ಸಂಗೊಳ್ಳಿ ರಾಯಣ್ಣ ಬ್ರಿಗೇಡ್ : ಬಿಎಸ್ವೈ, ಈಶ್ವರಪ್ಪ ಜಟಾಪಟಿ
ಬೆಂಗಳೂರು, ಆಗಸ್ಟ್ 17 : 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ರಚನೆ ವಿಚಾರದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಜಟಾಪಟಿ ನಡೆದಿದೆ. 'ನೀವು ನನ್ನ ಸ್ವಾತಂತ್ರ್ಯ ಕಸಿಯಲು ಸಾಧ್ಯವಿಲ್ಲ. ಬ್ರಿಗೇಡ್ ರಚನೆಯಿಂದ ಹಿಂದೆ ಸರಿಯುವುದಿಲ್ಲ' ಎಂದು ಈಶ್ವರಪ್ಪ ಅವರು ಸಂದೇಶ ರವಾನಿಸಿದ್ದಾರೆ.
ಮಂಗಳವಾರ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ರಚನೆ ಕುರಿತು ಚರ್ಚೆ ನಡೆಯಿತು.[ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಈಶ್ವರಪ್ಪ]
ಜಾತಿ ಸಂಘಟನೆಗಳನ್ನು ಪಕ್ಷದ ಮೋರ್ಚಾಗಳ ಮೂಲಕವೇ ಸಂಘಟನೆ ಮಾಡಬೇಕು ಎಂದು ಯಡಿಯೂರಪ್ಪ ಅವರು ತಾಕೀತು ಮಾಡಿದರು. ಆದರೆ, ಈಶ್ವರಪ್ಪ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ನಿರಾಕರಿಸಿದರು. ಇದರಿಂದಾಗಿ ಉಭಯ ನಾಯಕರ ನಡುವೆ ಜಟಾಪಟಿ ಮುಂದುವರೆದಿದೆ.[ರಾಯಣ್ಣ ಬ್ರಿಗೇಡ್ ರಚನೆ ರಹಸ್ಯ ಬಯಲು!]
ಯಡಿಯೂರಪ್ಪ ಅವರು ಪದಾಧಿಕಾರಿಗಳ ಆಯ್ಕೆಯಲ್ಲಿ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದಾರೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು. ಪದಾಧಿಕಾರಿಗಳ ಪಟ್ಟಿಯನ್ನು ಬದಲಾವಣೆ ಮಾಡಬೇಕು ಎಂಬ ಅತೃಪ್ತರ ಬೇಡಿಕೆಯನ್ನು ಯಡಿಯೂರಪ್ಪ ಅವರು ತಳ್ಳಿ ಹಾಕಿದ್ದು, ಅದು ಮುಗಿದ ಅಧ್ಯಾಯ ಎಂದು ಸಮರ್ಥಿಸಿಕೊಂಡಿದ್ದಾರೆ.....[ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಅಸಮಾಧಾನ]
ಸಂಘಟನೆಗೆ ಧಕ್ಕೆಯಾಗುತ್ತಿದೆ
ಕೆ.ಎಸ್.ಈಶ್ವರಪ್ಪ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹುಟ್ಟು ಹಾಕಲು ಹೊರಟಿರುವುದರಿಂದ ಪಕ್ಷದ ಸಂಘಟನೆಗೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ, ಈ ಪ್ರಯತ್ನವನ್ನು ತಕ್ಷಣ ನಿಲ್ಲಿಸಬೇಕು. ಪಕ್ಷದಲ್ಲಿರುವ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ ಮುಂತಾದ ಮೋರ್ಚಾಗಳಿವೆ ಇವುಗಳ ಮೂಲಕವೇ ಹಿಂದುಳಿದ ವರ್ಗದವರನ್ನು ಸಂಘಟಿಸಬೇಕು. ಇದರಿಂದ ಪಕ್ಷಕ್ಕೆ ಅನುಕೂಲವಾಗುತ್ತದೆ. ಮೋರ್ಚಾಗಳ ವತಿಯಿಂದಲೇ ಸಮಾವೇಶ ನಡೆಸಬೇಕು ಎಂದು ಯಡಿಯೂರಪ್ಪ ಅವರು ಸಭೆಯಲ್ಲಿ ಹೇಳಿದರು.
ಕುತ್ತಿಗೆ ಕಡಿದರೂ ಬಿಜೆಪಿ ಬಿಡುವುದಿಲ್ಲ
ಸಭೆಯಲ್ಲಿ ಉಪಸ್ಥಿತರಿದ್ದ ಕೆ.ಎಸ್.ಈಶ್ವರಪ್ಪ ಅವರು, 'ನನ್ನ ಕುತ್ತಿಗೆ ಕಡಿದರೂ ಬಿಜೆಪಿ ತೊರೆಯುವುದಿಲ್ಲ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅನ್ನು ನಾನು ಹುಟ್ಟು ಹಾಕಿಲ್ಲ. ಈ ಸಂಘಟನೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಇದರಿಂದ ಪಕ್ಷಕ್ಕೆ ಅನುಕೂಲವಾಗುತ್ತದೆ. ಬ್ರಿಗೇಡ್ ರಚನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದರು.
ಯಡಿಯೂರಪ್ಪ ವಿರುದ್ಧ ಹರಿಹಾಯ್ದರು
ಸಭೆಯಲ್ಲಿದ್ದ ಜಗದೀಶ್ ಶೆಟ್ಟರ್, ಸಿ.ಟಿ.ರವಿ, ಪ್ರಹ್ಲಾದ್ ಜೋಶಿ, ಅನಂತ್ ಕುಮಾರ್ ಮುಂತಾದ ನಾಯಕರು ಯಡಿಯೂರಪ್ಪ ಅವರ ವಿರುದ್ಧ ಹರಿಹಾಯ್ದರು. ಪದಾಧಿಕಾರಿಗಳ ನೇಮಕದ ವಿಚಾರದಲ್ಲಿ ಯಡಿಯೂರಪ್ಪ ಅವರು ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ನಾಯಕರು ದೂರಿದರು.
ಸೇರ್ಪಡೆಗೊಳಿಸಲು ಸಲಹೆ
ಸಭೆಯಲ್ಲಿ ಹಾಜರಿದ್ದ ಕರ್ನಾಟಕ ಬಿಜೆಪಿ ಉಸ್ತುವಾರಿ ಕೆ.ಮುರುಳೀಧರರಾವ್ ಅವರು, 'ಎಲ್ಲೆಲ್ಲಿ ಪಕ್ಷದ ನಿಷ್ಠಾವಂತರನ್ನು ಕೈಬಿಡಲಾಗಿದೆಯೋ ಅಲ್ಲಿ ಜಿಲ್ಲಾ ಮುಖಂಡರೊಂದಿಗೆ ಚರ್ಚಿಸಿ ನಂತರ ಕೋರ್ ಕಮಿಟಿಯಲ್ಲಿ ಚರ್ಚಿಸಿ ಅವರನ್ನು ಪದಾಧಿಕಾರಿಗಳ ಪಟ್ಟಿಗೆ ಸೇರಿಸಬೇಕು. ಪ್ರತಿ ತಿಂಗಳು ಕೋರ್ ಕಮಿಟಿ ಸಭೆ ನಡೆಸಬೇಕು' ಎಂದು ಸೂಚನೆ ನೀಡಿದರು.
ನಿಯಮ ಗಾಳಿಗೆ ತೂರಿದ್ದಾರೆ
ಪಕ್ಷದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿದ ಬಳಿಕ ತೆಗೆದುಕೊಳ್ಳಲಾಗುತ್ತಿತ್ತು. ಆದರೆ, ಯಡಿಯೂರಪ್ಪ ಅವರು ಅಧ್ಯಕ್ಷರಾದ ಬಳಿಕ ಈ ನಿಯಮವನ್ನು ಗಾಳಿಗೆ ತೂರಲಾಗಿದೆ ಎಂದು ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಆರೋಪಿಸಿದರು.
2018ರ ಚುನಾವಣೆಗೆ ಸಹಕಾರ ನೀಡಿ
ಪದಾಧಿಕಾರಿಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡದಂತೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. 2018ರ ಚುನಾವಣೆಯಲ್ಲಿ 150ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವುದೇ ನಮ್ಮ ಗುರಿಯಾಗಿದೆ. ಅದಕ್ಕೆ ಎಲ್ಲಾ ನಾಯಕರು ಸಹಕಾರ ನೀಡಬೇಕು ಎಂದು ಯಡಿಯೂರಪ್ಪ ಅವರು ಮನವಿ ಮಾಡಿದರು.