ಪತ್ನಿ, ಮಾವ ಸೇರಿ ಟೆಕ್ಕಿ ಕೇಶವ ರೆಡ್ಡಿ ಕೊಂದರು
ಬೆಂಗಳೂರು, ಜೂ. 10 : ಸಾಫ್ಟ್ ವೇರ್ ಇಂಜಿನಿಯರ್ ಕೇಶವ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ, ಮಾವ ಸೇರಿದಂತೆ ನಾಲ್ವರನ್ನು ಶ್ರೀನಿವಾಸಪುರ ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಬಂಧಿತರನ್ನು ಕೇಶವ ರೆಡ್ಡಿ ಪತ್ನಿ ಶಿಲ್ಪಾ, ಮಾವ ರಾಮಚಂದ್ರ, ಅತ್ತೆ ವಿಜಯಲಕ್ಷ್ಮೀ ಮತ್ತು ಶಿಲ್ಪಾ ಸಂಬಂಧಿಕರಾದ ವಾಸು ಎಂದು ಗುರುತಿಸಲಾಗಿದೆ. ಶಿಲ್ಪಾ ಮತ್ತು ವಾಸು ಅವರು ಕೇಶವ ರೆಡ್ಡಿ ಅವರನ್ನು ಕೊಲೆ ಮಾಡಿದ್ದು, ರಾಮಚಂದ್ರ ಅವರ ಸಹಾಯದಿಂದ ಶವವನ್ನು ಶ್ರೀನಿವಾಸಪುರಕ್ಕೆ ಸಾಗಣೆ ಮಾಡಿದ್ದರು. [ಟೆಕ್ಕಿ ಕೇಶವ ರೆಡ್ಡಿ ಶವ ಪತ್ತೆ]
ಚಿತ್ತೂರು ಜಿಲ್ಲೆ ತಂಬಾಲಪಲ್ಲಿ ತಾಲೂಕಿನ ನಿವಾಸಿ ಕೇಶವ ರೆಡ್ಡಿ (35) ಅವರ ಶವ ಕೊಳೆತ ಸ್ಥಿತಿಯಲ್ಲಿ ಶ್ರೀನಿವಾಸಪುರ ತಾಲೂಕಿನ ಕಬಿರೇಲಾಗಡ್ಡ ಕೆರೆಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿತ್ತು. ರೆಡ್ಡಿ ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿನ ಆಕ್ಟೀವ್ ಇಂಡಿಯಾ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. [ಸಿಡ್ನಿಯಲ್ಲಿ ಟೆಕ್ಕಿ ಪಂಕಜ್ ಸಾವಿಗೆ ಏನು ಕಾರಣ?]
ಪತ್ನಿಯೇ ಹಂತಕಿ : ಕೌಟುಂಬಿಕ ಕಲಹದಿಂದಾಗಿ ಈ ಕೊಲೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಜೂನ್ 6ರ ಶನಿವಾರ ರಾತ್ರಿ ಬೆಂಗಳೂರಿನ ಬನಶಂಕರಿಯಲ್ಲಿನ ಕೇಶವ ರೆಡ್ಡಿ ನಿವಾಸದಲ್ಲಿ ಈ ಕೊಲೆ ಮಾಡಲಾಗಿತ್ತು, ನಂತರ ಶವವನ್ನು ಶ್ರೀನಿವಾಸಪುರಕ್ಕೆ ತೆಗೆದುಕೊಂಡು ಹೋಗಿ ಕೆರೆಯಲ್ಲಿ ಹಾಕಲಾಗಿತ್ತು.
ಶನಿವಾರ ರಾತ್ರಿ ಊಟದಲ್ಲಿ ನಿದ್ದೆ ಮಾತ್ರೆಯನ್ನು ಬೆರೆಸಿಕೊಟ್ಟ ಶಿಲ್ಪಾ ಅವರು ಸಂಬಂಧಿಕ ವಾಸು ಜೊತೆ ಸೇರಿ ಮಾರಕಾಸ್ತ್ರಗಳಿಂದ ಹೊಡೆದು ಕೇಶವ ರೆಡ್ಡಿ ಅವರನ್ನು ಕೊಲೆ ಮಾಡಿದ್ದರು. ನಂತರ ತಂದೆ ರಾಮಚಂದ್ರ ಅವರ ಸಹಾಯಪಡೆದು ಶವವನ್ನು ಸಾಗಿಸಿದ್ದರು.