5 ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳು : ಸಿದ್ದರಾಮಯ್ಯ ಘೋಷಣೆ!
ಬೆಂಗಳೂರು, ಅಕ್ಟೋಬರ್. 03: ರಾಜ್ಯದ 5 ಜಿಲ್ಲೆಗಳು, 20 ತಾಲೂಕುಗಳು ಹಾಗೂ 1000 ಗ್ರಾಮ ಪಂಚಾಯತಿಗಳು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಗಾಂಧಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ಈ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳು, 20 ತಾಲೂಕುಗಳು ಮತ್ತು 1000 ಗ್ರಾಮ ಪಂಚಾಯತಿಗಳು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು. [ಬಯಲು ಶೌಚ ಮುಕ್ತ ನಗರವಾಗಿ ಮಂಗಳೂರು ಘೋಷಣೆ]
ಉತ್ತಮ ಕಾರ್ಯ ಮಾಡಿದಂತಹ ಕೆಲವು ಗ್ರಾಮ ಪಂಚಾಯತ್ಗಳಿಗೆ ಇದೇ ಕಾರ್ಯಕ್ರಮದಲ್ಲಿ 'ಗಾಂಧಿ ಗ್ರಾಮ ಪುರಸ್ಕಾರ' ನೀಡಲಾಗುವುದು. ಪುರಸ್ಕಾರವು 2ಲಕ್ಷ ನಗದು, 50 ಲಕ್ಷ ವಿಶೇಷ ಅನುದಾನ ಒಳಗೊಂಡಿರುತ್ತದೆ ಎಂದು ಹೇಳಿದರು.
ಇದೇ ವೇಳೆ ಐದು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು. ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ಅನನ್ಯ ಸಾಧನೆ ಮಾಡಿದ ತುಮಕೂರು ಜಿಲ್ಲೆಯ ಬಾಲಕಿ ಲಾವಣ್ಯ, ಕೊಪ್ಪಳ ಜಿಲ್ಲೆ ಅಕ್ಕಮ್ಮ ಸೇರಿ 15 ಬಾಲಕಿಯರಿಗೆ ಹಾಗೂ ಭ್ರಷ್ಟಾಚಾರ ವಿರೋಧಿಸಿ ಗುತ್ತಿಗೆದಾರರಿಂದ ಲಂಚ ಸ್ವೀಕರಿಸದೆ ಪ್ರಮಾಣಿಕತೆ ಮೆರೆದಿದ್ದ ಕುಣಿಗಲ್ ತಾಲೂಕಿನ ನರೇಗಾ ಯೋಜನೆಯ ತಾಂತ್ರಿಕ ಸಲಹೆಗಾರ ಶ್ರೀನಿವಾಸ್ ಅವರಿಗೂ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಿದರು.