'ಕುಮಾರಸ್ವಾಮಿ ಪತ್ನಿ ನಟಿಯಲ್ಲವೇ, ಮಗ ಹೀರೋ ಅಲ್ಲವೇ?'
ಮಂಡ್ಯ, ಫೆಬ್ರವರಿ 17 : 'ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರ ಕಾಲ್ಗುಣ ಸರಿಯಿಲ್ಲ, ರಮ್ಯಾ ಅವರು ಸಿನಿಮಾ ನಟಿ, ಮತದಾರರು ಅವರನ್ನು ನಂಬಬಾರದು' ಎಂದು ಹೇಳಿಕೆ ನೀಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಮ್ಯಾ ಅವರು ತಿರುಗೇಟು ಕೊಟ್ಟಿದ್ದಾರೆ. ['ಕಾಂಗ್ರೆಸ್ ಹೈಕಮಾಂಡ್ ರಮ್ಯಾಗೆ ಬುದ್ಧಿ ಹೇಳಲಿ']
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಮಾತಿಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿರುವ ರಮ್ಯಾ ಅವರು, 'ರೈತರ ಆತ್ಮಹತ್ಯೆ ಸಂಗತಿಯನ್ನು ರಾಜಕೀಯಕ್ಕೆ ಎಳೆದು ತರುವುದು ತಪ್ಪು. ಕುಮಾರಸ್ವಾಮಿ ಅವರಂತೆ ನಾನು ಚಿಲ್ಲರೆ ರಾಜಕೀಯ ಮಾಡುವುದಿಲ್ಲ' ಎಂದು ಉತ್ತರಿಸಿದ್ದಾರೆ. [ರಮ್ಯಾ ವಿರುದ್ದ ಕುಮಾರಸ್ವಾಮಿ ಗಂಭೀರ ಆರೋಪ]
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮಂಗಳವಾರ ಮಾತನಾಡಿ ರಮ್ಯಾ ಅವರು, 'ಕುಮಾರಸ್ವಾಮಿ ಅವರು ಸ್ವತಃ ಸಿನಿಮಾ ನಿರ್ಮಾಪಕರು. ಅವರ ಹೆಂಡತಿ ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಗ ಕೂಡಾ ಹೀರೋ ಆಗಿ ಸಿನಿಮಾ ಮಾಡುತ್ತಿದ್ದಾರೆ. ಇದನ್ನು ತಿಳಿದು ಬೇರೆಯವರ ಬಗ್ಗೆ ಮಾತನಾಡುವುದನ್ನು ಕಲಿಯಲಿ' ಎಂದು ರಮ್ಯಾ ತಿರುಗೇಟು ಕೊಟ್ಟಿದ್ದಾರೆ. [ರಮ್ಯಾ ನಂಬರಿಗೆ ಮಿಸ್ ಕಾಲ್ ಕೊಡಿ, ಸಮಸ್ಯೆ ಹೇಳಿ]
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದ ಕುಮಾರಸ್ವಾಮಿ ಅವರು, ಕೆ.ಆರ್. ಪೇಟೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, 'ರಮ್ಯಾ ಅವರು ಕಾಲಿಟ್ಟ ನಂತರ ಮಂಡ್ಯದಲ್ಲಿ 100 ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕ್ಷೇತ್ರದ ಜನರಿಗೆ ರಮ್ಯಾ ಅವರು ಕೊಟ್ಟ ಬಳುವಳಿ. ಅವರು ಸಿನಿಮಾ ನಟಿ, ಅವರನ್ನು ಮತದಾರರು ನಂಬಬಾರದು' ಎಂದು ಹೇಳಿಕೆ ನೀಡಿದ್ದರು. ರಮ್ಯಾ ಕೊಟ್ಟ ಉತ್ತರವೇನು? ಚಿತ್ರಗಳಲ್ಲಿ ನೋಡಿ....
