ಇಬ್ಬರು ಸಿಯಾಚಿನ್ ಹೀರೋಗಳ ಪಾರ್ಥಿವ ಶರೀರ ಇಂದು ರಾಜ್ಯಕ್ಕೆ
ನವದೆಹಲಿ, ಫೆಬ್ರವರಿ, 15: ಸಿಯಾಚಿನ್ ದುರಂತದಲ್ಲಿ ಪ್ರಾಣ ತ್ಯಾಗ ಮಾಡಿದ ರಾಜ್ಯದ ಇಬ್ಬರು ಯೋಧರ ಪಾರ್ಥಿವ ಶರೀರಗಳನ್ನು ಇಂದು ತವರಿಗೆ ತರಲಾಗುತ್ತಿದೆ. ನವದೆಹಲಿ-ಹೈದ್ರಾಬಾದ್ ಮಾರ್ಗವಾಗಿ ಬೆಂಗಳೂರಿಗೆ ತರಲಾಗುತ್ತಿದೆ,
ಸಿಯಾಚಿನ್ ನಲ್ಲಿ ಹಿಮಪಾತಕ್ಕೆ ಸಿಕ್ಕಿ 10 ಯೋಧರು ದಾರುಣ ಸಾವಿಗೀಡಾಗಿದ್ದರು. ರಾಜ್ಯದ ಹನುಮಂತಪ್ಪ ಕೊಪ್ಪದ್ ಹಿಮದಡಿ ಆರು ದಿನ ಸಿಲುಕಿಕೊಂಡಿದ್ದರೂ ಉಸಿರು ಹಿಡಿದುಕೊಂಡಿದ್ದರು. ಎಚ್.ಡಿ.ಕೋಟೆಯ ಪಿ.ಎನ್. ಮಹೇಶ್, ಹಾಸನದ ಟಿ.ಟಿ.ನಾಗೇಶ್ ಅವರ ಪಾರ್ಥಿವ ಶರೀರಗಳನ್ನು ನವದೆಹಲಿಗೆ ತರಲಾಗಿದ್ದು ಸೈನ್ಯ ಅಂತಿಮ ನಮನ ಸಲ್ಲಿಕೆ ಮಾಡಿದೆ.[ವಿಜಯಪುರದ ವೀರ ಯೋಧ ಸಹದೇವ್ ಮೋರೆ ಅಂತ್ಯಕ್ರಿಯೆ]
ಹಿಮಪಾತಕ್ಕೆ ಸಿಲುಕಿ ಕರ್ನಾಟಕದ 3, ತಮಿಳುನಾಡಿನ 4, ಕೇರಳದ ಮತ್ತು ಮಹಾರಾಷ್ಟ್ರ ಒಬ್ಬ ಹಾಗೂ ಆಂಧ್ರಪ್ರದೇಶದ ಇಬ್ಬರು ಯೋಧರು ಸಾವನ್ನಪ್ಪಿದ್ದರು.ಸಿಯಾಚಿನ್ ಪ್ರದೇಶದಲ್ಲಿ ಹವಾಮಾನ ವೈಪರೀತ್ಯ ಇದ್ದ ಕಾರಣ ಪಾರ್ಥಿವ ಶರೀರ ಪತ್ತೆ ಕಾರ್ಯಕ್ಕೆ ಅಡ್ಡಿ ಉಂಟಾಗಿತ್ತು.[ಹನುಮಂತಪ್ಪನ ಸ್ಮರಣೆಯಲ್ಲಿ ಸಿಯಾಚಿನ್ ಮಿಲಿಟರಿ ಮುಕ್ತವಾಗಲಿ]
ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಪ್ರಾಣ ತ್ಯಾಗ ಮಾಡಿದ ವಿಜಯಪುರದ ಯೋಧ ಸಹದೇವ್ ಮೋರೆ ಅವರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನೆರವೇರಿಸಲಾಗಿದೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ ನಿವಾಸಿ ಯೋಧ ಸಹದೇವ್ ಜಮ್ಮುಕಾಶ್ಮೀರದಲ್ಲಿ ಉಗ್ರರ ಜೊತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದರು.