ಉಪಚುನಾವಣೆ: ಹೆಬ್ಬಾಳದಲ್ಲಿ ನಿಜವಾಗಿ ಗೆದ್ದಿದ್ದು ಯಾರು?
ಬೆಂಗಳೂರು, ಫೆಬ್ರವರಿ , 16: ಉಪಚುನಾವಣೆಯ ಮೂರು ಸ್ಥಾನಗಳಲ್ಲಿ ಎರಡು ಬಿಜೆಪಿ ತೆಕ್ಕೆಗೆ ಹೋದರೆ ಒಂದರಲ್ಲಿ ಕಾಂಗ್ರೆಸ್ ಪಾರುಪತ್ಯ ಸಾಧಿಸಿದೆ. ಹೆಬ್ಬಾಳ ಮತ್ತು ದೇವದುರ್ಗದಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಿದ್ದು, ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದು ತೃಪ್ತಿಪಟ್ಟುಕೊಂಡಿದೆ. ರಾಜಕಾರಣದ ದೃಷ್ಟಿಯಿಂದ ಹೇಳುವುದಾದರೆ ಯಾವ ಪಕ್ಷಕ್ಕೂ ಇದು ಮಹತ್ವದ ಚುನಾವಣೆ ಆಗಿರಲಿಲ್ಲ. ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಮಹತ್ತರವಾದ ಯಾವ ಪರಿಣಾಮವನ್ನು ಬೀರಲ್ಲ ಎಂಬುದು ಮೊದಲೇ ಗೊತ್ತಿತ್ತು.
ಬಹುಮತವಿರುವ ಕಾಂಗ್ರೆಸ್ ಗೆ ಫಲಿತಾಂಶದಿಂದ ಲಾಭ-ನಷ್ಟ ಏನೂ ಇರಲಿಲ್ಲ. ಇರುವುದು ಇನ್ನು 18 ತಿಂಗಳ ಅವಧಿ ಎನ್ನುವುದು ಎಲ್ಲ ಪಕ್ಷಗಳಿಗೂ ಗೊತ್ತಿತ್ತು. ಸೋಲು ಅಥವಾ ಗೆಲುವು ಅಂಥ ಬದಲಾವಣೆಯನ್ನು ತರುವುದಿಲ್ಲ ಎಂಬುದು ಗೊತ್ತಿದ್ದರೂ ಹಲವರ ಪ್ರತಿಷ್ಠೆಗೆ ಇದು ವೇದಿಕೆಯಾಗಿತ್ತು.[ಹೆಬ್ಬಾಳದಲ್ಲಿ ಕಾಂಗ್ರೆಸ್ ಬೀಳಲು ಏಳೇ 7 ಕಾರಣಗಳು!]
ನಿಜಕ್ಕೂ ಇಲ್ಲಿ ಗೆದ್ದವರು ಯಾರು? ಮೇಲುಗೈ ಸಾಧಿಸಿದವರು ಯಾರು? ಎಂದು ಪ್ರಶ್ನೆ ಮಾಡಿದರೆ ಬಿಜೆಪಿ ಎನ್ನಬಹುದು. ಆದರೆ ಇನ್ನು ಆಳಕ್ಕೆ ಇಳಿದು ಪ್ರಶ್ನೆ ಮಾಡಿದರೆ ಇಲ್ಲಿ ನಿಜಕ್ಕೂ ಗೆದ್ದಿದ್ದು ಸಿಎಂ ಸಿದ್ದರಾಮಯ್ಯ!. ಸಿದ್ದರಾಮಯ್ಯ ತಮ್ಮ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕೆಲಸ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲದಿದ್ದರೂ ಅವರ ಪ್ರತಿಷ್ಠೆಗೆ ಜಯವಾಗಿದೆ ಎಂದು ಹೇಳಬಹುದು. [ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ 5 ಕಾರಣಗಳು]
ಹೌದು... ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡದೇ ಇದ್ದರೆ ಯಾವ ಪರಿಣಾಮ ಆಗುತ್ತದೆ ಎಂಬ ಸಂದೇಶವನ್ನು ಸಿದ್ದರಾಮಯ್ಯ ಹೈಕಮಾಂಡ್ ಗೆ ಪರೋಕ್ಷವಾಗಿ ರವಾನಿಸಿದ್ದಾರೆ. ಇದನ್ನು ಜಾಫರ್ ಷರೀಫ್ ಮತ್ತು ಜಮೀರ್ ಅಹಮದ್ ಖಾನ್ ಸೋಲು, ಬಿಜೆಪಿ ಮತ್ತು ಸಿದ್ದರಾಮಯ್ಯನವರ ಮತ್ತು ದೇವೆಗೌಡರ ಜಯ ಎಂದು ವಿಶ್ಲೇಷಣೆ ಮಾಡಬಹುದು.
ಟಿಕೆಟ್ ಗಲಾಟೆ
ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ಮೊದಲಿನಿಂದಲೂ ಗೊಂದಲದಿಂದಲೇ ಕೂಡಿತ್ತು. ಅಂತಿಮವಾಗಿ ಜಾಫರ್ ಷರಿಫ್ ತಮ್ಮ ಮೊಮ್ಮಗ ರೆಹಮಾನ್ ಷರೀಫ್ ಗೆ ಟಿಕೆಟ್ ದೊರಕಿಸಿಕೊಟ್ಟಿದ್ದರು.
ದಿಗ್ವಿಜಯ್ ಬಳಿ ದುಂಬಾಲು
ಟಿಕೆಟ್ ಗೊಂದಲ ನಿವಾರಿಸಲು ಬೆಂಗಳೂರಿಗೆ ಆಗಮಿಸಿದ್ದ ದಿಗ್ವಿಜಯ್ ಸಿಂಗ್ ಬಳಿ ಖದ್ದು ಜಾಫರ್ ಷರೀಫ್ ಅವರೇ ತೆರಳಿ ಮೊಮ್ಮಗನಿಕೆ ಟಿಕೆಟ್ ಕೊಡುವಂತೆ ಹಕ್ಕು ಮಂಡಿಸಿದ್ದರು.
ಮೊದಲು ಟಿಕೆಟ್ ಸಿಕ್ಕಿದ್ದು ಭೈರತಿ ಸುರೇಶ್ ಗೆ
ಮೊದಲು ಕಾಂಗ್ರೆಸ್ ಸಿಎಂ ಆಪ್ತ ಭೈರತಿ ಸುರೇಶ್ ಗೆ ಟಿಕೆಟ್ ನೀಡಿತ್ತು. ಆದರೆ ನಂತರ ನಡೆದ ಬೆಳವಣಿಗೆಯಲ್ಲಿ ಟಿಕೆಟ್ ಹಂಚಿಕೆಯನ್ನು ಬದಲಾವಣೆ ಮಾಡಲಾಗಿತ್ತು.
ಜಮೀರ್ ಪ್ರಚಾರ
ಮುಸ್ಲಿಮರಿಗೆ ಮತ ನೀಡುವಂತೆ ಜೆಡಿಎಸ್ ನ ಜಮೀರ್ ಅಹಮದ್ ಖಾನ್ ಸಹ ಪ್ರಚಾರ ಮಾಡಿದ್ದರು. ಆದರೆ ಅಂತಿಮವಾಗಿ ಜಯಮಾಲೆ ಬಿಜೆಪಿಯ ನಾರಾಯಣಸ್ವಾಮಿ ಪಾಲಾಯಿತು.
ಮುಗಿಯದ ಗೊಂದಲ
ಚುನಾವಣೆ ಘೋಷಣೆಯಾಗಿ ಮತದಾನ ಮುಗಿಯುವವರೆಗೂ ಆಡಳಿತ ಪಕ್ಷ ಕಾಂಗ್ರೆಸ್ ನಲ್ಲಿ ಗೊಂದಲಗಳು ಮುಗಿಯಲಿಲ್ಲ. ಹೆಬ್ಬಾಳದ ಚುನಾವಣೆ ಒಂದು ರೀತಿ ವಲಸೆ ಕಾಂಗ್ರೆಸ್ಸಿಗರು ಮತ್ತು ಮೂಲ ಕಾಂಗ್ರೆಸ್ಸಿಗರ ನಡುವಿನ ಜಟಾಪಟಿಯ ವೇದಿಕೆಯಾಗಿತ್ತು.
ದೇವೇಗೌಡರ ಜಯ
ಮಾಜಿ ಪ್ರಧಾನಿ ದೇವೇಗೌಡ ಮತ್ತು ಜೆಡಿಎಸ್ ನವರೇ ಆದ ಜಮೀರ್ ಅಹಮದ್ ಖಾನ್ ನಡುವೆ ಚುನಾವಣೆ ವೇಳೆ ಹಲವು ಸಾರಿ ಮಾತಿನ ಚಕಮಕಿ ನಡೆದಿತ್ತು. ಅಭ್ಯರ್ಥಿ ಹೆಬ್ಬಾಳದಲ್ಲಿ ಇಲ್ಲ ಎಂದಿದ್ದ ಗೌಡರು ಕೊನೆ ಕ್ಷಣದಲ್ಲಿ ಸ್ಪರ್ಧೆ ಮಾಡಿಸಿದ್ದರು. ಇದು ಸಹ ಕಾಂಗ್ರೆಸ್ ಸೋಲಿಗೆ ಒಂದು ಕಾರಣವಾಯಿತು.