ಭಗವಾನ್ ವಿರುದ್ಧ ಉಪ್ಪಿನಂಗಡಿಯಲ್ಲಿ ಎಫ್ಐಆರ್ ದಾಖಲು
ಉಪ್ಪಿನಂಗಡಿ, ಸೆಪ್ಟೆಂಬರ್ 22 : ಹಿಂದೂಗಳ ಪ್ರವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದ ಬಗ್ಗೆ ತುಚ್ಛವಾಗಿ ಮಾತಾಡಿದ್ದಲ್ಲದೆ, ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕೋಮು ಭಾವನೆ ಕೆರಳಿಸಿದ್ದಾರೆ ಎಂದು ಆರೋಪಿಸಿ ಪ್ರೊ. ಕೆ.ಎಸ್. ಭಗವಾನ್ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹೊಸಮೂಲೆ ಮನೆಯ ಶ್ಯಾಮ ಸುದರ್ಶನ್ ಭಟ್ ಎಂಬುವವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಆಧಾರದ ಮೇಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿರುವ ಮಾಜಿ ಇಂಗ್ಲಿಷ್ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಎಫ್ಐಆರ್ (FIR No.0219/2015) ದಾಖಲಿಸಿಕೊಳ್ಳಲಾಗಿದೆ.
ಭಗವಾನ್ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ರಾಜ್ಯ ಸರಕಾರ ಆಯ್ಕೆ ಮಾಡುತ್ತಿದ್ದಂತೆ, ಕರ್ನಾಟಕದ ಜನತೆ ಭಗವಾನ್ ವಿರುದ್ಧ ತಿರುಗಿಬಿದ್ದಿದ್ದಾರೆ. ಫೇಸ್ ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಪ್ರತಿಭಟನೆಗಳಾಗುತ್ತಿವೆ, ಪ್ರಶಸ್ತಿ ಹಿಂಪಡೆಯಬೇಕೆಂದು ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ, ಆನ್ ಲೈನ್ ಅರ್ಜಿ ಕೂಡ ಗುಜರಾಯಿಸಲಾಗಿದೆ. [ಹೇ ಭಗವಾನ್! ಯಾರು? ಏನು? ಎತ್ತ? ಏನಿದೆಲ್ಲ?]
ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಸೆಪ್ಟೆಂಬರ್ 19ರಂದು ಬೆಂಗಳೂರಿನ ಕುಮಾರಕೃಪಾದ ಬಳಿಯಿರುವ ಗಾಂಧಿ ಭವನದಲ್ಲಿ ಪೆರಿಯಾರ್ ಜನ್ಮದಿನದಂದು ನಡೆದ ಸಮಾರಂಭದಲ್ಲಿ, ಪ್ರೊಫೆಸರ್ ಕೆಎಸ್ ಭಗವಾನ್, ಚಂಪಾ (ಚಂದ್ರಶೇಖರ ಪಾಟೀಲ) ಮತ್ತು ಸೆಲ್ವಿ ಅವರು ಹಿಂದೂಗಳ ಭಾವನೆ ಕೆರಳಿಸುವಂಥ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದರು ಎಂದು ತಿಳಿಸಿದ್ದಾರೆ.
ರಾಮಾಯಣದ ಶ್ರೀರಾಮ ತಂದೆಗೆ ಹುಟ್ಟಿದ ಮಗನಲ್ಲ, ಹಿಂದೂ ದೇವತೆಗಳು ವ್ಯಭಿಚಾರಿಗಳು, ಮಹಾಭಾರತ ಓದಬೇಡಿ, ಭಗವದ್ಗೀತೆ ಓದಿದವರು ಭಯೋತ್ಪಾದಕರಾಗುತ್ತಾರೆ, ಉಪನಿಷತ್ತು ಕೆಟ್ಟ ಗ್ರಂಥ, ಹಿಂದೂ ದೇವಸ್ಥಾನಗಳು ಕೇವಲ ಹಣ ಮಾಡುವ ಯಂತ್ರಗಳಾಗಿವೆ ಇತ್ಯಾದಿಯಾಗಿ ಕೆರಳಿಸುವಂಥ ಹೇಳಿಕೆ ನೀಡಿದ್ದಾರೆ ಎಂದು ಶ್ಯಾಮ ಸುದರ್ಶನ್ ಭಟ್ ಅವರು ಆರೋಪಿಸಿದ್ದಾರೆ.
ಹಿಂದೂಗಳಾದ ನಮಗೆ ಇಂಥ ಹೇಳಿಕೆಗಳಿಂದ ಆಘಾತವಾಗಿದೆ, ಅವಮಾನವಾಗಿದೆ. ಈ ಹೇಳಿಕೆಗಳು ತೀರ ಕೆಳಮಟ್ಟದ್ದವಾಗಿದ್ದು, ಕಾನೂನು ಬಾಹಿರವಾಗಿವೆ. ಇವುಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295(ಎ) ಮತ್ತು 153(ಬಿ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಾಗಿವೆ. ಇಂಥ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಶ್ಯಾಮ ಸುದರ್ಶನ್ ದೂರಿದ್ದಾರೆ.