'ಕನ್ನಡಿಗರ ಮೇಲೆ ದೌರ್ಜನ್ಯ: ಗೋವಾ ಸಿಎಂ ಜತೆ ಮಾತಾಡ್ತೀನಿ'
ಮೈಸೂರು, ಅಕ್ಟೋಬರ್, 23: ಗೋವಾದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಸಂಬಂಧ ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಈ ವಿಷಯ ಕುರಿತು ಗೋವಾದ ಮುಖ್ಯಮಂತ್ರಿಗಳೊಂದಿಗೆ ತಾವು ಮಾತನಾಡುವುದಾಗಿ ಹೇಳಿದರು.
ಅಕ್ಟೋಬರ್ 15ರಂದು ಗೋವಾದ ತಿಸ್ಕ್ ಉಸಗಾಂವ್ ನಲ್ಲಿ ನೆಲೆಸಿರುವ 200ಕ್ಕೂ ಅಧಿಕ ಕನ್ನಡಿಗರ ಮೇಲೆ ಕೊಂಕಣಿ ಭಾಷಿಗ ಗೋವಾ ಮೂಲದವರು ಹಲ್ಲೆ ನಡೆಸಿದ ಘಟನೆ ನಡೆದಿತ್ತು. ದುಷ್ಕರ್ಮಿಗಳುಎಂಟು -ಹತ್ತು ಮನೆಗೆ ನುಗ್ಗಿ ಸಿಕ್ಕಿದ್ದನ್ನೆಲ್ಲ ದೋಚಿದ್ದಾರೆ. ನಂತರ ಮೂರು ಬೈಕ್, ಒಂದು ಕಾರನ್ನು ಧ್ವಂಸಗೊಳಿಸಿದ್ದರು. ಕನ್ನಡಿಗರೇ ಗೋವಾ ಬಿಟ್ಟು ತೊಲಗಿ ಎಂದು ಘೋಷಣೆ ಕೂಗಿದ್ದಾರೆ.
ಈ ಸಂಬಂಧ ರಕ್ಷಣೆ ಕೋರಿ ಗೋವಾದಲ್ಲಿರುವ ಕನ್ನಡಿಗರು ಮನವಿ ಪತ್ರವನ್ನು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು, ಬೆಳಗಾಬಿ ಜಿಲ್ಲಾಧಿಕಾರಿಗಳಿಗೆ ಕಳಿಸಿದ್ದರು.
ಶೈಲೇಂದ್ರ ಗವಾಸ್ ನೇತೃತ್ವದ 42 ಕ್ಕೂ ಅಧಿಕ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ನನ್ನ ಬಳಿ ಇದ್ದ 10ಲಕ್ಷ ರು ನಗದು ಹಾಗೂ 5 ಲಕ್ಷ ಆಭರಣಗಳನ್ನು ಕದ್ದೊಯ್ದಿದ್ದಾರೆ ಎಂದು ಗಂಗವ್ವ ದೊಡ್ಡಮನಿ ಎಂಬುವರು ಪೊಂಡಾ ಪೊಲೀಸರಿಗೆ ದೂರು ನೀಡಿದ್ದಾರೆ.
ಐಸಿಪಿ ಸೆಕ್ಷನ್ 143,147,504,506(II),323,324,307 ಹಾಗೂ ಇತರೆ ಸೆಕ್ಷನ್ ಗಳ ಅಡಿಯಲ್ಲಿ ಕ್ರಮ ಜರುಗಿಸುವಂತೆ ಮನವಿ ಮಾಡಲಾಗಿದೆ. ಆದರೆ, ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ. ಬದಲಿಗೆ ಕನ್ನಡಿಗ ಯುವಕರ ಮೇಲೆ ಗೂಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.