ರೈತರ ಸಾಲಮನ್ನಾದ ಸುತ್ತ ರಾಜ್ಯ ಕಾಂಗ್ರೆಸ್ ನಲ್ಲಿ ಏನೇನೋ ಸುದ್ದಿ!
ಸಿದ್ದರಾಮಯ್ಯ ಸರಕಾರದ ರೈತರ ಐವತ್ತು ಸಾವಿರ ರೂಪಾಯಿವರೆಗಿನ ಸಾಲಮನ್ನಾ ಘೋಷಣೆಯಾದ ನಂತರ, ಮುಖ್ಯಮಂತ್ರಿಗಳ ಮೇಲೆ ಅಸಮಾಧಾನ ಹರಿದಾಡುತ್ತಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ರಾಷ್ಟ್ರಪತಿ ಹುದ್ದೆಗೆ ಅಚ್ಚರಿಯ ಅಭ್ಯರ್ಥಿಯನ್ನು ಘೋಷಿಸಿ ಮೋದಿ-ಶಾ ವಿರೋಧ ಪಕ್ಷಗಳಿಗೆ ಮಾಸ್ಟರ್ ಸ್ಟ್ರೋಕ್ ನೀಡಿದರೆ, ಇತ್ತ ಕರ್ನಾಟಕದಲ್ಲಿ ಐವತ್ತು ಸಾವಿರ ರೂಪಾಯಿವರೆಗಿನ ಸಹಕಾರೀ ಬ್ಯಾಂಕುಗಳ ರೈತರ ಕೃಷಿ ಸಾಲವನ್ನು ಮನ್ನಾ ಮಾಡಿ ರಾಹುಲ್ ಗಾಂಧಿ ಮತ್ತು ಸಿದ್ದು, ರಾಜ್ಯದಲ್ಲಿ ಬಿಜೆಪಿ ವಿರುದ್ದ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆಂದು ವ್ಯಾಖ್ಯಾನಿಸಲಾಗುತ್ತಿದೆ.
ಚುನಾವಣೆ ಸಮೀಸುತ್ತಿರುವ ಈ ವೇಳೆ, ಸಿದ್ದರಾಮಯ್ಯ ಸರಕಾರದ ಈ ಮಹತ್ವದ ಕ್ರಮ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ನೀಡಲಿರುವುದಂತೂ ಸತ್ಯ. ಆದರೆ, ಸಿದ್ದರಾಮಯ್ಯ ಸರಕಾರದ ಈ ಸಾಲಮನ್ನಾ ಘೋಷಣೆಯ ಹಿಂದೆ, ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನ ಹರಿದಾಡುತ್ತಿದೆ ಎನ್ನುವ ಸುದ್ದಿಯಿದೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಮೇಲಾಟದಲ್ಲಿ ಗೆದ್ದಿದ್ದು ಸಿದ್ದು ಹಠನೇ
ವೈಮನಸ್ಸಿನ ಗೂಡಾಗಿದ್ದ ರಾಜ್ಯ ಬಿಜೆಪಿ ಘಟಕಕ್ಕೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿ, ಕಾರ್ಯಕರ್ತರನ್ನು ಒಗ್ಗೂಡಿಸುತ್ತಿರುವ ಈ ಹೊತ್ತಲ್ಲಿ, ಸಿದ್ದರಾಮಯ್ಯ ಸರಕಾರ ಸಾಲಮನ್ನಾದ ಯೋಜನೆ ಪ್ರಕಟಿಸಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣ ಸೃಷ್ಟಿಸಿದ್ದಾರೆ.
ಜೊತೆಗೆ, ನಾನು ಸಾಲ ಮನ್ನಾ ಮಾಡಿದ್ದೇನೆ, ನಿಮಗೆ ತಾಕತ್ತಿದ್ದರೆ ಕೇಂದ್ರದಲ್ಲಿನ ನಿಮ್ಮ ಸರಕಾರದ ಮೇಲೆ ಒತ್ತಡ ಹೇರಿ, ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳ ಸಾಲಮನ್ನಾ ಮಾಡಿಸಿ ನೋಡೋಣ ಎಂದು ಸಿದ್ದರಾಮಯ್ಯ, ಯಡಿಯೂರಪ್ಪ ವಿರುದ್ದ ತೊಡೆತಟ್ಟಿದ್ದು ಸದ್ಯದ ಮಟ್ಟಿಗಂತೂ ಕಾಂಗ್ರೆಸ್ಸಿಗಾದ ಮುನ್ನಡೆ.
