ಜಯಲಲಿತಾ ನಿರ್ದೋಷಿ: ಸಿದ್ದರಾಮಯ್ಯಗೆ ಹೆಚ್ಚಿದ ಒತ್ತಡ
ಬೆಂಗಳೂರು, ಮೇ 13: ತಮಿಳುನಾಡು ಮಾಜಿ ಮುಖ್ಯಮಂತ್ರಿ ಸೆಲ್ವಿ ಜಯಲಲಿತಾ ನಿರ್ದೋಷಿಯೆಂದು ತೀರ್ಪು ನೀಡಿರುವುದು ಅಮ್ಮ ಅಭಿಮಾನಿಗಳಿಗೆ ಹೊಸ ಚೈತನ್ಯವನ್ನು ನೀಡಿದೆ.
ಜಯಾ ನಿರ್ದೋಷಿಯೆಂದು ತೀರ್ಪು ಹೊರ ಬೀಳುತ್ತಿದ್ದಂತೆಯೇ ಬರೀ ತಮಿಳುನಾಡಿನಲ್ಲಿ ಯಾಕೆ ತಮಿಳು ಭಾಷಿಗರಿಗೆ ಕರ್ನಾಟಕದ ತಮಿಳುನಾಡಿನಂತಿರುವ ಬೆಂಗಳೂರಿನಲ್ಲಿ ಜಯಾ ಅಭಿಮಾನಿಗಳ ಮತ್ತು ಭಕ್ತರ ಸಂಭ್ರಮ ವರ್ಣಿಸಲಸಾಧ್ಯವಾಗಿತ್ತು.
ಬಸ್ ನಿಲ್ದಾಣ, ಕೆ ಆರ್ ಮಾರುಕಟ್ಟೆ, ಶಿವಾಜಿನಗರ, ಕಂಟೋನ್ಮೆಂಟ್ ಮುಂತಾದೆಡೆ ಜಯಾ ಅಭಿಮಾನಿಗಳ 'ಅಭಿಮಾನದ ವಿಜಯೋತ್ಸವ' ಕನ್ನಡಿಗರೇ ನಾಚಿಸುವಂತಿತ್ತು. ಪಟಾಕಿ ಸಿಡಿಸಿ, ಸಿಹಿಹಂಚಿ, ಒಬ್ಬರೊನ್ನಬ್ಬರು ಆಲಂಗಿಸಿಕೊಂಡು ಜಯಲಲಿತಾ ಮೇಲೆ ತೋರುತ್ತಿದ್ದ ಪ್ರೀತಿ ಅಷ್ಟಿಷ್ಟಲ್ಲ.
ಜಯಾ ಖುಲಾಸೆಯ ಸುದ್ದಿಯ ನಡುವೆ, ಇಷ್ಟು ದಿನ ಸುಮ್ಮನಿದ್ದ ಜಯಾ ಅಭಿಮಾನಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಮೇಲೆ ಮತ್ತೆ ಈಗ ಒತ್ತಡ ಹೇರಲಾರಂಭಿಸಿದ್ದಾರೆ. (ಬೆಂಗಳೂರಿಗೆ ಬಂತು ಅಮ್ಮಾ ಕ್ಯಾಂಟೀನ್)
ಮುಂದೆ ಓದಿ..
ಜಯಾ ಅಭಿಮಾನಿಗಳಿಂದ ಸಿದ್ದುಗೆ ಒತ್ತಾಯ
ನಗರದ ಜನನಿಬಿಡ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ 'ಅಮ್ಮಾ ಕ್ಯಾಂಟೀನ್' ತೆರೆಯಲು ಸಿದ್ದರಾಮಯ್ಯ ಸರಕಾರ ಅನುಮತಿ ನೀಡಬೇಕೆನ್ನುವುದು ಜಯಾ ಅಭಿಮಾನಿಗಳ ಒತ್ತಾಯ.
ಜಯಾ ಯೋಜನೆಗಳು
ಜಯಾ ಸಿಎಂ ಆಗಿದ್ದ ಅವಧಿಯಲ್ಲಿ ಹಲವು ಜನಪರ ಯೋಜನೆಗೆ ಚಾಲನೆ ನೀಡಿದ್ದರು. ಅದರಲ್ಲಿ ಪ್ರಮುಖವಾಗಿ ಅಮ್ಮಾ ಕ್ಯಾಂಟೀನ್, ಅಮ್ಮಾ ಫಾರ್ಮಸಿ, ಅಮ್ಮಾ ಸಿಮೆಂಟ್, ಅಮ್ಮಾ ಮಿನರಲ್ ವಾಟರ್ ಮುಂತಾದವು. ಬರೀ ಘೋಷಣೆ ಮಾಡದೇ ಯೋಜನೆ ಸೂಕ್ತ ರೀತಿಯಲ್ಲಿ ಜಾರಿಯಾಗುವಂತೆ ಮಾಡುವಲ್ಲೂ ಜಯಾ ಹೆಚ್ಚುಕಮ್ಮಿ ಯಶಸ್ವಿಯಾಗಿದ್ದರು.
