ಗಣಪತಿ ಪರವಾಗಿ ಮಡಿಕೇರಿಯಲ್ಲಿ ನಾಲ್ಕುಚಕ್ರ ವಾಹನಗಳ ಸದ್ದು
ಮಡಿಕೇರಿ, ಜುಲೈ 16 : ಆತ್ಮಹತ್ಯೆ ಮಾಡಿಕೊಂಡ ಮಂಗಳೂರು ಡಿವೈಎಸ್ಪಿ ಎಂಕೆ ಗಣಪತಿ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಪೊನ್ನಂಪೇಟೆ ಕೊಡವ ಸಮಾಜ ಶುಕ್ರವಾರ ನಾಲ್ಕುಚಕ್ರ ವಾಹನಗಳ ಜಾಥಾ ನಡೆಸಿ ಈ ಹೋರಾಟಕ್ಕೆ ಬೆಂಬಲ ಸೂಚಿಸಿದೆ.
ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆಗೆ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಿ, ಸಚಿವ ಜಾರ್ಜ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು, ಪೊಲೀಸ್ ಅಧಿಕಾರಿಗಳಾದ ಪ್ರಣಬ್ ಮೊಹಂತಿ, ಎ.ಎಂ. ಪ್ರಸಾದ್ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಕೊಡಗಿನಲ್ಲಿ ಹೋರಾಟ ನಡೆಯುತ್ತಿದೆ. ಗುರುವಾರ ಕೊಡಗು ಬಂದ್ ಕೂಡ ನಡೆಸಲಾಯಿತು.
ಸಾವಿರಾರು ಸಂಖ್ಯೆಯಲ್ಲಿ ವಾಹನಗಳೊಂದಿಗೆ ಆಗಮಿಸಿದ ಪ್ರತಿಭಟನಾಕಾರರು ಪೊನ್ನಂಪೇಟೆಯಿಂದ ಮಡಿಕೇರಿ ತನಕ, ಮತ್ತೊಂದೆಡೆ ಸೋಮವಾರಪೇಟೆಯಿಂದ ಮಡಿಕೇರಿಗೆ ಹೀಗೆ ಎರಡು ಕಡೆಯಿಂದ ಜಾಥಾ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. [ಗಣಪತಿ ಕುಟುಂಬಕ್ಕೆ ಬಿಜೆಪಿ ನಾಯಕರ ಸಾಂತ್ವನ]
ಕಪ್ಪು ಬಾವುಟ ಪ್ರದರ್ಶನ, ಧಿಕ್ಕಾರದ ಘೋಷಣೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ತನಕ ಭಾರೀ ಸಂಖ್ಯೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ಪ್ರಪ್ರಥಮ ಬಾರಿಗೆ ನಾಲ್ಕು ಚಕ್ರ ವಾಹನ ಜಾಥಾ ನಡೆದಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಮಡಿಕೇರಿಗೆ ಆಗಮಿಸಿದ ಕಾರಣ ಸಂಚಾರ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿತ್ತು. ಎಲ್ಲೆಡೆ ಕಪ್ಪು ಬಾವುಟ ಪ್ರದರ್ಶನ, ಧಿಕ್ಕಾರದ ಘೋಷಣೆಗಳು ಕೇಳಿಬಂದವು. ಗಾಂಧಿ ಮೈದಾನಕ್ಕೆ ಆಗಮಿಸಿದ ಪ್ರತಿಭಟನಾಕಾರರು ಅಲ್ಲಿಂದ ಕಾಲ್ನಡಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಮನವಿ ಸಲ್ಲಿಸಿದರು. [ಗಣಪತಿ ಆತ್ಮಹತ್ಯೆ ಸಿಐಡಿ ವರದಿ ಸೋರಿಕೆ, ಸರಕಾರಕ್ಕೆ ಮುಜುಗರ?]
ಪೊನ್ನಂಪೇಟೆ ಕೊಡವ ಸಮಾಜದ ನಿರ್ಧಾರದಂತೆ ಪೊನ್ನಂಪೇಟೆ ಕೊಡವ ಸಮಾಜದಿಂದ ಹೊರಟ ಜಾಥಾಕ್ಕೆ ಸಮಾಜದ ಸ್ಥಾಪಕ ಅಧ್ಯಕ್ಷ ಮದ್ರೀರ ಗಿಣಿ ಸೋಮಯ್ಯ ಈಡುಗಾಯಿ ಒಡೆದು ಚಾಲನೆ ನೀಡಿದರು. ಜಾಥಾಕ್ಕೆ ಹಲವು ಸಂಘಗಳು ಸಾಥ್ ನೀಡಿದವು. ಒಂದು ವೇಳೆ ಸರ್ಕಾರ ಬಗ್ಗದಿದ್ದರೆ ಕೊಡಗಿನಿಂದ ಬೆಂಗಳೂರಿಗೆ ಜಾಥಾ ನಡೆಸುವ ಎಚ್ಚರಿಕೆಯನ್ನು ನೀಡಲಾಗಿದೆ. [ಸಿಐಡಿ ವರದಿ ಸೋರಿಕೆಯಾಗಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ]