ಹಿಗ್ಗಾಮುಗ್ಗಾ ಥಳಿಸಿದ ಪೇದೆ: ಎಸ್ಪಿ ಅಣ್ಣಾಮಲೈ ಕೆಂಡಾಮಂಡಲ
ಚಿಕ್ಕಮಗಳೂರು, ಫೆಬ್ರವರಿ 16: ಕಾರಿನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ ಎಂಬ ಕಾರಣಕ್ಕೆ ಪೊಲೀಸ್ ಪೇದೆ ಇಬ್ಬರನ್ನು ಎಳೆತಂದು ಮಾರಣಾಂತಿಕವಾಗಿ ಥಳಿಸಿರುವ ಘಟನೆ ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಜರುಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ನಾಗರಿಕ ವಲಯದಲ್ಲಿ ಇದಕ್ಕೆ ವಿರೋಧವಾದ ಹಿನ್ನೆಲೆ ಪೇದೆಯನ್ನು ವರ್ಗಾಯಿಸಿ ಎಫ್ಐಆರ್ ದಾಖಲಿಸಲಾಗಿದೆ.
ಜಗದೀಶ್ ಮತ್ತು ಸುರಕ್ಷಾ ಎನ್ನುವ ಯುವಕರಿಬ್ಬರು ಕ್ರೀಡಾಂಗಣದ ಹತ್ತಿರ ಕಾರಿನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದರು. ಈ ವೇಳೆ ಪೇದೆ ಗಿರೀಶ್ ಸ್ಥಳಕ್ಕಾಗಮಿಸಿ ಇಬ್ಬರನ್ನು ಠಾಣೆಗೆ ಕರೆದೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಚಿತ್ರಹಿಂಸೆ ನೀಡಿದ್ದಾರೆ. ಥಳಿತದಿಂದ ಜಗದೀಶ್ ಗೆ ಎರಡು ಕಣ್ಣುಗಳಿಗೆ ಗಂಭೀರ ಪ್ರಮಾಣದ ಗಾಯಗಳಾಗಿವೆ. ಬಲ ಗಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಸುರಕ್ಷಾ ಗೆ ನಡೆಯಲು ಸಾಧ್ಯವಾಗುತ್ತಿಲ್ಲ ಇಬ್ಬರಿಗೂ ಕೊಪ್ಪ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.[ಚಿಕ್ಕಮಗಳೂರು: ತಬ್ಬಲಿಯಾಗಲಿದ್ದ ಯುವತಿಗೆ ಅಣ್ಣನಾದ ಎಸ್ಪಿ ಅಣ್ಣಾಮಲೈ]
ಇದ್ದಕ್ಕಿದ್ದಂತೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಚಿತ್ರಹಿಂಗಸೆ ನೀಡಿರುವ ಪೊಲೀಸರು ಪದೇ ಪದೇ ನಮ್ಮಿಬ್ಬರ ಮೇಲೆ ನಕ್ಸಲ್ ಕೇಸ್ ಹಾಕಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎನ್ನುತ್ತಾರೆ ಸುರಕ್ಷಾ ಮತ್ತು ಜಗದೀಶ್.
ಇನ್ನು ಈ ಪ್ರಕರಣಕ್ಕೆ ಸಂಬಂದಿಸಿದಂತೆ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಅಣ್ಣಾಮಲೈ ಮಾತನಾಡಿ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪೇದೆ ಗಿರೀಶ್ ಅವರನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಅಲ್ಲದೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ತನಿಖೆ ಆರಂಭಿಸಿ ವಿಚಾರಣೆ ನಡೆಸುತ್ತೇವೆ ಎಂದರು.