ಹಾವೇರಿ: ಮುಂಗಾರು ಕೈಕೊಟ್ಟಿದ್ದಕ್ಕೆ ಹತಾಶೆ; ರೈತನಿಂದ ಬಾಳೆ ತೋಟ ನಾಶ
ಸತತ ಮೂರನೇ ವರ್ಷವೂ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಹತಾಶೆಗೊಂಡ ಹಾವೇರಿ ರೈತನೊಬ್ಬ ಅರೆಬರೆ ಫಸಲು ಹೊಂದಿದ್ದ ತನ್ನ ಬಾಳೆ ತೋಟವನ್ನು ಸಂಪೂರ್ಣವಾಗಿ ನಾಶಗೊಳಿಸಿದ್ದಾನೆ.
ಹುಬ್ಬಳ್ಳಿ, ಜೂನ್ 19: ರಾಜ್ಯದ ವಿವಿಧೆಡೆ ಕಳೆದ ೧೫ ದಿನಗಳಿಂದ ಮುಂಗಾರು ಉತ್ತಮವಾಗಿ ಆಗುತ್ತಿದೆ. ಇನ್ನು ಕೆಲವಡೆ ಮಳೆಯಿಂದಾಗಿ ಪ್ರಾಣ ಹಾಗೂ ಬೆಳೆ ಹಾನಿಯೂ ಸಂಭವಿಸಿದೆ. ಆದರೆ, ಹಾವೇರಿ ಜಿಲ್ಲೆ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. ಸತತ ಮೂರು ವರ್ಷಗಳಿಂದ ಮಳೆ ಕೊರತೆಯಿಂದ ಬರಗಾಲದಲ್ಲಿ ಬೆಂದಿರುವ ಹಾವೇರಿ ಜಿಲ್ಲೆಯ ರೈತರಿಗೆ ಈ ಬಾರಿಯೂ ಮುಂಗಾರು ಕೈಕೊಟ್ಟಿದೆ.
ಇದರ ಪರಿಣಾಮವಾಗಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದ ರೈತ ಗುಡ್ಡಪ್ಪ ಶಿವಣ್ಣನವರ ತಮ್ಮ ೨.೫ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆಯನ್ನು ಗುರುವಾರ ನಾಶಪಡಿಸಿದ ಘಟನೆ ನಡೆದಿದೆ. ೩.೫ ಲಕ್ಷ ಖರ್ಚು ಮಾಡಿ ತಮ್ಮ ಜಮೀನಿನಲ್ಲಿ ಬಾಳೆ ಬೆಳೆದಿದ್ದ ಗುಡ್ಡಪ್ಪ, ಬೇಸಿಗೆಯಲ್ಲೂ ಕಷ್ಟಪಟ್ಟು ನೀರಿನ ವ್ಯವಸ್ಥೆ ಮಾಡಿದ್ದ.
ಮಡಿಕೇರಿಯಲ್ಲಿ ಭತ್ತದ ಬೆಳೆ ಕುಂಠಿತವಾಗಿದ್ದು ಯಾಕೆ?
ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗುವ ಭರವಸೆಯಿಂದ ಕಾಯ್ದು ಕುಳಿತಿದ್ದ ರೈತನಿಗೆ ಭಾರಿ ನಿರಾಸೆಯಾಗಿದ್ದು, ಕಳೆದ ೧೫ ದಿನಗಳಿಂದ ಮಳೆಯಾಗದ್ದರಿಂದ ಕಂಗಾಲಾಗಿ ಹುಲುಸಾಗಿ ಬೆಳೆದು ನಿಂತಿದ್ದ ಬಾಳೆಯನ್ನು ನೆಲಸಮಗೊಳಿಸಿದ್ದಾರೆ.
ದಿಕ್ಕುತೋಚದೆ ಹತಾಶೆ
'ಬೇಸಿಗೆಯಲ್ಲಿ ಹೇಗೋ ಕಷ್ಟಪಟ್ಟು ಬಾಳೆ ಬೆಳೆಗೆ ನೀರು ಪೂರೈಕೆ ಮಾಡಿದ್ದೆವು. ಉತ್ತಮ ಮುಂಗಾರು ನಿರೀಕ್ಷೆಯಲ್ಲಿದ್ದ ನಮಗೆ ಮಳೆ ಬಾರದಿರುವುದು ತೀವ್ರ ನಿರಾಸೆ ಮೂಡಿಸಿದೆ. ಜಮೀನಿನಲ್ಲಿ ಕೊರೆಯಿಸಲಾಗಿದ್ದ ಬೋರ್ವೆಲ್ ಕೂಡಾ ಸಂಪೂರ್ಣ ಬತ್ತಿ ಹೋಗಿದ್ದು, ಬೆಳೆದು ನಿಂತ ಬಾಳೆಗೆ ಫಸಲು ನೀಡುವ ಸಮಯದಲ್ಲಿ ತೀವ್ರ ನೀರಿನ ಕೊರತೆ ತಲೆದೂರಿತು. ದಿಕ್ಕು ತೋಚದೆ ಪೂರ್ಣ ಬಾಳೆ ಬೆಳೆಯನ್ನು ನಾಶಪಡಿಸಿದ್ದೇನೆ' ಎಂದು ಅವಲತ್ತುಕೊಂಡರು.
ಸರ್ಕಾರಕ್ಕಿದು ಅರ್ಥವಾಗೋದ್ಯಾವಾಗ?
'ಇದು ನನ್ನ ಒಬ್ಬನ ಸಮಸ್ಯೆಯಲ್ಲ. ಬ್ಯಾಡಗಿ ತಾಲೂಕಿನಾದ್ಯಂತ ಬಹುತೇಕ ರೈತರ ಬೆಳೆಗಳು ಮಳೆಯಿಲ್ಲದೆ ಒಣಗಲಾರಂಭಿಸಿವೆ. ಅದರಲ್ಲೂ ಬಾಳೆ ಬೆಳೆದ ರೈತರ ಪಾಡು ಆ ದೇವರಿಗೆ ಪ್ರೀತಿ. ಪುಡಿಗಾಸು ಬೆಳೆ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುವ ಸರ್ಕಾರಗಳಿಗೆ ರೈತರ ಸಮಸ್ಯೆ ಅರ್ಥವಾಗುವುದು ಯಾವಾಗ?' ಎಂದು ಗುಡ್ಡಪ್ಪ ಪ್ರಶ್ನಿಸುತ್ತಾರೆ.
ಮುಂಗಾರು ಪ್ರವೇಶ ವಿಳಂಬ, ಬೆಂಗಳೂರಲ್ಲಿ ಜೋರು ಮಳೆ ಸದ್ಯಕ್ಕಿಲ್ಲ!
ಪಶು-ಪಕ್ಷಿಗಳಿಗೂ ನೀರಿಲ್ಲ
ಹಾವೇರಿ ಜಿಲ್ಲೆಯಲ್ಲಿ ತುಂಗಭದ್ರ, ವರದಾ, ಧರ್ಮಾ ಹಾಗೂ ಕುಮಧ್ವತಿ ನದಿಗಳು ಹರಿದಿದ್ದು, ಮುಂಗಾರು ಆರಂಭವಾಗಿ ಎರಡು ವಾರ ಕಳೆದರೂ ನೀರಿಲ್ಲದೆ ಬಿಕೋ ಎನ್ನುತ್ತಿವೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ತುಂಬಿ ಹರಿಯುತ್ತಿದ್ದ ಈ ನದಿಗಳಲ್ಲಿ ಸದ್ಯಕ್ಕೆ ಪಶು-ಪಕ್ಷಿಗಳಿಗೆ ಕುಡಿಯಲೂ ನೀರು ಸಿಗದಿರುವುದು ಮುಂಗಾರು ಕೊರತೆಯ ಗಂಭೀರತೆಗೆ ಸ್ಪಷ್ಟ ಉದಾಹರಣೆಯಾಗಿದೆ.
ಎಲ್ಲರೂ ಹತಾಶೆಯಲ್ಲಿ
ಮಲೆನಾಡಿಗೆ ಹತ್ತಿಕೊಂಡಿದ್ದರೂ ಆರಂಭದಲ್ಲಿಯೇ ಮುಂಗಾರು ಕೈಕೊಟ್ಟಿರುವುದು ಇದೇ ಮೊದಲು ಎನ್ನುತ್ತಾರೆ ಇಲ್ಲಿನ ರೈತರು. ಅಲ್ಲದೆ, ವಾಣಿಜ್ಯ ಬೆಳೆಗಳನ್ನು ಬಿತ್ತಿರುವವರಂತೂ ತೀವ್ರ ಹತಾಶೆಯಲ್ಲಿದ್ದಾರೆ.
ನೀರಿನ ಸುಳಿವೇ ಇಲ್ಲ!
ಕಳೆದ ೧೫ ದಿನಗಳಲ್ಲಿ ವಾಡಿಕೆಯ ಶೇ. ೨೦ರಷ್ಟು ಮಾತ್ರ ಮಳೆ ಬಿದ್ದಿದ್ದು, ಹೂಳು ತೆಗೆಸಿ ಮಳೆಗಾಗಿ ಬಾಯಿ ಬಿಟ್ಟು ಕೂತಿರುವ ಜಿಲ್ಲೆಯ ಬಹುತೇಕ ಕೆರೆಗಳಲ್ಲಿ ನೀರಿನ ಸುಳಿವಿಲ್ಲದಿರುವುದು ಮತ್ತೊಂದು ಬರ ಎದುರು ನೋಡುವ ಸ್ಥಿತಿ ಎದುರಾಗಿದೆ.