ಮಠಗಳಿಗೆ ನಿಯಂತ್ರಣ ಹಾಕುವ ವಿಧೇಯಕ ವಾಪಸ್
ಬೆಂಗಳೂರು, ಫೆ.14 : ಭಾರೀ ವಿವಾದಕ್ಕೆ ಕಾರಣವಾಗಿದ್ದ ಮಠ ಮಾನ್ಯಗಳ ನಿಯಂತ್ರಣ ವಿಧೇಯಕವನ್ನು ಸರ್ಕಾರ ವಾಪಸ್ ಪಡೆದಿದೆ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡನೆ ಮಾಡಿದ್ದ ಸರ್ಕಾರ ಪ್ರತಿಪಕ್ಷ ಮತ್ತು ಮಠಾಧೀಶರ ವಿರೋಧ ಕಟ್ಟಿಕೊಂಡಿತ್ತು.
ವಿಧಾನಮಂಡಲದ ಜಂಟಿ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಸರ್ಕಾರ ವಿಧೇಯಕವನ್ನು ವಾಪಸ್ ಪಡೆದಿದೆ. ಸಚಿವ ಸಂಪುಟ ಸಭೆಯ ನಿರ್ಧಾರದಂತೆ, ಈ ವಿಧೇಯಕವನ್ನು ವಾಪಸ್ ತೆಗೆದುಕೊಳ್ಳುತ್ತಿರುವುದಾಗಿ ಕಾನೂನು ಸಚಿವ ಟಿ.ಬಿ.ಜಯಂದ್ರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. [ಮಠಗಳಿಗೆ ಮೂಗುದಾರ, ಸಚಿವರ ಸ್ಪಷ್ಟನೆಗಳು]
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕವನ್ನು ಬೆಳಗಾವಿ ಅಧಿವೇಶನದ ಕೊನೆಯ ದಿನ ಸರ್ಕಾರ ಮಂಡನೆ ಮಾಡಿತ್ತು. ಪ್ರತಿಪಕ್ಷಗಳಿಂದ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವು. ಸಾರ್ವಜನಿಕ ವಲಯದಲ್ಲೂ ಈ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. [ಮಠಗಳಿಗೆ ನಿಯಂತ್ರಣ ಬೇಕು : ನಿಡುಮಾಮಿಡಿ ಶ್ರೀ]
ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಇಂತಹ ಕ್ರಮ ಕೈಗೊಳ್ಳಲಾಗಿದೆ. ಮಠ ಮಾನ್ಯಗಳ ಆಡಳಿತದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವ ಉದ್ದೇಶವಿಲ್ಲ. ಅಂತಹ ಅಂಶಗಳನ್ನು ವಿಧೇಯಕದಲ್ಲಿ ಸೇರಿಸಿಲ್ಲ ಎಂದು ಸರ್ಕಾರ ಸ್ಪಷ್ಟನೆಗಳನ್ನು ನೀಡಿತ್ತು. ಆದರೆ, ತೀವ್ರ ವಿರೋಧ ವ್ಯಕ್ತವಾದ ಕಾರಣ ವಿಧೇಯಕವನ್ನು ವಾಪಸ್ ಪಡೆಯಲಾಗಿದೆ.
ವಿಧೇಯಕ ವಾಪಸ್ ಪಡೆದ ಸರ್ಕಾರ
ಉತ್ತರಾಧಿಕಾರಿ ನೇಮಕ ವಿವಾದ, ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಮಠಗಳನ್ನು ತನ್ನ ಹತೋಟಿಗೆ ಕಾನೂನು ಪ್ರಕಾರ ತೆಗೆದುಕೊಳ್ಳಲು ಅನುಕೂಲವಾಗುವಂತೆ ಸರ್ಕಾರ ಮಂಡಿಸಿದ್ದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ-2014ನ್ನು ಸರ್ಕಾರ ವಾಪಸ್ ಪಡೆದಿದೆ. ಪ್ರತಿಪಕ್ಷಗಳು ಈ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ್ದವು.
ಬೆಳಗಾವಿಯಲ್ಲಿ ಇದನ್ನು ಮಂಡಿಸಲಾಗಿತ್ತು
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ದಿನ ಸರ್ಕಾರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ-2014 ಅನ್ನು ಮಂಡನೆ ಮಾಡಿತ್ತು. ವಿಧೇಯಕ ಮಂಡನೆ ಮಾಡಿದ ದಿನದಿಂದಲೇ ಸರ್ಕಾರ ಮಠಾಧೀಶರ ಕೆಂಗಣ್ಣಿಗೆ ಗುರಿಯಾಗಿತ್ತು.
