ನಿರೀಕ್ಷೆಯಂತೆ ಜಿ ಪರಮೇಶ್ವರ್ ಅವರಿಗೆ ಗೃಹ ಖಾತೆ
ಬೆಂಗಳೂರು, ಅಕ್ಟೋಬರ್ 30 : ನಿರೀಕ್ಷೆಗೆ ತಕ್ಕಂತೆ ರಾಜ್ಯ ಗೃಹ ಖಾತೆಯನ್ನು ಕೆಜೆ ಜಾರ್ಜ್ ಅವರಿಂದ ಕಿತ್ತುಕೊಂಡು ಹೊಸದಾಗಿ ಸಿದ್ದರಾಮಯ್ಯ ಸಂಪುಟ ಸೇರಿಕೊಂಡಿರುವ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದ ಡಾ. ಜಿ. ಪರಮೇಶ್ವರ ಅವರಿಗೆ ಬಳುವಳಿಯಾಗಿ ನೀಡಲಾಗಿದೆ.
ಉಪ ಮುಖ್ಯಮಂತ್ರಿ ಖಾತೆ ನೀಡಬೇಕೆಂದು ಪಟ್ಟುಹಿಡಿದು, ಕಡೆಗೆ ಹೈಕಮಾಂಡ್ ಒತ್ತಾಯಕ್ಕೆ ಮಣಿದು ಸಿದ್ದರಾಮಯ್ಯ ಸಂಪುಟ ಸೇರಿರುವ ಪರಮೇಶ್ವರ್ ಅವರಿಗೆ ಗೃಹ ಖಾತೆಯನ್ನು ಬಳುವಳಿಯನ್ನಾಗಿ ನೀಡಲಾಗಿದೆ. ಮುಖ್ಯಮಂತ್ರಿ ಸ್ಥಾನದ ನಂತರದ ಪ್ರಮುಖ ಖಾತೆಯನ್ನು ಪರಮೇಶ್ವರ್ ನಿಭಾಯಿಸಲಿದ್ದಾರೆ. [ನಮ್ಮ ತಂದೆಯೇ ನನಗೆ ಕ್ಷೌರ ಮಾಡುತ್ತಿದ್ದರು: ಪರಮೇಶ್ವರ]
ಗುರುವಾರ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ಪರಮೇಶ್ವರ್ ಸೇರಿದಂತೆ ಇತರ ಮೂವರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾತೆ ಹಂಚಿಕೆ ಮಾಡಿದ್ದಾರೆ. ಧಾರವಾಡ ಶಾಸಕ ವಿನಯ್ ಕುಮಾರ್ ಅವರಿಗೆ ಗಣಿ ಮತ್ತು ಭೂವಿಜ್ಞಾನ, ಅರಕಲಗೂಡು ಶಾಸಕ ಎ ಮಂಜು ಅವರಿಗೆ ಪಶು ಸಂಗೋಪನೆ ಮತ್ತು ಹಾನಗಲ್ ಶಾಸಕ ಮನೋಹರ್ ತಹಶೀಲ್ದಾರ್ ಅವರಿಗೆ ಅಬಕಾರಿ ಖಾತೆ ನೀಡಲಾಗಿದೆ.
ಗೃಹ ಖಾತೆ ಕಳೆದುಕೊಂಡಿರುವ ಸರ್ವಜ್ಞ ನಗರದ ಶಾಸಕ ಕೆಜೆ ಜಾರ್ಜ್ ಅವರಿಗೆ ಬೆಂಗಳೂರು ಉಸ್ತುವಾರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನೀಡಲಾಗಿದೆ. ಜಾರ್ಜ್ ಅವರಿಗೆ ಇದು ಒಂದು ರೀತಿ ಹಿಂಬಡ್ತಿ ಎಂದೇ ರಾಜಕೀಯ ಅಂಗಳದಲ್ಲಿ ಮಾತುಗಳು ಕೇಳಿಬರುತ್ತಿವೆ. ಗೃಹ ಸಚಿವರಾಗಿ ಜಾರ್ಜ್ ಅವರು ಹಲವಾರು ಪ್ರಕರಣಗಳನ್ನು ನಿಭಾಯಿಸುವಲ್ಲಿ ಸೋತಿರುವುದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು. [ಗೃಹ ಸಚಿವರಾಗಿ ಕೆಜೆ ಜಾರ್ಜ್ ಎಡವಿರುವುದು ಎಲ್ಲೆಲ್ಲಿ?]