ನಾನು ಹುಲಿವಂಶದವನು: ಕಲ್ಲಡ್ಕ ಭಟ್ರಿಗೆ ರಮಾನಾಥ್ ರೈ ತಿರುಗೇಟು
ನನ್ನ ರಾಜಕೀಯ ಜೀವನದಲ್ಲಿ ಪ್ರತಿಭಟನೆಯಂತಹ ಘಟನೆಗಳನ್ನು ಬೇಕಾದಷ್ಟು ನೋಡಿದ್ದೇನೆ. ಹುಲಿ, ಸಿಂಹ ವಂಶದವನಾದ ನಾನು, ಇದಕ್ಕೆಲ್ಲಾ ಕ್ಯಾರ್ ಮಾಡುವವನಲ್ಲ, ಹಿಂದೂಪರ ಸಂಘಟನೆಗಳಿಗೆ ರಮಾನಾಥ ರೈ ಚಾಲೆಂಜ್.
ಮಂಗಳೂರು, ಜೂ 19: ಹಿಂದೂಪರ ಸಂಘಟನೆಗಳ ಪ್ರತಿಭಟನೆ ಮತ್ತು ಮುಂಬೈನಿಂದ ಬಂದ ಕರೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರಣ್ಯ ಸಚಿವ ರಮಾನಾಥ ರೈ, ನಾನು ಹುಲಿವಂಶದವನು ಎಂದು ಪರೋಕ್ಷವಾಗಿ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ತಿರುಗೇಟು ನೀಡಿದ್ದಾರೆ.
ನನ್ನ ರಾಜಕೀಯ ಜೀವನದಲ್ಲಿ ಇಂತಹ ಬೇಕಾದಷ್ಟು ಘಟನೆಗಳನ್ನು ನೋಡಿದ್ದೇನೆ. ಹುಲಿ, ಸಿಂಹ ವಂಶದವನಾದ ನಾನು, ಪ್ರತಿಭಟನೆ, ಬೆದರಿಕೆಗೆ ಎಲ್ಲಾ ಕ್ಯಾರ್ ಮಾಡುವವನಲ್ಲ ಎಂದು ಹಿಂದೂಪರ ಸಂಘಟನೆಗಳಿಗೆ ಚಾಲೆಂಜ್ ಮಾಡಿದ್ದಾರೆ.
ರೈ ವಿರುದ್ಧ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
ಪೊಲೀಸ್ ಮುಖ್ಯಸ್ಥರ ಜೊತೆ ತಾನು ಮಾತನಾಡಿರುವ ವಿಡಿಯೋವನ್ನು ಮಾಧ್ಯಮಗಳು ಪ್ರಸಾರ ಮಾಡಿರುವುದಕ್ಕೆ ಕಿಡಿಕಾರಿರುವ ರೈ, ಭಟ್ರನ್ನು ಅರೆಸ್ಟ್ ಮಾಡಿಸುವ ವಿಚಾರದ ಬಗ್ಗೆ ನಾನು ಆಡಿರುವ ಮಾತನ್ನು ಮಾತ್ರ ನೀವು ಹೈಲೆಟ್ ಮಾಡುತ್ತೀರಾ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಕಲ್ಲಡ್ಕದಲ್ಲಿ ನಡೆಯುತ್ತಿರುವ ಗಲಭೆಯಲ್ಲಿ ಭಟ್ಟರ ಕುಟುಂಬದವರು ಯಾರೂ ಇಲ್ಲ. ಅವರೆಲ್ಲಾ ಸೇಫ್ ಆಗಿ ಮನೆಯಲ್ಲಿದ್ದಾರೆ, ಬಲಿಯಾಗುತ್ತಿರುವವರೆಲ್ಲಾ ಅಮಾಯಕರು ಎಂದು ರಮಾನಾಥ ರೈ, ಕಲ್ಲಡ್ಕ ಭಟ್ಟರ ವಿರುದ್ದ ಹರಿಹಾಯ್ದಿದ್ದಾರೆ.
ಪ್ರಭಾಕರ್ ಭಟ್ ಒಬ್ಬ ಪುಕ್ಕುಲ ಎನ್ನುವ ನನ್ನ ಮಾತನ್ನು ನಾನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ಅವರದ್ದು ಬರೀ ವ್ಯಾಪರದ ಬುದ್ದಿ, ಅದಕ್ಕೆ ಹಿಂದೂ ಹೆಸರನ್ನು ಕಟ್ಟಿ ದುಡ್ಡು ಮಾಡುವುದೊಂದೇ ಅವರ ಕಾಯಕ.
ಹಿಂದೂ, ಮುಸ್ಲಿಂ ಜನರ ನಡುವೆ ಸಾಮರಸ್ಯ ಕದಡಿಸಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿರುವ ಪ್ರಭಾಕರ ಭಟ್ಟರ ಪರವಾಗಿ ಯಾರೇ ನನ್ನ ವಿರುದ್ದ ಪ್ರತಿಭಟನೆ ನಡೆಸಲಿ, ದೂರವಾಣಿ ಕರೆ ಮಾಡಲಿ, ನಾನು ಅದಕ್ಕೆ ಸೊಪ್ಪು ಹಾಕುವುದಿಲ್ಲ ಎಂದು ರಮಾನಾಥ ರೈ ಸ್ಪಷ್ಟವಾಗಿ ಹೇಳಿದ್ದಾರೆ.