ಬಜೆಟ್ ನಂತರ ಸದನದಲ್ಲಿ ಕುಮಾರಸ್ವಾಮಿ ಗೈರಾಗಿದ್ದ ಕಾರಣ ಬಹಿರಂಗ
ಹಣಕಾಸು ಖಾತೆಯನ್ನೂ ನಿಭಾಯಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2016-17 ಸಾಲಿನ ರಾಜ್ಯ ಆಯವ್ಯಯ ಮಂಡಿಸಿದ ದಿನ ಸದನದಲ್ಲಿ ಹಾಜರಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಂತರ ವಿಧಾನಸೌಧದ ಕಡೆಗೂ ತಲೆಯೂ ಹಾಕಿರಲಿಲ್ಲ.
ಜವಾಬ್ದಾರಿಯುತ ವಿರೋಧ ಪಕ್ಷದ ಸ್ಥಾನದಲ್ಲಿರುವ ಮುಖಂಡರೊಬ್ಬರು, ಇಷ್ಟು ಉದಾಸೀನತೆಯಿಂದ ನಡೆದುಕೊಂಡರೆ ಹೇಗೆ ಎಂದು ಆಡಳಿತ ಪಕ್ಷ ಮತ್ತು ಬಿಜೆಪಿಯವರೂ ಜೆಡಿಎಸ್ ಮುಖಂಡರನ್ನು ಸದನದಲ್ಲಿ ಕಿಚಾಯಿಸಿದ್ದರು. (ಊಬ್ಲೋ ವಾಚ್ : ಎಚ್ಡಿಕೆ ವಿರುದ್ಧ ತನಿಖೆಗೆ ಆದೇಶ)
ಬಜೆಟ್ ನಂತರ ಸದನದಲ್ಲಿ ಕಾಣಿಸಿಕೊಳ್ಳದ ಕುಮಾರಸ್ವಾಮಿ, ಕೊಡಗು ಜಿಲ್ಲೆಯಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು ಬಿಟ್ಟರೆ ಪಕ್ಷದ ಯಾವುದೇ ಅಧಿಕೃತ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ.
ಸದನದಲ್ಲಿ ಪದೇಪದೇ ಎದುರಾದ ಪ್ರಶ್ನೆಗೆ ಒಂದು ಹಂತದಲ್ಲಿ ಉತ್ತರ ನೀಡಿದ್ದ ಸಹೋದರ ಎಚ್ ಡಿ ರೇವಣ್ಣ, ಸದನದಲ್ಲಿ ಆಡಳಿತ ಪಕ್ಷವನ್ನು ಎಷ್ಟೇ ತರಾಟೆಗೆ ತೆಗೆದುಕೊಂಡರೆ ಏನು ಪ್ರಯೋಜನ. ಈ ಸರಕಾರ ನಿದ್ದೆ ಮಾಡುತ್ತಿದೆಯಲ್ಲಾ, ಅದಕ್ಕೆ ಕುಮಾರಸ್ವಾಮಿ ಸದನಕ್ಕೆ ಬರುತ್ತಿಲ್ಲ ಎಂದು ತಿರುಗೇಟು ನೀಡಿದ್ದರು. (ಎಚ್ಡಿಕೆಗೆ ಡಿಕೆಶಿ ಕಿವಿಮಾತು)
ಎಸಿಬಿ ರಚನೆಯ ವಿರುದ್ದ ಸೋಮವಾರ (ಏ 4) ಬೃಹತ್ ರಾಜಭವನ ಚಲೋ ಜಾಥಾದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಬಜೆಟ್ ನಂತರ ನಾನು ಸದನಕ್ಕೆ ಹಾಜರಾಗಲಿಲ್ಲ, ಯಾವ ಪುರುಷಾರ್ಥಕ್ಕಾಗಿ ನಾನು ಸದನಕ್ಕೆ ಹೋಗಲಿ ಎಂದು ಸ್ಪೀಕರ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಸ್ಪೀಕರ್, ಆಡಳಿತ ಪಕ್ಷ, ಬಿಜೆಪಿ ಮತ್ತು ಎಬಿವಿಪಿ ವಿರುದ್ದ ಕುಮಾರಸ್ವಾಮಿ ಹೊಡೆದ ಡೈಲಾಗ್, ಸ್ಲೈಡಿನಲ್ಲಿ..
ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ
ಬಿಬಿಎಂಪಿ ಚುನಾವಣೆಯ ವೇಳೆ ವಾರಕ್ಕೆ ಎರಡು ಬಾರಿ ನಗರ ಪ್ರದಕ್ಷಿಣೆ ಮಾಡಿ, ಟ್ರಾಫಿಕ್ ಜಾಮ್ ಮಾಡಿದ ಮುಖ್ಯಮಂತ್ರಿ ಸಾಹೇಬ್ರಿಗೆ ಈಗ ಬೆಂಗಳೂರಿನ ಗುಂಡಿ ಬಿದ್ದಿರುವ ರಸ್ತೆಗಳು, ಕಸಗಳು, ಇತರ ಸಮಸ್ಯೆಗಳು ಕಣ್ಣಿಗೆ ಕಾಣಿಸುತ್ತಿಲ್ಲವೇ? ಬೆಂಗಳೂರಿನ ಸರ್ವತೋಮುಖ ಅಭಿವೃದ್ದಿ ಎಂದು ಭಾಷಣ ಬಿಗಿಯುತ್ತಿದ್ದ ನಿಮಗೆ, ಚುನಾವಣೆಯ ನಂತರ ನಗರದ ಸಮಸ್ಯೆ ನಗಣ್ಯವಾಯಿತೇ ಎಂದು ಸಿಎಂ ಅವರಲ್ಲಿ ಕೇಳಲು ಬಯಸುತ್ತೇನೆ - ಕುಮಾರಸ್ವಾಮಿ.
ಡಿ ಕೆ ಶಿವಕುಮಾರ್
ದೇವೇಗೌಡ್ರು ಈಗಾಗಲೇ ಒಮ್ಮೆ ಹೇಳಿದ್ರು. ಕೇಂದ್ರ ಕಡಿಮೆ ದರದಲ್ಲಿ ವಿದ್ಯುತ್ ನೀಡಲು ಸಿದ್ದವಿದ್ದರೂ, ರಾಜ್ಯ ಸರಕಾರ ಖಾಸಗಿ ಗ್ರಿಡ್ ಗಳಿಂದ ವಿದ್ಯುತ್ ಖರೀದಿಸಲು ಮುಂದಾಗಿದೆ. ಭ್ರಷ್ಟಾಚಾರ ತಡೆಯಲು ಎಸಿಬಿ ರಚನೆಗೆ ಮುಂದಾಗಿರುವ ಸಿಎಂಗೆ ಇಂಧನ ಸಚಿವಾಲಯದಲ್ಲಿ ನಡೆಯುತ್ತಿರುವ ಈ ಕರಪ್ಸನ್ ಕಣ್ಣಿಗೆ ಕಾಣಿಸುತ್ತಿಲ್ಲವೇ. ಒಂದು ರೀತಿಯಲ್ಲಿ 'ಕುರಿಯನ್ನು ಕಾಯಲು ತೋಳವನ್ನು ನೇಮಿಸಿದಂತೆ'ಎಂದು ಪರೋಕ್ಷವಾಗಿ ಡಿ ಕೆ ಶಿವಕುಮಾರ್ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕಾಗೋಡು ತಿಮ್ಮಪ್ಪ
ಸ್ಪೀಕರ್ ಕಾಗೋಡು ಅವರ ವಯಸ್ಸಿಗೆ ನನ್ನ ಮರ್ಯಾದೆಯಿದೆ. ಆದರೆ, ಸಭಾಪತಿಯಾದವರು ಪಕ್ಷಾತೀತವಾಗಿ ಕೆಲಸ ಮಾಡಬೇಕು. ಬಜೆಟ್ ಮುನ್ನ ನಡೆದ ಅಧಿವೇಶನದಲ್ಲಿ ನಾನು ಭಾಗವಹಿಸಿದ್ದೆ, ಆದರೆ ನನಗೆ ಅವರು ಭಾಷಣ ಮಾಡಲು ಸಮಯಾವಕಾಶವನ್ನೇ ನೀಡಲಿಲ್ಲ. ಒಂದು ವೇಳೆ ಮಾತನಾಡಲು ಶುರು ಮಾಡಿದರೆ, ಸ್ವಲ್ಪ ಹೊತ್ತಲ್ಲೇ 'ಯುವರ್ ಟೈಂ ಈಸ್ ಓವರ್' ಎನ್ನುತ್ತಿದ್ದರು ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಸ್ಪೀಕರ್ ಅವಕಾಶ ನೀಡುತ್ತಿರಲಿಲ್ಲ
ಕೆಲವೊಂದು ವಿಚಾರದ ಬಗ್ಗೆ ಸದನದಲ್ಲಿ ಪ್ರಸ್ತಾವನೆ ಮಾಡುವಾಗ, ಇಷ್ಟೇ ಸಮಯದಲ್ಲಿ ಭಾಷಣ ಮುಗಿಸಬೇಕು ಎನ್ನುವುದು ತಪ್ಪಾಗುತ್ತದೆ ಎನ್ನುವುದು ಸ್ಪೀಕರ್ ಅವರಿಗೂ ಗೊತ್ತು, ಸಿಎಂಗೂ ಗೊತ್ತು. ನಾನು ಭಾಷಣ ಮಾಡಲು ಆರಂಭಿಸಿದ ಕೂಡಲೇ ನಿಮ್ಮ ಸಮಯ 20-30 ನಿಮಿಷ ಎಂದು ಕಾಲಮಿತಿ ನಿಗದಿ ಪಡಿಸುತ್ತಿದ್ದರು. ಇದರಿಂದ ಬೇಸರಗೊಂಡು ಬಜೆಟ್ ನಂತರ ಸದನಕ್ಕೆ ಹಾಜರಾಗಲಿಲ್ಲ - ಕುಮಾರಸ್ವಾಮಿ.
ಮಗನ ಸಿನಿಮಾದಲ್ಲಿ ಬ್ಯೂಸಿ
ಬಜೆಟ್ ನಂತರ ಕುಮಾರಸ್ವಾಮಿ ಸದನದಲ್ಲಿ ಭಾಗವಹಿಸದೇ ಇದ್ದದ್ದು, ಮಹತ್ವಾಕಾಂಕ್ಷೆಯ ಮಗನ ಸಿನಿಮಾ ಕಾರ್ಯದಲ್ಲಿ ಬ್ಯೂಸಿಯಾಗಿದ್ದರಿಂದ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಪೂರಕ ಎನ್ನುವಂತೆ ಕುಮಾರಸ್ವಾಮಿ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಕೆಲವು ದಿನ ಕಾಣಿಸಿಕೊಂಡಿರಲಿರಲಿಲ್ಲ.
ಬಿಜೆಪಿ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಕುಮಾರಸ್ವಾಮಿ
ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಬಿಜೆಪಿ ಮತ್ತು ಕಾಂಗ್ರೆಸ್. ತನ್ನ ಐದು ವರ್ಷದಲ್ಲಿ ಬಿಜೆಪಿ ನಡೆಸಿದ ದುರಾಡಳಿತವನ್ನು ಕಾಂಗ್ರೆಸ್ ಮುಂದುವರಿಸಿಕೊಂಡು ಬರುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ, ಕಾನೂನು ಕೇಳುವವರೇ ಇಲ್ಲದಂತಾಗಿದೆ, ರಾಜ್ಯದ ಇಂದಿನ ಪರಿಸ್ಥಿತಿಗೆ ಎರಡೂ ರಾಷ್ಟ್ರೀಯ ಪಕ್ಷಗಳು ಕಾರಣ - ಕುಮಾರಸ್ವಾಮಿ.
ಎಬಿವಿಪಿ ವಿರುದ್ದ ಕುಮಾರಸ್ವಾಮಿ
ಪಿಯುಸಿ ವಿದ್ಯಾರ್ಥಿಗಳ ನೋವು ಕಂಡು ಬೇಸರವಾಗುತ್ತಿದೆ. ಅವರ ಪ್ರತಿಭಟನೆಗೆ ನೈತಿಕ ಶಕ್ತಿ ತುಂಬಲು ಪಿಯು ಕಚೇರಿಗೆ ಹೋದರೆ, ಅಲ್ಲಿ ಬಿಜೆಪಿಯವರ ಜೊತೆಗೆ ಅದ್ಯಾವುದೋ ಎಬಿವಿಪಿ ಸಂಘಟನೆಯಂತೆ.. ಅವರಿದ್ದಾರೆ. ಕೇಸರಿ ಬಾವುಟ ಹಿಡಿದುಕೊಂಡು ಬಂದು ಪ್ರತಿಭಟನೆ ನಡೆಸುತ್ತಾರಲ್ಲಾ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ರಾಜಕೀಯ ಮಾಡಲು ಹೊರಟಿದ್ದಾರಲ್ಲಾ.. ಇವರಿಗೆ ಕಾಮನ್ ಸೆನ್ಸ್ ಅನ್ನೋದನ್ನಾ ದೇವರು ಕೊಟ್ಟಿದ್ದಾನಾ - ಕುಮಾರಸ್ವಾಮಿ
ಶ್ಯಾಂ ಭಟ್, ಬಿಡಿಎ
ಶ್ಯಾಂ ಭಟ್ರು ದಳ್ಲಾಳಿಗಳಿಗೆ ಅದೆಷ್ಟು ಕೊಟ್ಟು ಈ ಹುದ್ದೆಗೆ ಬಂದ್ರೋ ನನಗೆ ಗೊತ್ತಿಲ್ಲ. ಆದರೆ ಒಂದೇ ಹುದ್ದೆಯಲ್ಲಿ (BDA) ಐದು ವರ್ಷದಿಂದ ಇದ್ದಾರೆಂದ್ರೆ, ಎಷ್ಟು ಭ್ರಷ್ಟಾಚಾರ ಈ ಇಲಾಖೆಯಲ್ಲಿ ತಾಂಡವಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಹಕ್ಕುದಾರರಿಗೆ, ಬಡವರಿಗೆ ನಿವೇಶನ ಸಿಗುತ್ತಿಲ್ಲ, ಕೆಂಪೇಗೌಡ, ಅರ್ಕಾವತಿ ಲೇಔಟ್ ಸೈಟ್ ಹಂಚಿಕೆಯಾಗುತ್ತಿಲ್ಲ. ಇಂತಹ ಸರಕಾರ ಎಸಿಬಿ ರಚನೆಗೆ ಮುಂದಾಗಿರುವುದು ಹಾಸ್ಯಾಸ್ಪದ ಎಂದು ಕುಮಾರಸ್ವಾಮಿ ಸೋಮವಾರದ (ಏ 4) ಪ್ರತಿಭಟನೆಯ ವೇಳೆ ನೋವು ವ್ಯಕ್ತ ಪಡಿಸಿದ್ದಾರೆ.