ಕುಮಾರಸ್ವಾಮಿ ಅವರಿಗೆ ಉತ್ತರ ಕೊಟ್ಟ ರಮ್ಯಾ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರ ನಡುವಿನ ವಾಕ್ಸಮರ ಮುಂದುವರೆದಿದೆ. 'ರಮ್ಯಾ ಅವರ ಕಾಲ್ಗುಣ ಸರಿಯಿಲ್ಲ, ರಮ್ಯಾ ಅವರು ಸಿನಿಮಾ ನಟಿ, ಮತದಾರರು ಅವರನ್ನು ನಂಬಬಾರದು' ಎಂದು ಹೇಳಿಕೆ ನೀಡಿದ್ದ ಕುಮಾರಸ್ವಾಮಿ ಅವರಿಗೆ ರಮ್ಯಾ ಅವರು ತಿರುಗೇಟು ಕೊಟ್ಟಿದ್ದಾರೆ.
'ಮೊದಲು ನಿಮ್ಮ ಫ್ಯಾಮಿಲಿ ನೋಡಿಕೊಳ್ಳಿ'
ಮಂಗಳವಾರ ಮಂಡ್ಯದಲ್ಲಿ ಮಾತನಾಡಿದ ರಮ್ಯಾ ಅವರು, 'ಮಾತೆತ್ತಿದರೆ ಸಿನಿಮಾ ನಟರು ಹಂಗೆ, ಹಿಂಗೆ ಅಂತ ಬೈಯುತ್ತೀರಿ. ಮೊದಲು ನಿಮ್ಮ ಫ್ಯಾಮಿಲಿಯನ್ನು ನೋಡಿಕೊಳ್ಳಿ. ನೀವು ಮೊದಲು ಪ್ರೊಡ್ಯೂಸರ್ ಆಗಿದ್ರಿ. ನಿಮ್ಮ ಹೆಂಡತಿ ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಿಮ್ಮ ಮಗ ಕೂಡ ಹೀರೋ ಆಗಿದ್ದಾನೆ ಅಲ್ವೇ?' ಎಂದು ರಮ್ಯಾ ಅವರು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.
'ಮಾತನಾಡುವುದನ್ನು ಕಲಿಯಲಿ'
'ಕುಮಾರಸ್ವಾಮಿ ಅವರ ಸ್ವತಃ ನಿರ್ಮಾಪಕರು. ಅವರ ಮಗ ಕೂಡ ಸಿನಿಮಾ ಮಾಡುತ್ತಿದ್ದಾರೆ. ಇದನ್ನು ತಿಳಿದುಕೊಂಡು ಅವರು ಬೇರೆಯವರ ಬಗ್ಗೆ ಮಾತನಾಡುವುದನ್ನು ಕಲಿಯಲಿ' ಎಂದು ರಮ್ಯಾ ಅವರು ಸಲಹೆ ನೀಡಿದರು.
'ಚಿಲ್ಲರೆ ರಾಜಕೀಯ ಮಾಡುವುದಿಲ್ಲ'
'ಮಂಡ್ಯ ಜಿಲ್ಲೆಗೆ ನಾನು ಕಾಲಿಟ್ಟ ಬಳಿಕ 100 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದು ತೀವ್ರ ನೋವುಂಟು ಮಾಡಿದೆ, ರೈತರ ಆತ್ಮಹತ್ಯೆ ಸಂಗತಿಯನ್ನು ರಾಜಕೀಯಕ್ಕೆ ಎಳೆದು ತರುವುದು ತಪ್ಪು. ಕುಮಾರಸ್ವಾಮಿ ಅವರಂತೆ ನಾನು ಚಿಲ್ಲರೆ ರಾಜಕೀಯ ಮಾಡುವುದಿಲ್ಲ' ಎಂದು ರಮ್ಯಾ ಹೇಳಿದ್ದಾರೆ.
'ಅವರು ಬಂದಿರುವುದು ಜಿಲ್ಲೆಗೆ ಒಳ್ಳೆಯ ಸಂಗತಿ'
'ಮಂಡ್ಯದಲ್ಲಿ ನಾನು ಜೆಡಿಎಸ್ ಪಕ್ಷವನ್ನು ಮೂಲೆಗುಂಪು ಮಾಡುತ್ತೇನೆ ಎಂಬ ಭಯದಲ್ಲಿ ಸಂಸದ ಪುಟ್ಟರಾಜು ಅವರು ನನ್ನ ವಿರುದ್ಧ ಹಲವು ಇಲ್ಲ ಸಲ್ಲದ ಮಾತನಾಡುತ್ತಿದ್ದಾರೆ. ರಮ್ಯಾ ಅವರ ಆಟ ಜಿಲ್ಲೆಯಲ್ಲಿ ನಡೆಯೋದಿಲ್ಲ ಎಂಬ ಅವರ ಹೇಳಿಕೆಯಲ್ಲಿಯೇ ಭಯ ಕಾಣುತ್ತಿದೆ. ಈ ಭಯ ಮಾಜಿ ಮುಖ್ಯಮಂತ್ರಿಗಳಿಗೂ ಬಂದಿರುವುದು ಜಿಲ್ಲೆಯಲ್ಲಿ ಕಾಂಗ್ರೆಸಸ್ ಪಕ್ಷಕ್ಕೆ ಒಳ್ಳೆಯ ಸಂಗತಿಯಾಗಿದೆ' ಎಂದು ರಮ್ಯಾ ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಅವರು ಹೇಳಿದ್ದೇನು?
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಪ್ರಚಾರ ಕೈಗೊಂಡಿದ್ದ ಕುಮಾರಸ್ವಾಮಿ ಅವರು, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, 'ಮಾಜಿ ಸಂಸದೆ ಮತ್ತು ನಟಿ ರಮ್ಯಾ ಅವರ ಕಾಲ್ಗುಣ ಸರಿಯಿಲ್ಲ. ಅವರು ಜಿಲ್ಲೆಗೆ ಕಾಲಿಟ್ಟ ನಂತರ ಜಿಲ್ಲೆಯಲ್ಲಿ ರೈತರು ನಿರಂತರವಾಗಿ ಸಾವನ್ನಪ್ಪುತ್ತಿದ್ದಾರೆ' ಎಂದು ಹೇಳಿದ್ದರು.
'ಮಂಡ್ಯ ಜಿಲ್ಲೆಗೆ ಇದೇ ಬಳುವಳಿ'
'ರಮ್ಯಾ ಅವರು ಲೋಕಸಭಾ ಅಭ್ಯರ್ಥಿಯಾಗಿ ಕಾಲಿಟ್ಟ ನಂತರ ರೈತರ ಆತ್ಮಹತ್ಯೆಯ ಸರಣಿ ಆರಂಭವಾಯಿತು. ಇದು ಕ್ಷೇತ್ರದ ಜನರಿಗೆ ಅವರು ಕೊಟ್ಟ ಬಳುವಳಿ. ಚುನಾವಣೆಯ ಸಂದರ್ಭದಲ್ಲಿ ಬಂದು ರೈತರ ಕಷ್ಟ ವಿಚಾರಿಸುವುದು ಯಾವ ರೀತಿಯ ರಾಜಕೀಯ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು.
'ಅವರು ನಟಿ ಅವರನ್ನು ನಂಬಬೇಡಿ'
'ರಮ್ಯಾ ಅವರು ಹೋದಲೆಲ್ಲಾ ರೈತರ ಆತ್ಮಹತ್ಯೆ ಸಂಭವಿಸಿದೆ. ರಮ್ಯಾ ಅವರು ಸಿನಿಮಾ ನಟಿ. ಚುನಾವಣೆ ಕಾಲದಲ್ಲಿ ಮಾತ್ರ ಬರುವ ಅವರನ್ನು ಮಂಡ್ಯದ ಜನರು ನಂಬಬಾರದು' ಎಂದು ಕುಮಾರಸ್ವಾಮಿ ಅವರು ಹೇಳಿದ್ದರು.