ನೋಟಿಫೀಕೇಷನ್, ಸಂಸದರಾಗಿದ್ದ ಬಿ.ವೈ.ರಾಘವೇಂದ್ರ ಹಾಗೂ ಶಾಸಕಿಯಾಗಿದ್ದ ಭಾರತಿ ಶೆಟ್ಟಿ ಅವರಿಗೆ ಆರ್.ಎಂ.ವಿ. ಲೇಔಟ್ ನಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ, ಟೆಲಿಕಾಂ ನೌಕರರಿಗೆ ಜಮೀನು ಪರಿವರ್ತನೆ ಮಾಡಿಕೊಡುವ ಮೂಲಕ ಅಕ್ರಮ ಡಿನೋಟಿಫಿಕೇಷನ್ ಮಾಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ 100 ಕೋಟಿ ನಷ್ಟ ಉಂಟು ಮಾಡಿರುವುದು. ಈ ಪ್ರಕರಣದಲ್ಲಿ ಬಿಎಸ್ವೈ, ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಆರ್.ಎನ್.ಸೋಹನ್ಕುಮಾರ್, ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಮುಂತಾದವರು ಆರೋಪಿಗಳಾಗಿದ್ದಾರೆ.