ಹೊತ್ತಿ ಉರಿದ ಚಾಮರಾಜನಗರದ ಬಂಡೀಪುರ ರಾಷ್ಟ್ರೀಯ ಉದ್ಯಾನವನ
ಚಾಮರಾಜನಗರ, ಮಾರ್ಚ್,09: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನಿಂದಾಗಿ ಸುಮಾರು 200 ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿದ್ದು, ಕಿಡಿಗಳ ದುರ್ವರ್ತನೆಯಿಂದ ಈ ಬೆಂಕಿ ಕಾಣಿಸಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರ ಸಾಹಸ ಪಡಬೇಕಾಯಿತು. ಹೊತ್ತಿ ಉರಿದ ಆ ಪ್ರದೇಶವು ಸಫಾರಿ ವೀಕ್ಷಣೆಗೆ ಮೀಸಲಾದ ಪ್ರದೇಶ ಎಂದು ತಿಳಿದು ಬಂದಿದೆ.[ಕಾಡು ಬಿಟ್ಟು ನಾಡಿಗೆ ಚಿರತೆ ನುಗ್ಗಲು ಕಾರಣವೇನು?]
ಬೆಂಕಿಗೆ ಸಣ್ಣಪುಟ್ಟ ಗಿಡಮರಗಳು ಹೊತ್ತಿ ಉರಿದರೆ, ಸಣ್ಣಪುಟ್ಟ ಜೀವಿಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಪ್ರಾಣಿ ಪಕ್ಷಿಗಳು ಪ್ರಾಣಪಾಯದಿಂದ ಪಾರಾಗಿವೆ. ಎರಡು ವರ್ಷದ ಹಿಂದೆ ಕಿಡಿಗಳ ಕೃತ್ಯದಿಂದ ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿತ್ತು.[ಬಂಡೀಪುರದಲ್ಲಿ ಕಳ್ಳರ ಹುಡುಕಾಟ ನಡೆಸುವ ಸಿಸಿ ಕ್ಯಾಮರಾ ಕಳವು]
ಬಿಸಲಿನ ಬೇಗೆಗೆ ಅರಣ್ಯ ಒಣಗಿ ನಿಂತಿರುವುದೇ ಅಗ್ನಿ ಅನಾಹುತ ಸಂಭವಿಸಲು ಪ್ರಮುಖ ಕಾರಣ. ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯದೊಳಗೆ ತೆರಳಲು ಇರುವ ಸಾರ್ವಜನಿಕ ರಸ್ತೆಯ ಎರಡು ಬದಿಗಳಲ್ಲಿ ಸ್ವಚ್ಛಗೊಳಿಸಿದ್ದರೂ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದೆ. ಸಾರ್ವಜನಿಕರು ಕೂಡ ಕಾಡ್ಗಿಚ್ಚು ತಡೆಗೆ ಆದ್ಯತೆ ನೀಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.