ಅಮ್ಮಾ ಕ್ಯಾಂಟೀನ್
ಜಯಾ ಸರಕಾರದ ಜನಪ್ರಿಯ ಯೋಜನೆಗಳಲ್ಲೊಂದಾದ ಅಮ್ಮಾ ಕ್ಯಾಂಟೀನ್ ತಮಿಳುನಾಡು ಹೊರತಾಗಿ ಬೆಂಗಳೂರಿನ ಕಲಾಸಿಪಾಳ್ಯದಲ್ಲೂ ಆರಂಭವಾಗಿತ್ತು. ಕಲಾಸಿಪಾಳ್ಯದ ನಾಗೇಶ್ವರ ಗಾರ್ಡನ್ ನಲ್ಲಿ ರಾಜ್ಯ ಎಐಎಡಿಎಂಕೆ ಮಾಜಿ ಕಾರ್ಯದರ್ಶಿ ಕೃಷ್ಣರಾಜು ಆರಂಭಿಸಿದ್ದರು.
ಒಂದು ರೂಪಾಯಿಗೆ ಇಡ್ಲಿ
ಐದು ರೂಪಾಯಿಗೆ ಪೊಂಗಲ್ ಮತ್ತು ಅನ್ನಸಾಂಬಾರ್. ಮೂರು ರೂಪಾಯಿಗೆ ಮೊಸರನ್ನ, ಭಾನುವಾರದಂದು ಒಂದು ರೂಪಾಯಿಗೆ ಒಂದು ಇಡ್ಲಿ ನೀಡಲಾರಂಭಿಸಿದ್ದರು. ಸರಕಾರ ಅಗತ್ಯ ಬೆಂಬಲ ನೀಡಿದರೆ ಪ್ರತೀ ದಿನ ಈ ಸ್ಕೀಂ ವಿಸ್ತರಿಸಲಾಗುವುದು ಎಂದು ಕೃಷ್ಣರಾಜು ಹೇಳಿದ್ದರು.
ಆಮೇಲೆ ಸುದ್ದಿಯಿಲ್ಲ
ಜಯಾ ಬಂಧನವಾಗಿ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೇ ಅಮ್ಮಾ ಕ್ಯಾಂಟೀನ್ ಸುದ್ದಿಯಲ್ಲಿರಲಿಲ್ಲ. ಈಗ ಜಯಾ ಖುಲಾಸೆಗೊಳ್ಳುತ್ತಿದ್ದಂತೆಯೇ ಮತ್ತೆ ಅಮ್ಮಾ ಕ್ಯಾಂಟೀನಿಗೆ ಸರಕಾರ ಬೆಂಬಲ ನೀಡಬೇಕೆಂದು ಅವರ ಅಭಿಮಾನಿಗಳು ಒತ್ತಾಯಿಸಲು ಆರಂಭಿಸಿದ್ದಾರೆ.
ಗಲಾಟೆ ಇತ್ತಲ್ವಾ, ಅದಕ್ಕೆ ಸುಮ್ಮನಿದ್ವಿ
ಇಷ್ಟು ದಿನ ಗಲಾಟೆ ಇತ್ತಲ್ವ ಅದಕ್ಕೆ ಸುಮ್ಮನಿದ್ವಿ, ಈಗ ನಮ್ಮ ಅಮ್ಮ ಫ್ರೀಆಗಿದ್ದಾರೆ. ಸಿದ್ದರಾಮಯ್ಯ ಸರಕಾರ ಅಮ್ಮಾ ಕ್ಯಾಂಟೀನಿಗೆ ಸಹಕಾರ ನೀಡಬೇಕು. ಇದರಿಂದ ಬಡವರಿಗೆ ತುಂಬಾ ಸಹಾಯ ಆಗುತ್ತೆ ಎನ್ನುವುದು ಕಲಾಸಿಪಾಳ್ಯದ ಬೀದಿ ವ್ಯಾಪಾರಿ ಇಳವರಸಿ ಹೇಳುವ ಮಾತು.
ಹಸಿವು ನಿವಾರಿಸಿದ್ದಾರೆ
ನಮ್ಮ ಅಮ್ಮ ತುಂಬಾ ಜನರ ಹಸಿವು ನಿವಾರಿಸಿದ್ದಾರೆ. ಇದು ಬೆಂಗಳೂರಿನಲ್ಲಿ ಬಂದರೆ ತಪ್ಪೇನು, ಇಲ್ಲಾಂದ್ರೆ ಸಿದ್ರಾಮಣ್ಣ ಸರಕಾರ ಇಂಥಾ ಯೋಜನೆ ಆರಂಭಿಸಲಿ, ಇಲ್ಲಾ ಇದಕ್ಕೆ ಸಹಕಾರ ನೀಡಲಿ ಅನ್ನುತ್ತಾರೆ ಕಲಾಸಿಪಾಳ್ಯದಲ್ಲಿರುವ ಈರೋಡ್ ಮೂಲದ ವ್ಯಾಪಾರಿ ಸೆಲ್ವಿ.
ನಾವು ಬಡವರು
ನಾವು ಬಡವರು, ದಿನದ ಕೂಲಿಯಿಂದ ಜೀವನ ಸಾಗಿಸುತ್ತಿದ್ದೇವೆ, ನಮಗೆ ಕಮ್ಮಿದರದಲ್ಲಿ ಊಟ ಬೇಕು, ಅದಕ್ಕೆ ಅಮ್ಮಾ ಕ್ಯಾಂಟೀನ್ ಬೆಂಗಳೂರಿನಲ್ಲಿ ತೆರಯಲಿ, ಸರಕಾರ ಪರ್ಮಿಷನ್ ಕೊಡಬೇಕು ಎಂದು ಜಯಾ ಅಭಿಮಾನಿಯೂ ಆಗಿರುವ ತರಕಾರೀ ವ್ಯಾಪಾರಿ ಮೀನಾಕ್ಷಿ ಒತ್ತಾಯಿಸುತ್ತಾರೆ.