ಎಚ್ಡಿಕೆ-ರಮ್ಯಾ ವಾಕ್ಸಮರ : ಮೌನ ಮುರಿದ ದೇವೇಗೌಡರು!
ಹಾಸನ, ಫೆಬ್ರವರಿ 19 : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ನಟಿ, ಮಾಜಿ ಸಂಸದೆ ರಮ್ಯಾ ಅವರ ನಡುವಿನ ವಾಕ್ಸಮರದ ಬಗ್ಗೆ ಎಚ್.ಡಿ.ದೇವೇಗೌಡರು ಮೌನ ಮುರಿದಿದ್ದಾರೆ. 'ವಾಚ್ ಪ್ರಕರಣದ ಗಮನ ಬೇರೆಡೆಗೆ ಸೆಳೆಯಲು ರಮ್ಯಾ ಪ್ರಕರಣವನ್ನು ದೊಡ್ಡದು ಮಾಡಲಾಗುತ್ತಿದೆ' ಎಂದು ಗೌಡರು ಹೇಳಿದ್ದಾರೆ.
ಗುರುವಾರ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಎಚ್.ಡಿ.ದೇವೇಗೌಡರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಚ್ ಪ್ರಕರಣಕ್ಕಿಂತ ರಮ್ಯಾ ಅವರ ವಿಚಾರ ದೊಡ್ಡ ವಿಷಯವಲ್ಲ' ಎಂದರು. [ದೇಶದ ಗಡಿ, ಸಭ್ಯತೆ ಮಿತಿಮೀರಿದ ಎಚ್ಡಿಕೆ-ರಮ್ಯಾ ವಾಕ್ಸಮರ]
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಚ್ ಪ್ರಕರಣದ ಕುರಿತ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ರಮ್ಯಾ ಅವರ ಪ್ರಕರಣವನ್ನು ದೊಡ್ಡದು ಮಾಡಲಾಗುತ್ತಿದೆ. ನಾನು ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದಿಲ್ಲ' ಎಂದು ಹೇಳಿದರು. [ಸಿದ್ದರಾಮಯ್ಯನವರ ಕೈಗಡಿಯಾರದ ಟೈಂ ಲೈನ್]
ಅತ್ತ ರಮ್ಯಾ ಪ್ರಕರಣ ಬಗ್ಗೆ ಮಾತನಾಡಿರುವ ಪಾಂಡವಪುರ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರು, 'ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ಕಳೆದುಕೊಂಡು ಹಲವು ವರ್ಷ ಕಳೆದಿದ್ದು, ಎಚ್.ಡಿ. ಕುಮಾರಸ್ವಾಮಿ ಅವರ ಮಾತಿನಲ್ಲಿ ಹತಾಶೆ ಕಾಣುತ್ತಿದೆ' ಎಂದು ವ್ಯಂಗ್ಯವಾಡಿದ್ದಾರೆ. ದೇವೇಗೌಡರು ಹೇಳಿದ್ದೇನು? ಚಿತ್ರಗಳಲ್ಲಿ ನೋಡಿ.....['ಕುಮಾರಸ್ವಾಮಿ ಪತ್ನಿ ನಟಿಯಲ್ಲವೇ, ಮಗ ಹೀರೋ ಅಲ್ಲವೇ?']
'ದೊಡ್ಡ ವಿಚಾರವೇನಲ್ಲ'
ಕುಮಾರಸ್ವಾಮಿ ಮತ್ತು ರಮ್ಯಾ ನಡುವಿನ ವಾಕ್ಸಮರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಚ್.ಡಿ.ದೇವೇಗೌಡರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಚ್ ಪ್ರಕರಣಕ್ಕಿಂತ ಅದೇನು ದೊಡ್ಡ ವಿಷಯವಲ್ಲ. 'ವಾಚ್ ಪ್ರಕರಣದ ಗಮನ ಬೇರೆಡೆಗೆ ಸೆಳೆಯಲು ರಮ್ಯಾ ಪ್ರಕರಣವನ್ನು ದೊಡ್ಡದು ಮಾಡಲಾಗುತ್ತಿದೆ' ಎಂದು ಹೇಳಿದರು.
'ಹಗುರವಾಗಿ ಮಾತನಾಡುವುದಿಲ್ಲ'
'ನಾನು ಯಾರ ಬಗ್ಗಯೂ ಹಗುರವಾಗಿ ಮಾತನಾಡುವುದಿಲ್ಲ. ಅದರಲ್ಲೂ ಆ ಹೆಣ್ಣುಮಗಳ ಬಗ್ಗೆಯಂತೂ ಮಾತನಾಡುವುದೇ ಇಲ್ಲ. ನನ್ನ ಬಗ್ಗೆ ಈಗಾಗಲೇ ಹಲವರು ಹಗುರವಾಗಿ ಮಾತನಾಡಿದ್ದಾರೆ. ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ದೇವೇಗೌಡರು ತಿಳಿಸಿದರು.
