ಚಾಮರಾಜನಗರ: ಹನೂರು ಕಾವೇರಿ ವನ್ಯಜೀವಿ ವಲಯದಲ್ಲಿ ಕಾಡ್ಗಿಚ್ಚು
ಚಾಮರಾಜನಗರ, ಫೆಬ್ರವರಿ,02: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಹನೂರಿನ ಕಾವೇರಿ ವನ್ಯಜೀವಿ ವಲಯದ ಅರಣ್ಯ ಮಂಗಳವಾರ ಮಧ್ಯಾಹ್ನ ಹೊತ್ತಿ ಉರಿದಿದ್ದು, ಸುಮಾರು 20 ಎಕರೆಯಷ್ಟು ಅರಣ್ಯ ನಾಶವಾಗಿದೆ ಎಂದು ತಿಳಿದು ಬಂದಿದೆ.
ಹನೂರಿನ ಸುಂಡ್ರಳ್ಳಿ ರಸ್ತೆಯಲ್ಲಿ ಬರುವ ಜಾಗೇರಿ ಬಳಿಯ ಮುನಿಹಳ್ಳದ ಬಳಿ ಮಂಗಳವಾರ ಮಧ್ಯಾಹ್ನದ ವೇಳೆಯಲ್ಲಿ ಸಿಗರೇಟ್ ಸೇದಿ ಎಸೆದ ಪರಿಣಾಮವೋ ಅಥವಾ ಉದ್ದೇಶಪೂರ್ವಕವಾಗಿಯೇ ಗೊತ್ತಿಲ್ಲ. ಒಟ್ಟಾರೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದ ಕಾವೇರಿ ವನ್ಯಜೀವಿ ವಲಯ ಅರಣ್ಯದಲ್ಲಿ ಬೆಂಕಿ ಹೊತ್ತಿ ಉರಿಯಲಾರಂಭಿಸಿದೆ.[ಬೆಂಗಳೂರು: ಗೋಪಾಲನ್ ಆರ್ಕೆಡ್ ನಲ್ಲಿ ಅಗ್ನಿ ಅವಘಡ]
ಅರಣ್ಯದಲ್ಲಿ ಬೆಂಕಿ ವ್ಯಾಪಿಸುತ್ತಿರುವ ಸುದ್ದಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಎಸಿಎಫ್ ಅನುಪಮಾ, ಆರ್ಎಫ್ಓ ಬಿ.ಸಿ.ಲೋಕೇಶ್ ತಕ್ಷಣ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿದ್ದ ಸಿಬ್ಬಂದಿ ಹಾಗೂ ಅರಣ್ಯ ರಕ್ಷಕರು ಮತ್ತು ವೀಕ್ಷಕರು ಸೇರಿದಂತೆ ಇಪ್ಪತ್ತೂ ಹೆಚ್ಚು ಜನರು ಸೊಪ್ಪುಸೆದೆಗಳನ್ನು ಕಂತೆ ಕಟ್ಟಿಕೊಂಡು ಬೆಂಕಿಗೆ ಬಡಿದು ಆರಿಸುವ ಪ್ರಯತ್ನ ಮಾಡಿದ್ದಾರೆ.[ಬಂಡೀಪುರದಲ್ಲಿ ಕಳ್ಳರ ಹುಡುಕಾಟ ನಡೆಸುವ ಸಿಸಿ ಕ್ಯಾಮರಾ ಕಳವು]
ಅರಣ್ಯ ಸಿಬ್ಬಂದಿ, ವೀಕ್ಷಕರು, ಅರಣ್ಯ ರಕ್ಷಕರ ಸಮಯಪ್ರಜ್ಞೆಯಿಂದ ಹಾಗೂ ಹರಸಾಹಸದಿಂದ ಕೆಲವೇ ಗಂಟೆಗಳಲ್ಲಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದು, ಸಂಪೂರ್ಣವಾಗಿ ಹೊತ್ತಿ ಉರಿಯುವುದನ್ನು ತಪ್ಪಿಸಲಾಗಿದೆ.