ಗುರುವಾರದ ಮಳೆ, ಸಿಡಿಲಿಗೆ ರಾಜ್ಯದಲ್ಲಿ 11 ಬಲಿ
ಬೆಂಗಳೂರು, ಏ. 24 : ಗುರುವಾರ ರಾಜ್ಯದಲ್ಲಿ ಸುರಿದ ಭಾರೀ ಮಳೆಗೆ 11 ಜನರು ಬಲಿಯಾಗಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಮಳೆಯಿಂದಾಗಿ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ, ಬೆಳೆಗೆ ಹಾನಿಯಾಗಿದೆ. ಇನ್ನೂ ಮೂರು ದಿನ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಮನ್ಸೂಚನೆ ನೀಡಲಾಗಿದೆ.
ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಬೆಳಗಾವಿ, ಮಂಗಳೂರು, ಹಾವೇರಿ, ದಾವಣಗೆರೆ, ಮಂಡ್ಯ, ಹಾಸನ, ಚಾಮರಾಜನಗರ, ರಾಮನಗರ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಗುರುವಾರ ಭಾರೀ ಮಳೆಯಾಗಿದೆ. [ಬೆಂಗಳೂರಿನಲ್ಲಿ ಮಳೆಯ ಹೊಡೆತಕ್ಕೆ ಒಂದು ಬಲಿ]
ಸಿಡಿಲಿಗೆ ಬಲಿ : ಹಾಸನ ಮತ್ತು ವಿಜಯಪುರದಲ್ಲಿ ಇಬ್ಬರು, ಹಾವೇರಿ, ಧಾರವಾಡ, ಕಲಬುರಗಿಯಲ್ಲಿ ಒಬ್ಬರು ಸಿಡಿಲು ಬಡಿದು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಗೋಡೆ ಕುಸಿದು ಸೆಕ್ಯುರಿಟಿ ಗಾರ್ಡ್ ಸಾವನ್ನಪ್ಪಿದ್ದಾನೆ. ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಕಾರಿನ ಮೇಲೆ ಮರ ಬಿದ್ದು ಮಹಿಳೆ ಮೃತಪಟ್ಟರೆ, ತುಮಕೂರಿನಲ್ಲಿ ವಿದ್ಯುತ್ ತಂತಿ ತುಳಿದು ಯುವಕ ಸಾವನ್ನಪ್ಪಿದ್ದಾನೆ. [ಈ ಬಾರಿ ಮುಂಗಾರಿನಲ್ಲಿ ಕಡಿಮೆ ಮಳೆ]
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರ ಸಂಜೆ ಆರಂಭವಾದ ಮಳೆ ರಾತ್ರಿಯ ತನಕ ಮುಂದುವರೆದಿತ್ತು. ಬೆಂಗಳೂರಿನಲ್ಲಿ 52.2, ರಾಯಚೂರಿನಲ್ಲಿ 50, ತುಮಕೂರಿನಲ್ಲಿ 40, ಚಾಮರಾಜನಗರದಲ್ಲಿ 30, ವಿಜಯಪುರದಲ್ಲಿ 2, ಚಾಮರಾಜನಗರದಲ್ಲಿ 30, ಶಿವಮೊಗ್ಗದಲ್ಲಿ 33, ಚಿಕ್ಕಮಗಳೂರಿನಲ್ಲಿ 17 ಮಿ.ಮೀ ಮಳೆಯಾಗಿದೆ.
ಸಿಡಿಲು ಬಡಿದು ಹೆಚ್ಚಿನ ಸಾವು
ಹಾಸನದಲ್ಲಿ ಸಿಡಿಲು ಬಡಿದು ಸಂಧ್ಯಾ (25) ಹಾಗೂ ಆಕೆಯ ಸಂಬಂಧಿ ತೃಪ್ತಿ (12) ಸಾವನ್ನಪ್ಪಿದ್ದಾರೆ. ಬಸವನಬಾಗೇವಾಡಿ ತಾಲೂಕಿನಲ್ಲಿ ಅರುಣ ಶಾಂತಗೌಡ ಪಾಟೀಲ (12), ಪ್ರಭುಗೌಡ ಗಿರಿಧರಗೌಡ ಪಾಟೀಲ (60), ಧಾರವಾಡದಲ್ಲಿ ಹುಸೇನಸಾಬ ಕುಳ್ಳೂರ (65) ಸಿಡಿಲಿಗೆ ಬಲಿಯಾಗಿದ್ದಾರೆ. ಕುಣಿಗಲ್ ತಾಲೂಕಿನ ಕಗ್ಗೆರೆಯಲ್ಲಿ ಯೋಗೇಶ್ (25) ತುಂಡಾದ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದಾರೆ.