ಮಠಾಧೀಶರಿಂದ ವಿಧೇಯಕ್ಕೆ ವಿರೋಧ
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕಕ್ಕೆ ಮಠಾಧೀಶರು ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರ ಇದನ್ನು ವಾಪಸ್ ಪಡೆಯದಿದ್ದರೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬದಲಾಯಿಸುವವರೆಗೆ ಹೋರಾಟ ನಡೆಸುತ್ತೇವೆ ಎಂದು ಕಲಬುರಗಿಯಲ್ಲಿ ಶ್ರೀಶೈಲ ಸಾರಂಗಧರ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದರು. ಅಲ್ಲಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಸಮರ್ಥಿಸಿಕೊಂಡಿದ್ದ ಸರ್ಕಾರ
ಸರ್ಕಾರ ವಿಧೇಯಕ ಮಂಡನೆ ಮಾಡಿರುವುದನ್ನು ಸಮರ್ಥಿಸಿಕೊಂಡಿತ್ತು. ಮಠಗಳ ಸ್ವಾಯತ್ತತೆಗೆ ಧಕ್ಕೆ ತರುವ ಉದ್ದೇಶ ಸರ್ಕಾರಕ್ಕಿಲ್ಲ. ಮಠಗಳ ದಿನನಿತ್ಯದ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಸ್ತಾವನೆಯೂ ಇಲ್ಲ, ದೂರುಗಳು ಬಂದರೆ ಮಾತ್ರ ಸರ್ಕಾರ ಹಸ್ತಕ್ಷೇಪ ಮಾಡಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಸ್ಪಷ್ಟಪಡಿಸಿದ್ದರು.
ಸಚಿವ ಸಂಪುಟ ಸಭೆಯಲ್ಲಿ ಚರ್ಚೆ
ಡಿ.23ರಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ವಿಧೇಯಕವನ್ನು ವಾಪಸ್ ಪಡೆಯಲು ಸರ್ಕಾರ ತೀರ್ಮಾನಿಸಿತ್ತು. ಮಸೂದೆಯನ್ನು ಮಂಡಿಸಿ ಪ್ರತಿಪಕ್ಷಗಳ ಹೋರಾಟಕ್ಕೆ ದಾರಿ ಮಾಡಿಕೊಟ್ಟಿದ್ದೇವೆ. ಆದ್ದರಿಂದ ಮಸೂದೆ ವಾಪಸ್ ಪಡೆಯುವುದು ಸೂಕ್ತ ಎಂದು ಹಿರಿಯ ಸಚಿವರು ಅಭಿಪ್ರಾಯಪಟ್ಟಿದ್ದರು. ಸಚಿವ ಸಂಪುಟ ಸಭೆಯಲ್ಲಿ ಮಸೂದೆ ಕುರಿತು ಸಿದ್ಧಪಡಿಸಿದ ಟಿಪ್ಪಣಿಯನ್ನು ಪ್ರಸ್ತಾಪಿಸಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹುತೇಕ ಎಲ್ಲಾ ಸಚಿವರೂ ಮಸೂದೆ ಬೇಕಿರಲಿಲ್ಲ, ಇದನ್ನು ವಾಪಸ್ ಪಡೆಯೋಣ ಎಂದು ಸಲಹೆ ನೀಡಿದ್ದರು.
ಮಠಗಳಿಗೆ ನಿಯಂತ್ರಣ ಬೇಕು ಎಂದಿದ್ದರು
ಮಠಗಳು ಸಂವಿಧಾನ ಮತ್ತು ಕಾನೂನಿನಿಂತ ದೊಡ್ಡವಲ್ಲ. ಆದ್ದರಿಂದ, ಸರ್ಕಾರ ಮಠಗಳ ಮೇಲೆ ನಿಯಂತ್ರಣ ಹೇರಬಹುದು ಎಂದು ನಿಡುಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲಸ್ವಾಮೀಜಿ ಹೇಳಿದ್ದರು. ಸರ್ಕಾರ ಮಠಗಳ ಮೇಲೆ ನಿಯಂತ್ರಣ ಹೇರುವ ನಿರ್ಧಾರ ಹಿಂಪಡೆಯಬಾರದು ಎಂದು ಒತ್ತಾಯಿಸಿದ್ದರು. ಮಠಗಳನ್ನು ಸಹ ಕಾನೂನು ವ್ಯಾಪ್ತಿಗೆ ತರಬಹುದು. ಆದರೆ, ಧಾರ್ಮಿಕ ವಿಚಾರಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದರು.