ಮಲೆನಾಡ ಗಾಂಧಿ, ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡ ವಿಧಿವಶ
ಚಿಕ್ಕಮಗಳೂರು, ಜ. 06: 'ಮಲೆನಾಡ ಗಾಂಧಿ' ಎಂದೇ ಹೆಸರಾಗಿರುವ ಮಾಜಿ ಶಿಕ್ಷಣ ಸಚಿವರಾದ ಎಚ್. ಜಿ ಗೋವಿಂದೇಗೌಡರು ಬುಧವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಗೋವಿಂದೇಗೌಡರು, ಶಿಕ್ಷಣ ಕ್ಷೇತ್ರ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಸ್ವಚ್ಛ ರಾಜಕಾರಣಿ. ಪತ್ನಿ ಶಾಂತಮ್ಮ ಐವರು ಪುತ್ರಿಯರು ಓರ್ವ ಪುತ್ರ ಹಾಗೂ ಆಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಕಳೆದ
ಕೆಲ
ತಿಂಗಳುಗಳಿಂದ
ತೀವ್ರತರಹದ
ಉಸಿರಾಟದ
ತೊಂದರೆ
ಹಾಗು
ಮೂತ್ರಪಿಂಡ
ವೈಫಲ್ಯ
ದಿಂದ
ಬಳಲುತ್ತಿದ್ದ
ಗೋವಿಂದೇಗೌಡರಿಗೆ
ಮಣಿಪಾಲದ
ಆಸ್ಪತ್ರೆ,
ಕೊಪ್ಪದ
ಸರ್ಕಾರಿ
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಕೊಡಿಸಲಾಗಿತ್ತು.
ಈಗ್ಗೆ
ಒಂದು
ವಾರದಿಂದ
ಕೊಪ್ಪದ
ಮಣಿಪುರಿ
ಎಸ್ಟೇಟ್
ನ
ಸ್ವಗೃಹದಲ್ಲಿದ್ದ
ಗೋವಿಂದೇಗೌಡರು
ಬುಧವಾರ
ಮಧ್ಯಾಹ್ನ
ಕೊನೆಯುಸಿರೆಳೆದರು
ಎಂದು
ಅವರ
ಪುತ್ರ
ವೆಂಕಟೇಶ್
ತಿಳಿಸಿದ್ದಾರೆ.
ಎನ್ ಆರ್ ಪುರ ತಾಲೂಕಿನ ಹಿಣಚಿ ಗ್ರಾಮದ ಬಡ ಕೃಷಿಕ ಕುಟುಂಬದಲ್ಲಿ ಗಿಡ್ಡೇ ಗೌಡ ಬೋಬಮ್ಮ ದಂಪತಿಯ ಪುತ್ರರಾಗಿ ಜನಿಸಿದ ಗೊವಿಂದೇಗೌಡರು ಕ್ವಿಟ್ ಇಂಡಿಯಾ, ಮೈಸೂರು ಚಳವಳಿಯಲ್ಲೂ ಭಾಗಿದ್ದರು.
ಎನ್ ಆರ್ ಪುರ, ಕಾನೂರು ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಕೊಪ್ಪದಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣ ಜೊತೆ ಸಂತೆಯಲ್ಲಿ ವ್ಯಾಪಾರ ಮಾಡಿ ಹಣ ಗಳಿಕೆ. ವಿದ್ಯಾರ್ಥಿ ನಾಯಕರಾಗಿ ಬೆಳೆಗದ್ದೆ ಪುಟ್ಟೇಗೌಡರ ಪ್ರಭಾವದಿಂದ ಕ್ವಿಟ್ ಇಂಡಿಯಾ ಚಳವಳಿಗೆ ಇಳಿದರು. ಲೋಯರ್ ಸೆಕೆಂಡರಿ ಮುಗಿಸಿ ಚಿಕ್ಕಮಗಳೂರಿನಲ್ಲಿ ಹೈಸ್ಕೂಲ್ ಓದಿದರು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಮಾಡಿದರು.
26ವರ್ಷ ವಯಸ್ಸಿನಲ್ಲೇ ಕೊಪ್ಪ ಪುರಸಭೆಗೆ ಆಯ್ಕೆಯಾದರು. ತಾಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಸಾರ್ವಜನಿಕ ಕ್ಷೇತ್ರ ಪ್ರವೇಶ ಮಾಡಿದರು. 1983ರಲ್ಲಿ ಶೃಂಗೇರಿ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಆಯ್ಕೆಯಾದರು. 1999ರಲ್ಲಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಿದ್ದರು.
3 ಬಾರಿ ಶಾಸಕ(ಶೃಂಗೇರಿ ಕ್ಷೇತ್ರ), 3 ಬಾರಿ ಸಚಿವರಾಗಿದ್ದರು, ಜನತಾ ಪರಿವಾರದಿಂದ ಬಂದ ಗೊವಿಂದೇಗೌಡರು ಜಿ.ಎಚ್ ಪಟೇಲರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿ ಗೋವಿಂದೇಗೌಡ ಅವರು ಕಾರ್ಯ ನಿರ್ವಹಿಸಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರ ಬದಲಾವಣೆ ತಂದು, ಶಿಕ್ಷಕರ ನೇಮಕಾತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತಂದು ಪಾರದರ್ಶಕ ನೇಮಕಾತಿ ಪ್ರಕ್ರಿಯೆಗೆ ಕಾರಣರಾದರು. ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿದರು.
ಸಮಾಜವಾದ, ಗಾಂಧಿವಾದದ ಪ್ರತಿನಿಧಿಯಾಗಿದ್ದ ಗೋವಿಂದೇಗೌಡ ಅವರು ಜನಾನುರಾಗಿಯಾಗಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಸಚಿವ ಡಿ.ಬಿ ಚಂದ್ರೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)