ಭಾರೀ ಗಾಳಿ, ಆಲಿಕಲ್ಲು
ಬೆಂಗಳೂರಿನ ಗೊರಗುಂಟೆ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋಡಾನ್ ಗೋಡೆ ಕುಸಿದು ಸೆಕ್ಯುರಿಟಿ ಗಾರ್ಡ್ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಕಾರಿನ ಮೇಲೆ ಮರ ಬಿದ್ದು ಬಂಗಾರಮ್ಮ (65) ಸಾವನ್ನಪ್ಪಿದ್ದಾರೆ. ಅಫಜಲಪುದಲ್ಲಿ ಸಿಡಿಲು ಬಡಿದು ಕೂಲಿ ಕೆಲಸ ಮಾಡುತ್ತಿದ್ದ ಅನಿತಾ ಮಾರುತಿ ಗಾಡಿ ವಡ್ಡರ್ (26) ಎಂಬ ಮಹಿಳೆ ಮೃತಪಟ್ಟಿದ್ದಾಳೆ. [ಚಿತ್ರಕೃಪೆ : Ashok Hallur]
ಎರಡು ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿತ್ತು
ಬೀದರ್ನಲ್ಲಿ ಬಿರುಗಾಳಿ, ಆಲಿಕಲ್ಲು ಸಹಿತ ಮಳೆ ಸುರಿದಿದೆ. ಮನೆಯ ಛಾವಣಿಗಳು ಹಾರಿ ಹೋಗಿದ್ದು ಹಲವಾರು ಮರಗಳು ನೆಲಕ್ಕುರುಳಿವೆ. ಬೀದರ್-ಹುಮನಾಬಾದ್ ಹೆದ್ದಾರಿಯಲ್ಲಿ ಬಹೃತ್ ಮರ ರಸ್ತೆ ಮೇಲೆ ಉರುಳಿ ಎರಡು ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಚಿತ್ರದುರ್ಗದಲ್ಲಿ ಬೆಳೆಹಾನಿ
ಚಿತ್ರದುರ್ಗ ತಾಲೂಕಿನ ಓಬಳಾಪುರ ಗ್ರಾಮದಲ್ಲಿ 120 ಅಡಕೆ ಮರ, 80ಕ್ಕೂ ಹೆಚ್ಚು ಬಾಳೆ ಗಿಡ ಮಳೆ ಮತ್ತು ಗಾಳಿಯಿಂದಾಗಿ ಹಾನಿಯಾಗಿದೆ. ಕೋಳಿ ಫಾರಂನ 40 ಮೇಚ್ಛಾವಣಿ ಶೀಟ್ಗಳು ಗಾಳಿಗೆ ಹಾರಿಹೋಗಿವೆ. ದಾವಣಗೆರೆ, ಹುಬ್ಬಳ್ಳಿಯಲ್ಲಿಯೂ ಮಳೆಯಾಗಿದೆ.
ರಾಯಚೂರು ರೈತರಿಗೆ ಮತ್ತೆ ಸಂಕಷ್ಟ
ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಭತ್ತದ ಬೆಳೆಗೆ ಹಾನಿಯಾಗಿ ಸಂಕಷ್ಟಕ್ಕೆ ಸಿಲುಕಿರುವ ರಾಯಚೂರಿನ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಗುರುವಾರ ಗುಡುಗು, ಮಿಂಚಿನ ಅಬ್ಬರದೊಂದಿಗೆ ಧಾರಾಕಾರ ಮಳೆ ಸುರಿದಿದೆ. ಬಳ್ಳಾರಿ, ಧಾರವಾಡ ನಗರದಲ್ಲಿಯೂ ಮಳೆಯಾಗಿದೆ.
ವಿಧಾನಸೌಧದಲ್ಲಿ ಜಾರಿ ಬಿದ್ದ ಸಚಿವರು
ಬೆಂಗಳೂರು ನಗರದಲ್ಲಿಯೂ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ನಗರದ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥವಾಗಿ ವಾಹನ ಸವಾರರು ಪರದಾಡಿದರು. ತಗ್ಗುಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿತು. ಸಚಿವ ಅಭಯಚಂದ್ರ ಜೈನ್ ಅವರು ಮಳೆಯಿಂದ ವಿಧಾನಸೌಧದ ಆವರಣದಲ್ಲಿ ಜಾರಿಬಿದ್ದಿದ್ದಾರೆ. ಮಳೆಯಿಂದ ನಿಂತಿದ್ದ ನೀರಿನ ಮೇಲೆ ಸಚಿವರು ಕಾಲಿರಿಸಿದಾಗ ಜಾರಿದರು. ಭದ್ರತಾ ಸಿಬ್ಬಂದಿ ಅವರನ್ನು ಮೇಲಕ್ಕೆತ್ತಿದರು.
ಎಲ್ಲಿ ಎಷ್ಟು ಮಳೆ ಬಂದಿದೆ?
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರ ಸಂಜೆ ಆರಂಭವಾದ ಮಳೆ ರಾತ್ರಿಯ ತನಕ ಮುಂದುವರೆದಿದೆ. ಬೆಂಗಳೂರಿನಲ್ಲಿ 52.2, ರಾಯಚೂರಿನಲ್ಲಿ 50, ತುಮಕೂರಿನಲ್ಲಿ 40, ಚಾಮರಾಜನಗರದಲ್ಲಿ 30, ವಿಜಯಪುರದಲ್ಲಿ 2, ಚಾಮರಾಜನಗರದಲ್ಲಿ 30, ಶಿವಮೊಗ್ಗದಲ್ಲಿ 33, ಚಿಕ್ಕಮಗಳೂರಿನಲ್ಲಿ 17 ಮಿ.ಮೀ ಮಳೆಯಾಗಿದೆ. [ಚಿತ್ರಕೃಪೆ : Dilip Kumar Megaravalli]
ಇನ್ನೂ ಮೂರು ದಿನ ಮಳೆಯಾಗಲಿದೆ
ಇನ್ನೂ ಮೂರು ದಿನ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. ಮಳೆಯೊಂದಿಗೆ ಸಿಡಿಲು ಮತ್ತು ಭಾರೀ ಗಾಳಿ ಬೀಸಲಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.