ರಾಜ್ಯದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ
ಬೆಂಗಳೂರು, ಜುಲೈ, 14: ಕ್ಷೀಣಗೊಂಡಿರುವ ಮುಂಗಾರು ಮಾರುತಗಳು ಚುರುಕು ಪಡೆದುಕೊಳ್ಳಲಿದ್ದು ಕರ್ನಾಟಕದ ಹಲವೆಡೆ ಜುಲೈ ಮಧ್ಯಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜುಲೈ ತಿಂಗಳಿನಲ್ಲಿ ಕರ್ನಾಟಕ ವಾಡಿಕೆಗಿಂತ ಶೇ. 5 ರಷ್ಟು ಹೆಚ್ಚು ಮಳೆ ಪಡೆಯಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಹೇಳಿದೆ. ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲೂ ವರುಣ ಆರ್ಭಟಿಸಲಿದ್ದಾನೆ ಎಂದು ವರದಿ ತಿಳಿಸಿದೆ.[ರಾಜ್ಯದಲ್ಲಿ ಜೂನ್ ಮಳೆ ಅಬ್ಬರ ಹೇಗಿತ್ತು?]
ಬೆಂಗಳೂರು ಈಗಾಗಲೇ ಶೇ. 33 ರಷ್ಟು ಅಧಿಕ ಮಳೆ ಪಡೆದುಕಂಡಿದೆ. ಕಳೆದ ಕೆಲ ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ 10 ಸೆಂ ಮೀ ಮಳೆ ಪಡೆದುಕೊಂಡಿದೆ. ಉತ್ತರ ಕನ್ನಡ ಜಿಲ್ಲೆ ಕದ್ರಾ ಮತ್ತು ಲೊಂಡಾದಲ್ಲಿ ಮಳೆಯಾಗುತ್ತಿದ್ದು ಮುಂದುವರಿಯಲಿದೆ. [ದೇಶದ ಶೇ. 89 ಭಾಗಕ್ಕೆ ವರುಣನ ಕೃಪೆ, ಕರ್ನಾಟಕದ ಕತೆ?]
ಕರ್ನಾಟಕದ ಕರಾವಳಿ ಭಾಗವೂ ಉತ್ತಮ ಮಳೆ ಪಡೆದುಕೊಂಡರೆ ಮಲೆನಾಡು ಭಾಗದಲ್ಲಿ ಶೇ. 5 ಮಳೆ ಕೊರತೆ ಕಂಡುಬಂದಿದೆ. ಮಂಗಳೂರು, ಬಂಟ್ವಾಳ, ಧರ್ಮಸ್ಥಳ, ಚಿಕ್ಕಮಗಳೂರು, ಸುಬ್ರಹ್ಮಣ್ಯ ಶಿವಮೊಗ್ಗ, ಕಳಸ, ಮೂಡಿಗೆರೆ ಸೇರಿದಂತೆ ಹಲವೆಡೆ ಬುಧವಾರ ಮಳೆಯಾಗಿದೆ.