ಆದರೂ, ಸಾಲಮನ್ನಾ ಯೋಜನೆಯನ್ನು ಏಕಾಏಕಿ ಪ್ರಕಟಿಸಿರುವುದರಿಂದ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮುಖ್ಯಮಂತ್ರಿಗಳ ಮೇಲೆ ಸಿಟ್ಟಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಮುಂದೆ ಓದಿ..
ಸಾಲಮನ್ನಾ ಯೋಜನೆಯ ಮಹತ್ವದ ಘೋಷಣೆ
ಸದನದಲ್ಲಿ ಬುಧವಾರ (ಜೂ 21) ಅಲ್ಪಾವಧಿ ಕೃಷಿ ಸಾಲಮನ್ನಾ ಘೋಷಣೆ ಮಾಡುವ ವೇಳೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸದನದಲ್ಲಿ ಹಾಜರಿರಲಿಲ್ಲ. ತನ್ನ ಅನುಪಸ್ಥಿತಿಯಲ್ಲಿ ಈ ಘೋಷಣೆ ಮಾಡಿರುವುದು ಪರಮೇಶ್ವರ್ ಅವರಿಗೆ ಬೇಸರ ತಂದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ
ಅನ್ನಭಾಗ್ಯ, ಕ್ಷೀರಭಾಗ್ಯ ಮುಂತಾದ ಸರಕಾರದ ಜನಪ್ರಿಯ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಏಕಪಕ್ಷೀಯವಾಗಿ ನಿರ್ಧರಿಸಿ, ಪ್ರಕಟಿಸಿದ್ದಾರೆಂದು ಎರಡು ವರ್ಷಗಳ ಹಿಂದೆ ಹಲವು ಕಾಂಗ್ರೆಸ್ ಮುಖಂಡರು, ಸಿದ್ದರಾಮಯ್ಯನವರ ವಿರುದ್ದ ಸಿಟ್ಟಾಗಿದ್ದರು.
ಸಿಎಂ ಏಕಪಕ್ಷೀಯ ನಿರ್ಧಾರ
ರೈತರ ಸಾಲಮನ್ನಾ ಪ್ರಕಟಣೆ, ರಾಜ್ಯ ಕಾಂಗ್ರೆಸ್ ಪಾಲಿಗೆ ಮೈಲೇಜ್ ಕೊಡುವ ಮಹತ್ವದ ಪ್ರಕಟಣೆಯಾಗಿದ್ದು, ಕೆಪಿಸಿಸಿ ಅಧ್ಯಕ್ಷನಾಗಿ ನನ್ನ ಬಳಿ ಸಮಾಲೋಚನೆ ನಡೆಸದೇ ಸಿಎಂ ಏಕಪಕ್ಷೀಯ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಸಿಟ್ಟು ಪರಮೇಶ್ವರ್ ಅವರದ್ದು ಎನ್ನುವ ಸುದ್ದಿಯಿದೆ.
ವೇಣುಗೋಪಾಲ್ ಜೊತೆ ಮಾತುಕತೆ
ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ಬೆಂಗಳೂರು ಭೇಟಿಯ ವೇಳೆ, ಸರಕಾರ ತೆಗೆದುಕೊಳ್ಳುವ ಎಲ್ಲಾ ಪ್ರಮುಖ ನಿರ್ಧಾರಕ್ಕೆ ಮುನ್ನ ಸಮನ್ವಯ ಸಮಿತಿ ಮತ್ತು ಪಕ್ಷದ ಹಿರಿಯ ಮುಖಂಡರ ಜೊತೆ ಚರ್ಚಿಸಬೇಕು ಎನ್ನುವ ನಿರ್ಧಾರಕ್ಕೆ ಬರಲಾಗಿತ್ತು ಎನ್ನುವ ಮಾಹಿತಿಯಿದೆ.
ಚರ್ಚಿಸದೇ ಸದನದಲ್ಲಿ ಪ್ರಕಟಿಸಿದ್ದು ಪರಮೇಶ್ವರ್ ಸಿಟ್ಟಿಗೆ ಕಾರಣ?
ಆದಾಗ್ಯೂ, ಮುಖ್ಯಮಂತ್ರಿಗಳು ಸಾಲಮನ್ನಾದಂತಹ ಪ್ರಮುಖ ನಿರ್ಧಾರವನ್ನು ಚರ್ಚಿಸದೇ ಸದನದಲ್ಲಿ ಪ್ರಕಟಿಸಿದ್ದಾರೆ ಎನ್ನುವುದು ಪರಮೇಶ್ವರ್ ಅವರಿಗೆ ಬೇಸರ ತಂದಿದೆ ಎಂದು ಹೇಳಲಾಗುತ್ತಿದೆ.