ಟ್ವಿಟ್ಟರಲ್ಲಿ ಟ್ರೆಂಡ್ ಆಗಲಿದೆಯೆ 'ವೆಂಕಯ್ಯಸಾಕಯ್ಯ' ಅಭಿಯಾನ?
ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಲು ಕಲಿತ, ಆದರೆ ಒಂದೇ ಒಂದು ಪದ ಕನ್ನಡ ಮಾತನಾಡಲು ಬಾರದ, ಕರ್ನಾಟಕದಿಂದ (1998ರಿಂದ) ಸತತವಾಗಿ ರಾಜ್ಯಸಭೆಗೆ ಆಯ್ಕೆಯಾಗುತ್ತಿರುವ, ಕನ್ನಡ ನಾಡಿಗಾಗಿ ಏನನ್ನೂ ಮಾಡದ ಮುಪ್ಪವರಪು ವೆಂಕಯ್ಯ ನಾಯ್ಡು 'ಗೋ ಬ್ಯಾಕ್'!
ಇವರಿಗೆ ಕೇಂದ್ರದ ಮಂತ್ರಿಗಿರಿ ಸ್ಥಾನ ದಕ್ಕಿದ್ದು ಕನ್ನಡಿಗರಿಂದವಾದರೂ ಇವರು ಕನ್ನಡಿಗರಿಗಾಗಿ, ಕನ್ನಡ ನಾಡಿಗಾಗಿ ಕೊಟ್ಟ ಕೊಡುಗೆ ಏನು? ಇಂಥವರನ್ನು ಕರ್ನಾಟಕದಿಂದ ಮತ್ತೆಮತ್ತೆ ರಾಜ್ಯಸಭೆಗೆ ಯಾಕೆ ಆಯ್ಕೆ ಮಾಡಿ ಕಳುಹಿಸಬೇಕು? ಇದು ಐಟಿ-ಬಿಟಿ ಕನ್ನಡ ಬಳಗ ಕೇಳುತ್ತಿರುವ ಪ್ರಶ್ನೆ. ಇದು ಸಮಸ್ತ ಕನ್ನಡಿಗರ ಪ್ರಶ್ನೆಯೂ ಹೌದು.
ಚುನಾವಣೆ ಇದ್ದಾಗ ಬೆಂಗಳೂರಿಗೆ ಬಂದು ಭೀಕರ ಭಾಷಣ ಬಿಗಿದು ಹೋಗಿದ್ದು ಬಿಟ್ಟರೆ ಕರ್ನಾಟಕಕ್ಕೆ ವೆಂಕಯ್ಯ ನಾಯ್ಡು ಮಾಡಿರುವುದು ಅಷ್ಟಕ್ಕಷ್ಟೆ. ತಮ್ಮ ಮೂಲರಾಜ್ಯಕ್ಕೆ ಮಾತ್ರ ದಂಡಿಯಾಗಿ ಸಹಾಯ ಮಾಡಿದ್ದಾರೆ. ಇಂಥವರಿಗೆ ಕನ್ನಡಿಗರಾದ, ಸ್ವಾಭಿಮಾನಿಗಳಾದ ನಾವು ಬಿಸಿ ಮುಟ್ಟಿಸಬೇಕಲ್ಲವೆ? [ಮತ್ತೆ ರಾಜ್ಯಸಭೆಗೆ ವೆಂಕಯ್ಯ ನಾಯ್ಡು, ಕನ್ನಡಿಗರಿಗೆ ಇಲ್ಲ ಅವಕಾಶ?]
ಇಂಥ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಐಟಿ-ಬಿಟಿ ಕನ್ನಡ ಬಳಗದ ಸದಸ್ಯರು ಟ್ವಿಟ್ಟರಿನಲ್ಲಿ #GoBackVenkaiah ಮತ್ತು #venkayyasakayya ಅಭಿಯಾನವನ್ನು ಮೇ 18ರಂದು ಬುಧವಾರ ನಡೆಸಲಿದ್ದಾರೆ. ಸ್ವಾಭಿಮಾನಿ ಕನ್ನಡಿಗರು ಈ ಅಭಿಯಾನದಲ್ಲಿ ಭಾಗವಹಿಸಿ, ತಮ್ಮ ವಸ್ತುನಿಷ್ಠ ಅಭಿಪ್ರಾಯವನ್ನು ಮಂಡಿಸಬೇಕು ಎಂದು ಐಟಿಬಿಟಿ ಕನ್ನಡಿಗರು ಕೋರಿದ್ದಾರೆ.
ನಿಮಗೆ ಯಡಿಯುರಪ್ಪ ಬೇಕೋ ಅಥವಾ ವೆಂಕಯ್ಯ ನಾಯ್ಡು ಬೇಕೋ? ನಿಮಗೆ ಎಸ್ಎಂ ಕೃಷ್ಣ ಬೇಕೋ ಅಥವಾ ಚಿದಂಬರಂ ಬೇಕೋ? ನಿಮಗೆ ರಾಜಕುಮಾರ್ ಬೇಕೋ ಅಮಿತಾಬ್ ಬಚ್ಚನ್ ಬೇಕೋ ಅಂದ್ರೆ ರಾಜಕುಮಾರ ಬೇಕು ಅಂತ ಅನ್ನೋ ನಾವು ವೆಂಕಯ್ಯ ನಾಯ್ಡು ಮತ್ತು ಚಿದಂಬರಂರನ್ನು ಯಾಕೆ ಒಪ್ಪಕೊಬೇಕು? ಎನ್ನುತ್ತಾರೆ ಐಟಿ-ಬಿಟಿ ಕನ್ನಡ ಬಳಗದ ಶ್ರೀಕಾಂತ ಶೇಷಗಿರಿ. [ದೇವನಹಳ್ಳಿಯಲ್ಲಿ ಗ್ರಾಮ ದತ್ತು ಪಡೆದ ವೆಂಕಯ್ಯ ನಾಯ್ಡು]
ಕರ್ನಾಟಕದ ಜನರನ್ನೇ ನಾವು ರಾಜ್ಯಸಭೆಗೆ ಆರಿಸಿ ಕಳಸಿದರೆ ನಾವು ಕಳಕೊಳ್ಳುವುದು ಏನು ಇಲ್ಲ. ಇಲ್ಲಿ ಪಾರ್ಟಿ ಕಟ್ಟಿ ಬೆಳೆಸಲು ಕನ್ನಡಿಗರು ಬೇಕು, ಆದರೆ ರಾಜ್ಯಸಭೆಗೆ ಕನ್ನಡೇತರರು ಯಾಕೆ ಬೇಕು ಎಂದು ಅವರು ವಾದ ಮಾಡಿಸುತ್ತಿದ್ದಾರೆ. ರಾಜ್ಯಸಭೆಗೆ 'ಕನಸಿನ ಕನ್ಯೆ' ಹೇಮಾಮಾಲಿನಿ ಆಯ್ಕೆ ಮಾಡಿ ಕಳಿಸಿರುವ ಕನ್ನಡಿಗರು ವೆಂಕಯ್ಯ ನಾಯ್ಡು ಆಯ್ಕೆಯಲ್ಲಿಯೂ ಪಾಠ ಕಲಿಯಬೇಕಿದೆ. [ಪ್ರತಿಕ್ರಿಯೆ : ವೆಂಕಯ್ಯ ನಾಯ್ಡು ಕರ್ನಾಟಕಕ್ಕೆ ದ್ರೋಹ ಮಾಡಿಲ್ಲವೇ?]