ಡೊನೇಷನ್ ಗೇಟ್: ಪತ್ರಕರ್ತ ಹಮೀದ್ ಪಾಳ್ಯ ಪಿಐಎಲ್ ತಿರಸ್ಕರಿಸಿದ ಹೈಕೋರ್ಟ್
ಹೈಕೋರ್ಟ್ ನಿರ್ದೇಶನದ ಮೇಲೆ ಎಸ್ಐಟಿ ರಚಿಸಿ ‘ಡೊನೇಷನ್ ಗೇಟ್’ ಹಗರಣದ ತನಿಖೆ ನಡೆಸುವಂತೆ ಕೋರಿ ಪತ್ರಕರ್ತ ಹಮೀದ್ ಪಾಳ್ಯ ಸಲ್ಲಿಸಿದ್ದ ಪಿಐಎಲ್ ಅನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.
ಬೆಂಗಳೂರು, ಮಾರ್ಚ್ 6: ಹೈಕೋರ್ಟ್ ನಿರ್ದೇಶನದ ಮೇಲೆ ಎಸ್ಐಟಿ ರಚಿಸಿ 'ಡೊನೇಷನ್ ಗೇಟ್' ಹಗರಣದ ತನಿಖೆ ನಡೆಸುವಂತೆ ಕೋರಿ ಪತ್ರಕರ್ತ ಹಮೀದ್ ಪಾಳ್ಯ ಸಲ್ಲಿಸಿದ್ದ ಪಿಐಎಲ್ ಅನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.
'ಕಾಂಗ್ರೆಸ್ ಹೈಕಮಾಂಡಿಗೆ ಕಪ್ಪ ನೀಡಿದ ವಿವರಗಳು ಶಾಸಕ ಗೋವಿಂದರಾಜು ಡೈರಿಯಲ್ಲಿ ಉಲ್ಲೇಖವಾಗಿವೆ,' ಎಂಬ ಪ್ರಕರಣದಲ್ಲಿ ವಿಶೇಷ ತನಿಖಾ ದಳದಿಂದ ತನಿಖೆ ನಡೆಸುವಂತೆ ಕೋರಿ ಹಮೀದ್ ಪಾಳ್ಯ ಹೈಕೋರ್ಟಿಗೆ ಪಿಐಎಲ್ ಸಲ್ಲಿಸಿದ್ದರು.[ಡೈರಿ 2, ಕೇಸು 7; ಇದು ಬಿಜೆಪಿ-ಕಾಂಗ್ರೆಸ್ 'ಡೊನೇಷನ್ ಗೇಟ್' ಹೈಡ್ರಾಮಾ]
"ಡೈರಿ ತನಿಖೆಯನ್ನು ಎಸಿಬಿ, ಲೋಕಾಯುಕ್ತ ಮೊದಲಾದ ಸಂಸ್ಥೆಗಳಿಂದ ಮಾಡಲು ಬಿಜೆಪಿ ಆಕ್ಷೇಪ ವ್ಯಕ್ತಪಡಿಸುತ್ತದೆ. ಇದೆಲ್ಲಾ ರಾಜ್ಯ ಸರಕಾರದ ಅಧೀನದಲ್ಲಿ ಬರುತ್ತದೆ ಎಂದು ಅದು ಹೇಳುತ್ತವೆ. ಇದೇ ವೇಳೆ ಇಡಿ, ಐಟಿ, ಸಿಬಿಐ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಇದೆಲ್ಲಾ ಕೇಂದ್ರ ಸರಕಾರದ ಅಧೀನದಲ್ಲಿ ಬರುತ್ತವೆ ಎಂದು ಕಾಂಗ್ರೆಸ್ ಹೇಳುತ್ತದೆ. ಅದಕ್ಕಾಗಿ ನಾನು ಹೈಕೋರ್ಟಿಗೆ 'ಎಸ್ಐಟಿ' ತನಿಖೆಗೆ ಕೋರಿ ಪಿಐಎಲ್ ಸಲ್ಲಿಸಿದ್ದೆ," ಎನ್ನುತ್ತಾರೆ ರಾಜ್ ನ್ಯೂಸ್ ಸಂಪಾದಕ ಹಮೀದ್ ಪಾಳ್ಯ.
"ನಾನೂ ಪತ್ರಕರ್ತನಾಗಿ, ನಾವೆಲ್ಲಾ ದಿನಾ ಸುದ್ದಿ ಮಾಡುತ್ತೇವೆ ಎಲ್ಲ ಸರಿ. ಆದರೆ ಅಷ್ಟು ಹಣ ಎಲ್ಲಿಂದ ಬಂತು ಎಂಬುದು ತನಿಖೆಯಾಗಬೇಕಾಗಲ್ವಾ?," ಎಂದು ಪ್ರಶ್ನಿಸುತ್ತಾರೆ ಅವರು.[ಡೊನೇಷನ್ ಗೇಟ್: ದಿನೇಶ್ ಗುಂಡೂರಾವ್ ವಿರುದ್ಧ ಎಫ್ಐಆರ್]
ಈ ದೇಶದಲ್ಲಿ ಕೋರ್ಟ್ ನಿರ್ದೇಶನದ ಮೇಲೆ ತನಿಖೆಯಾದ 2ಜಿ ಹಗರಣ, ಕಾಮನ್ ವೆಲ್ತ್ ಹಗರಣ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ನ್ಯಾಯ ಸಿಕ್ಕಿದೆ. ಈ ಕಾರಣಕ್ಕೆ ನಾನು ಕೋರ್ಟ್ ನಿರ್ದೇಶನದ ಮೇಲೆ ತನಿಖೆಗೆ ಕೇಳಿದ್ದೆ ಎನ್ನುತ್ತಾರೆ ಹಮೀದ್ ಪಾಳ್ಯ.
ಆದರೆ ಹಮೀದ್ ಪಾಳ್ಯ ಅರ್ಜಿಗೆ ಎಎಜಿ ಪೊನ್ನಣ್ಣ ಕೋರ್ಟಿನಲ್ಲಿ ಆಕ್ಷೇಪಿಸಿದ್ದರು. "ಸಹಾರಾ ಡೈರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರೇ ಇತ್ತು. ಹೀಗಿದ್ದೂ ತನಿಖೆಗೆ ಸುಪ್ರಿಂ ಕೋರ್ಟ್ ಒಪ್ಪಿಕೊಂಡಿಲ್ಲ. ಹಾಗಾಗಿ ಎಸ್ಐಟಿ ತನಿಖೆಗೆ ಆದೇಶ ನೀಡಬಾರದು," ಎಂದು ವಾದಿಸಿದರು.
ಸಹಾರಾ ಡೈರಿ ಪ್ರಕರಣವನ್ನು ಉಲ್ಲೇಖಿಸಿ ಪೊನ್ನಣ್ಣ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪಿಐಎಲ್ ನ್ನು ಹೈಕೋರ್ಟ್ ತಿರಸ್ಕರಿಸಿದೆ. ಇದೀಗ "ಈ ಬಗ್ಗೆ ಸುಪ್ರಿಂ ಕೋರ್ಟಿಗೆ ಹೋಗಬೇಕಾ, ಬೇಡ್ವಾ ಎಂದು ಚರ್ಚೆ ಮಾಡಿ ನಿರ್ಧರಿಸುತ್ತೇನೆ," ಎಂದು ಹಮೀದ್ ಪಾಳ್ಯ ಹೇಳಿದ್ದಾರೆ.