ಕುಂಬ್ಳೆ ಬಾಕಿ ಸಂದಾಯ, ಅಮಿತ್ ಶಾಗೆ ಅಭಿನಂದನೆ ಹಾಗೂ ಇತರ ಸುದ್ದಿಗಳು
ಮಂಗಳವಾರ (ಆಗಸ್ಟ್ 8ರಂದು) ಸುದ್ದಿ ಸಾಮ್ರಾಜ್ಯವನ್ನಾಳಿದ ಮಹತ್ವದ ಸುದ್ದಿಗಳಲ್ಲಿ ಪ್ರಮುಖವಾದವನ್ನು ಇಲ್ಲಿ ನೀಡಲಾಗುತ್ತಿದೆ. ಮಂಗಳವಾರದ ಸುದ್ದಿಗಳಲ್ಲಿ ಹೆಚ್ಚು ಸದ್ದು ಮಾಡಿದ್ದು ಗುಜರಾತ್ ನ ರಾಜ್ಯಸಭಾ ಚುನಾವಣೆ.
ಈ ಹೊತ್ತಿನ ಕೆಲವು ಪ್ರಮುಖ ಸುದ್ದಿಗಳು ಇಲ್ಲಿವೆ. ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್ ತಂಡದ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದ ಅನಿಲ್ ಕುಂಬ್ಳೆಗೆ ಸಂದಾಯವಾಗಬೇಕಿದ್ದ ವೇತನ ಬಾಕಿಯನ್ನು ಭಾರತೀಯ ಕ್ರಿಕೆಟ್ ಸಂಸ್ಥೆ ಪಾವತಿಸಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಮೂರು ವರ್ಷ ಪೂರೈಸಿದ ಅಮಿತ್ ಶಾ ಅವರಿಗೆ ಎಲ್ಲೆಡೆಯೆಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ. ಇವೂ ಸೇರಿದಂತೆ ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ.
ಅನಿಲ್ ಕುಂಬ್ಳೆಗೆ ಸಲ್ಲಬೇಕಿದ್ದ ಬಾಕಿ ಮೊತ್ತ ಪಾವತಿ
ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರಿಗೆ ಸಲ್ಲಬೇಕಿದ್ದ ತಿಂಗಳ ಸಂಬಳ, ಬಾಕಿ ಮೊತ್ತವನ್ನು ಪಾವತಿಸಿರುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಹೇಳಿದೆ. ಮೇ ಮತ್ತು ಜೂನ್ ತಿಂಗಳ ವೇತನದ ರೂಪದಲ್ಲಿ ಒಟ್ಟು 97.5 ಲಕ್ಷ ರು ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ 3 ವರ್ಷ ಪೂರೈಸಿದ ಅಮಿತ್ ಶಾಗೆ ಅಭಿನಂದನೆ
ರಾಜಕೀಯ ವಲಯದಲ್ಲಿ ಚಾಣಕ್ಯ ಎಂದೇ ಖ್ಯಾತಿ ಪಡೆದ ಅಮಿತ್ ಶಾ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಇಂದಿಗೆ(ಆಗಸ್ಟ್ 9) ಮೂರು ವರ್ಷ. ಹೇಳಹೆಸರಿಲ್ಲದಂತಾಗಿದ್ದ ಬಿಜೆಪಿಯನ್ನು ತಳಮಟ್ಟದಿಂದ ಮೇಲಕ್ಕೆತ್ತಿ, ಇಂದು ಭಾರತದ ಅತಿದೊಡ್ಡ ರಾಜಕೀಯ ಪಕ್ಷವನ್ನಾಗಿ ಮಾಡಿದ ಹಲವು ಬಿಜೆಪಿ ನಾಯಕರಲ್ಲಿ ಅಮಿತ್ ಶಾ ಸಹ ಒಬ್ಬರು. ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸುವಲ್ಲಿ ಅವರ ಆಪ್ತ ಅಮಿತ್ ಶಾ ಅವರ ಕೊಡುಗೆ ಅಪಾರ.
ಗುಜರಾತ್ ರಾಜ್ಯಸಭೆ ಚುನಾವಣೆ,ಕಾಂಗ್ರೆಸ್ ನ ಅಹ್ಮದ್ ಪಟೇಲ್ ಗೆ ಗೆಲುವು
ತೀವ್ರ ಕುತೂಹಲ ಮೂಡಿಸಿದ್ದ ಗುಜರಾತ್ ರಾಜ್ಯಸಭೆಚುನಾವಣೆ ಫಲಿತಾಂಶ ಕೊನೆಗೂ ಹೊರ ಬಿದ್ದಿದೆ. ಕಾಂಗ್ರೆಸ್ ನ ಅಹ್ಮದ್ ಪಟೇಲ್ ಜಯಭೇರಿ ಭಾರಿಸಿದ್ದಾರೆ. ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ಈ ಬಾರಿಯ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಅವರನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಶತಾಯ ಗತಾಯ ಪ್ರಯತ್ನ ಪಟ್ಟಿದ್ದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಅವರಿಗೆ ತೀವ್ರ ಮುಖಭಂಗವಾಗಿದೆ.
ಇಬ್ಬರು ಶಾಸಕರು ಕೈ ಕೊಟ್ಟರೂ ಅಹ್ಮದ್ ಪಟೇಲ್ ಗೆದ್ದಿದ್ದು ಹೇಗೆ?
ಅಂತೂ ಇಂತೂ, ಗುಜರಾತ್ ನ ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಹ್ಮದ್ ಪಟೇಲ್ ಅವರು ಅಗ್ನಿಪರೀಕ್ಷೆಯನ್ನು ಗೆದ್ದಿದ್ದಾರೆ. ಇದೊಂದು ರೀತಿ, ಐತಿಹಾಸಿಕ ಜಯ ಎಂದರೆ ತಪ್ಪೇನಿಲ್ಲ. ಇಡೀ ದೇಶದ ಗಮನ ಸೆಳೆದಿದ್ದ ಈ ಚುನಾವಣೆಯು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಭಾರೀ ಪೈಪೋಟಿಗೆ ಕಾರಣವಾಗಿತ್ತು.
ಅಮೆರಿಕದ ಗುವಾಮ್ ದ್ವೀಪದ ಮೇಲೆ ಕ್ಷಿಪಣಿ ದಾಳಿಗೆ ಸಜ್ಜಾದ ಕೊರಿಯಾ
ಅಮೆರಿಕದ ಆಡಳಿತದಲ್ಲಿರುವ ಗುವಾಮ್ ದ್ವೀಪದ ಮೇಲೆ ಕ್ಷಿಪಣಿ ದಾಳಿ ನಡೆಸಲು ಉತ್ತರ ಕೊರಿಯಾ ಸಜ್ಜಾಗಿದೆ ಎಂದು ಕೆಲ ಮಾಧ್ಯಮಗಳು ವರದಿಯಾಗಿವೆ. ಉತ್ತರ ಕೊರಿಯಾ, ಅಮೆರಿಕ ನಡುವಿನ ಯುದ್ಧ ಸನ್ನಿಹಿತ? ಎರಡೂ ದೇಶಗಳ ನಡುವೆ ಯುದ್ಧದ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ, ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್-ಉನ್ ಅವರು, ಅಮೆರಿಕದ ಮೇಲೆ ದಾಳಿ ನಡೆಸುವುದಾಗಿ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರು.