ರಾಘವೇಶ್ವರ ಶ್ರೀಗಳ ಅಭಿಲಾಷೆಗೆ ಗೋಕರ್ಣದಲ್ಲಿ ಮುನ್ನುಡಿ
ಗೋಕರ್ಣದ ಆತ್ಮಲಿಂಗಕ್ಕೆ ಪೂಜಾಭಿಷೇಕ ಸಲ್ಲಿಸಲು ನಾಡಿನ ಪ್ರತಿಯೊಬ್ಬ ಸಂತರಿಗೂ ಐತಿಹಾಸಿಕ ಅವಕಾಶ ಸಿಗಬೇಕು ಎನ್ನುವ ರಾಘವೇಶ್ವರ ಶ್ರೀಗಳ ಅಭಿಲಾಷೆಗೆ ಸೋಮವಾರ (ಜ 9) ಮುನ್ನುಡಿ ಬರೆಯಲಾಯಿತು.
ಗೋಕರ್ಣ, ಜ 9: ನಾಡಿನ ಪ್ರತಿಯೊಬ್ಬ ಸಂತರಿಗೂ ಐತಿಹಾಸಿಕ ಗೋಕರ್ಣದ ಆತ್ಮಲಿಂಗಕ್ಕೆ ಪೂಜಾಭಿಷೇಕ ಸಲ್ಲಿಸಲು ಅವಕಾಶ ಸಿಗಬೇಕು ಎನ್ನುವ ರಾಘವೇಶ್ವರ ಶ್ರೀಗಳ ಅಭಿಲಾಷೆಗೆ ಸೋಮವಾರ (ಜ 9) ಮುನ್ನುಡಿ ಬರೆಯಲಾಯಿತು.
ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿ , ನಾಡಿನ ವಿವಿಧ ಸಂತರುಗಳಿಂದ ಲೋಕ ಕಲ್ಯಾಣಾರ್ಥ ಆತ್ಮಲಿಂಗ ಪೂಜೆ ಮತ್ತು ಸಂತರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ 'ಗೋಕರ್ಣ ಗೌರವ' ಸೋಮವಾರ ಶುಭಾರಂಭಗೊಂಡಿತು. (ಎಲ್ಲಾ ತೀರ್ಥಯಾತ್ರೆಗಿಂತ ಗೋಯಾತ್ರೆ ಶ್ರೇಷ್ಠ)
ಆಂಧ್ರಪ್ರದೇಶ ಶ್ರೀಶೈಲ ಸೂರ್ಯ ಸಿಂಹಾಸನ ಮಠಾಧೀಶ, ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಆತ್ಮಲಿಂಗ ಪೂಜೆ ಮಾಡುವುದರೊಂದಿಗೆ ಕಾರ್ಯಕ್ರಮ ಶುಭಾರಂಭಗೊಂಡಿತು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಶಿತಿಕಂಠ ಹಿರೇ ಭಟ್ ಮತ್ತು ಉಪಾಧಿವಂತ ಮಂಡಳಿಯ ಸದಸ್ಯರು ಪೂಜಾ ಕೈಂಕರ್ಯ ನೆರವೇರಿಸಿದರು. ಆಡಳಿತಾಧಿಕಾರಿ ಜಿ ಕೆ ಹೆಗಡೆ ಫಲ ಸಮರ್ಪಿಸಿ ಗೌರವ ಸಮರ್ಪಣೆ ಮಾಡಿದರು.
ಗದಗದಲ್ಲಿ (ಜ 9) ಮಂಗಲ ಗೋಯಾತ್ರೆಯ ಅಂಗವಾಗಿ ನೆಡೆದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಘವೇಶ್ವರ ಶ್ರೀಗಳು, ಸಾಕು ಎನ್ನುವ ಪದ ಹಿಂದೆ ಗೋವನ್ನು "ಸಾಕು" ಎನ್ನುವದಕ್ಕಾಗಿ ಬಳಸಲಾಗುತ್ತಿತ್ತು. ಇಂದು ಗೋವೇ "ಸಾಕು" ಎನ್ನುವ ಹೀನ ಸ್ಥಿತಿ ಬಂದುಬಿಟ್ಟಿದೆ ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದ್ದಾರೆ.
ಸಹಜ ಹೋಗಿ ಕೃತಕವೇ ಬದುಕಾಗಿದೆ. ಸಹಜ ಸೃಷ್ಟಿಯಾದ ಗೋವು ಹೋಗಿ ಕೃತಕ ಸೃಷ್ಟಿಯಾದ ಜರ್ಸಿ ಆಕಳು ಬಂದುಬಿಟ್ಟಿದೆ. ಗೋವಧೆಯಿಂದ ಬಂದ ಪದಾರ್ಥಗಳನ್ನು ನಮ್ಮ ಆಹಾರ ವಸ್ತುಗಳಲ್ಲಿ ಬಳಸಲಾಗುತ್ತಿದೆ.
ಮಂಗಲಪಾಂಡೆಯ ಸಂತಾನವಾದ ನಾವು ನಮಗರಿವಿಲ್ಲದೇ ಇಂತಹ ಆಹಾರವನ್ನು ಸೇವಿಸಿ ಗೋವಧೆಗೆ ಪರೋಕ್ಷ ಕಾರಣರಾಗುತ್ತಿದ್ದೇವೆ ಎಂದು ರಾಘವೇಶ್ವರ ಶ್ರೀಗಳು ಬೇಸರ ವ್ಯಕ್ತ ಪಡಿಸಿದ್ದಾರೆ.