'ಹಿಂದಿನದನ್ನು ನೆನಪು ಮಾಡಿಕೊಳ್ಳಿ'
'ನನ್ನ ಕುಟುಂಬವನ್ನು ಮಾತ್ರ ರಾಜಕೀಯವಾಗಿ ಬೆಳೆಸಬೇಕೆಂದಿದ್ದರೆ ಜಿ.ಪುಟ್ಟಸ್ವಾಮಿ ಗೌಡರನ್ನು, ದೊಡ್ಡೇಗೌಡರನ್ನು ಎಂಎಲ್ಸಿ ಮಾಡುತ್ತಿರಲಿಲ್ಲ. ಆಗ ಯಾರು ಅವರ ಜೊತೆ ಇದ್ದರು. ಹಿಂದಿನದನ್ನು ನೆನೆಪು ಮಾಡಿಕೊಳ್ಳಿ' ಎಂದು ಗೌಡರು ಸಲಹೆ ನೀಡಿದರು.
'ಉಪ ಚುನಾವಣೆ ಫಲಿತಾಂಶ ನೋಡಿ'
'ರಾಜ್ಯದಿಂದ ಇನ್ನು ಯಾರು ಪ್ರಧಾನಿಯಾಗುತ್ತಾರೆ?. ಆ ಸ್ಥಾನಕ್ಕಾದರೂ ಗೌರವ ಕೊಟ್ಟು ಮಾತನಾಡಿ. ಜಮೀರ್ ಹಿಡಿದುಕೊಂಡು ಉಪ ಚುನಾವಣೆಯಲ್ಲಿ ನಮ್ಮ ಪಕ್ಷ ಅಲುಗಾಡಿಸಲು ಹೋದವರು ಉಪ ಚುನಾವಣೆಯಲ್ಲಿ ಏನು ಅನುಭವಿಸಿದರು ಎಂಬುದನ್ನು ನೋಡಿಕೊಳ್ಳಲಿ' ಎಂದು ಗೌಡರು ಹೇಳಿದರು.
'ಕಾಂಗ್ರೆಸಿಗರು ಅವಲೋಕನ ಮಾಡಿಕೊಳ್ಳಲಿ'
'ಪ್ರಾದೇಶಿಕ ಪಕ್ಷವೊಂದು ಉಳಿದರೆ ಏನು ಮಾಡಬಹುದು ಎಂಬುದನ್ನು ತಮಿಳುನಾಡಿನ ಜನರು ತೋರಿಸಿಕೊಟ್ಟಿದ್ದಾರೆ. ಇವರಿಗೆ ಅದರ ಲಾಭದ ಅರಿವಿಲ್ಲ. ಉಪ ಚುನಾವಣೆ ಫಲಿತಾಂಶವನ್ನು ಮೂಲ ಕಾಂಗ್ರೆಸಿಗರು ಅವಲೋಕನ ಮಾಡಿಕೊಳ್ಳಲಿ' ಎಂದು ಗೌಡರು ತಿಳಿಸಿದರು.
'ಚರ್ಚೆಯ ವಸ್ತುವಾಗುತ್ತಿರುವುದು ವಿಪರ್ಯಾಸ'
ಪಾಂಡವಪುರ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಕುಮಾರಸ್ವಾಮಿ ಅವರನ್ನು ವ್ಯಂಗ್ಯವಾಡಿದ್ದಾರೆ. 'ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ಕಳೆದುಕೊಂಡು ಹಲವು ವರ್ಷ ಕಳೆದಿದ್ದು, ಕುಮಾರಸ್ವಾಮಿ ಅವರ ಮಾತಿನಲ್ಲಿ ಈ ಹತಾಶೆ ಕಾಣುತ್ತಿದೆ. ರಾಜಕಾರಣದಲ್ಲಿ ತತ್ವಾದರ್ಶಗಳು ಚರ್ಚೆಯಾಗಬೇಕು. ಆದರೆ, ಕ್ಷುಲ್ಲಕ ಮತ್ತು ಕೌಟುಂಬಿಕ ವಿಚಾರಗಳು ಚರ್ಚೆಯ ವಸ್ತುವಾಗುತ್ತಿರುವುದು ವಿಪರ್ಯಾಸ' ಎಂದು ಹೇಳಿದ್ದಾರೆ.