ಡಿಕೆ ಶಿವಕುಮಾರ್ ಪಿಎ ಬಾಯ್ಬಿಟ್ಟ ಸ್ಫೋಟಕ ಮಾಹಿತಿ: ಸಂಕಷ್ಟದಲ್ಲಿ ಹೈಕಮಾಂಡ್?
ಡಿ ಕೆ ಶಿವಕುಮಾರ್ ಆಪ್ತ ಸಹಾಯಕ ಆಂಜನೇಯ ನೀಡಿದ್ದಾರೆ ಎನ್ನಲಾಗುತ್ತಿರುವ ಹೇಳಿಕೆ ಡಿ ಕೆ ಶಿವಕುಮಾರ್ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದು ಒಂದೆಡೆಯಾದರೆ, ಕಾಂಗ್ರೆಸ್ ಹೈಕಮಾಂಡಿಗೆ ಭಾರೀ ಮುಜುಗರ ತರುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವ
ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರ ತಾಯಿ ನೀಡಿದ ಹೇಳಿಕೆ, ರಾಜ್ಯ ರಾಜಕೀಯದಲ್ಲಿ ಹೊಸ ಸಂಚನಲ ಮೂಡಿಸಿರುವ ಬೆನ್ನಲ್ಲೇ, ಡಿಕೆಶಿ ಆಪ್ತ ಸಹಾಯಕ (PA) ಆಂಜನೇಯ ನೀಡಿದ್ದಾರೆ ಎನ್ನಲಾಗುತ್ತಿರುವ ಹೇಳಿಕೆ ಡಿ ಕೆ ಶಿವಕುಮಾರ್ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವ ಸಾಧ್ಯತೆ ಒಂದೆಡೆಯಾದರೆ, ಕಾಂಗ್ರೆಸ್ ಹೈಕಮಾಂಡಿಗೆ ಭಾರೀ ಮುಜುಗರ ತರುವ ಸಂಭವವಿದೆ.
ದೆಹೆಲಿ ಕರ್ನಾಟಕ ಭವನದಿಂದ ಡಿ ಕೆ ಶಿವಕುಮಾರ್ ಅವರ ದೆಹಲಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆಂಜನೇಯ, ಆದಾಯ ತೆರಿಗೆ ಅಧಿಕಾರಿಗಳ ಸತತ ವಿಚಾರಣೆಯ ವೇಳೆ, ಸಿಎಂ ಸಂಸದೀಯ ಕಾರ್ಯದರ್ಶಿ ಗೋವಿಂದರಾಜ್ ಅವರ ಡೈರಿ ಸೇರಿದಂತೆ ಹಲವು ವಿಚಾರವನ್ನು ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆಂದು ಮಾಧ್ಯಮಗಳು ವರದಿ ಮಾಡುತ್ತಿವೆ.
ನನ್ನ ಮಗನ ಈ ಸ್ಥಿತಿಗೆ ಕಾಂಗ್ರೆಸ್ ನಾಯಕರೇ ಕಾರಣ, ಡಿಕೆಶಿ ತಾಯಿ
ಟಿವಿ ಮಾಧ್ಯಮಗಳ ಪ್ರಕಾರ ಆಂಜನೇಯ ನೀಡಿದ ಹೇಳಿಕೆ, ಕಾಂಗ್ರೆಸ್ ಹೈಕಮಾಂಡಿಗೆ 'ಕಪ್ಪಸಲ್ಲಿಕೆ'ಯಾಗಿರುವ ವಿಚಾರ, ಡಿ ಕೆ ಶಿವಕುಮಾರ್ ಅವರ ಬೇನಾಮಿ ಆಸ್ತಿ, ಹಣಕಾಸು ವ್ಯವಹಾರ, ಹವಾಲದ ಬಗ್ಗೆ ಫಿಲ್ಟರ್ ಇಲ್ಲದೇ ಎಲ್ಲವನ್ನು ಹೇಳಿ, ಅಧಿಕಾರಿಗಳಿಗೆ 'ಕೈ'ಮುಗಿದಿದ್ದಾರೆ ಎನ್ನಲಾಗುತ್ತಿದೆ.
ಗ್ಯಾಲರಿ: ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ
ಆದಾಯ ತೆರಿಗೆ ಅಧಿಕಾರಿಗಳು ಬರುತ್ತಿದ್ದಂತೇ, ಡಿ ಕೆ ಶಿವಕುಮಾರ್ ಮಹತ್ವದ ದಾಖಲೆಗಳನ್ನು ಹರಿದುಹಾಕಿದ್ದು ಹೈಕಮಾಂಡಿಗೆ ಮತ್ತು ತಮ್ಮದೇ ಪಕ್ಷದ ಮುಖಂಡರಿಗೆ ಕಪ್ಪ ಸಂದಾಯವಾದ 'ಗೋವಿಂದರಾಜ್' ಅವರ ಡೈರಿಯ ಪುಟಗಳು ಎಂದು ಆಂಜನೇಯ ಹೇಳಿದ್ದಾರೆ ಎಂದು ವರದಿಯಾಗಿದೆ.
ಡಿಕೆಶಿ ಹರಿದು ಹಾಕಿದ ಎಲ್ಲಾ ಕಾಗದಗಳನ್ನು ಜೋಡಿಸಿ ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆಂದು ಕನ್ನಡ ಮಾಧ್ಯಮ ಸೇರಿ, ರಾಷ್ಟ್ರೀಯ ವಾಹಿನಿಗಳು ವರದಿ ಮಾಡಿವೆ. ಈ ಮಧ್ಯೆ, ಡಿ ಕೆ ಶಿವಕುಮಾರ್ ಅವರ ವಿರುದ್ದ ಜಾರಿ ನಿರ್ದೇಶನಾಲಯದಲ್ಲಿ (Enforcement Directorate) ದೂರು ದಾಖಲಾಗಿದೆ. ಪಿಎ ಆಂಜನೇಯ ಹೇಳಿದ್ದೇನು, ಮುಂದೆ ಓದಿ..
ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಬೇಕಾಗಿದ್ದ ರಾಹುಲ್ ಗಾಂಧಿ
ಡಿ ಕೆ ಶಿವಕುಮಾರ್ ಅವರ ನಿವಾಸ/ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೇ, ರಾಯಚೂರಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಬೇಕಾಗಿದ್ದ ರಾಹುಲ್ ಗಾಂಧಿ ಕಾರ್ಯಕ್ರಮ ರದ್ದಾಗಿದೆ. ಡಿಕೆಶಿ ಮೇಲೆ ಐಟಿ ಅಧಿಕಾರಿಗಳ ದಾಳಿಯ ವೇಳೆ ಹೊರಬರಬಹುದಾದ ಮಾಹಿತಿಯನ್ನು ಅರಿತೇ, ಮುಂಜಾಗೃತ ಕ್ರಮವಾಗಿ ರಾಹುಲ್ ಈ ನಡೆಯಿಟ್ಟಿದ್ದಾರೆಂದೇ ಹೇಳಲಾಗುತ್ತಿದೆ.
ಆದಾಯ ತೆರಿಗೆ ಇಲಾಖೆಯ ರೈಡ್ ಆಗಿರುವುದರ ಹಿಂದೆ ಸಿಎಂ ಕೈ
ನನ್ನ ಮಕ್ಕಳ ವಿರುದ್ಧ ಆದಾಯ ತೆರಿಗೆ ಇಲಾಖೆಯ ರೈಡ್ ಆಗಿರುವುದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿನ ಹಿರಿಯ ನಾಯಕರ ಮತ್ತು ಬಿಜೆಪಿ ಮುಖಂಡರ ಕೈವಾಡವಿದೆ ಎಂದು ಡಿಕೆ ಶಿವಕುಮಾರ್ ತಾಯಿ ಗೌರಮ್ಮ ನೇರವಾಗಿ ಆರೋಪಿಸಿರುವುದನ್ನು ಪಬ್ಲಿಕ್ ಟಿವಿ ವರದಿ ಮಾಡಿದೆ. ಹಾಗಾಗಿ, ಡಿಕೆಶಿ ವಿರುದ್ದ ಬತ್ತಿ ಇಟ್ಟಿರುವುದು ರಾಜ್ಯ ಕಾಂಗ್ರೆಸ್ಸಿನ ಮುಖಂಡರೇ ಎನ್ನುವ ಗುಸುಗುಸು ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.
ದೆಹಲಿಯ ಐಷಾರಾಮಿ ಸಫ್ದರ್ ಜಂಗ್ ಮಾರ್ಗದಲ್ಲಿ ಎರಡು ಮನೆ
ಡಿಕೆಶಿ ಪಿಎ ಆಂಜನೇಯ ನೀಡಿದ್ದಾರೆ ಎನ್ನುವ ಮಾಧ್ಯಮಗಳ ಹೇಳಿಕೆಯ ಪ್ರಕಾರ, ರಾಜಧಾನಿ ದೆಹಲಿಯ ಐಷಾರಾಮಿ ಸಫ್ದರ್ ಜಂಗ್ ಮಾರ್ಗದಲ್ಲಿ ಎರಡು ಮನೆಯನ್ನು ಶಿವಕುಮಾರ್ ಹೊಂದಿದ್ದಾರೆ. ಜೊತೆಗೆ, ಡಿಕೆಶಿ ಏನು ಹೇಳುತ್ತಾರೋ ಅದನ್ನು ಚಾಚೂ ತಪ್ಪದೇ ನಾನು ಮಾಡುತ್ತಿದ್ದೆ ಎಂದು ಐಟಿ ಅಧಿಕಾರಿಗಳ ಮುಂದೆ ಆಂಜನೇಯ ಹೇಳಿದ್ದಾರೆಂದು ಮಾಧ್ಯಮಗಳು ವರದಿ ಮಾಡುತ್ತಿವೆ.
ಡಿಕೆಶಿ ಹರಿದುಹಾಕಿದ್ದು ಹೈಕಮಾಂಡಿಗೆ ಕೊಟ್ಟಿದ್ದ ಕಪ್ಪಕಾಣಿಕೆಯ ರಸೀದಿ
ಡಿಕೆಶಿ ಹರಿದುಹಾಕಿದ್ದು ಹೈಕಮಾಂಡಿಗೆ ಕೊಟ್ಟಿದ್ದ ಕಪ್ಪಕಾಣಿಕೆಯ 'ರಸೀದಿ'ಯನ್ನು ಎಂದು ಆಂಜನೇಯ ಹೇಳಿರುವುದು, ಈ ಎಲ್ಲಾ ವಿದ್ಯಮಾನಕ್ಕೆ ಭಾರೀ ಟ್ವಿಸ್ಟ್ ನೀಡಿದೆ. ಗೋವಿಂದರಾಜ್ ಡೈರಿಯನ್ನು ಡಿಕೆಶಿ ಹರಿದುಹಾಕಿದ್ದರು, ಅದರಲ್ಲಿ "RG" ಸೇರಿದಂತೆ ದೆಹಲಿ ಮಟ್ಟದ ಕಾಂಗ್ರೆಸ್ ಪ್ರಭಾವಿ ಮುಖಂಡರ ಹೆಸರು ಉಲ್ಲೇಖವಾಗಿತ್ತು.
ಶೈಲೇಂದರ್ ಎನ್ನುವ ವ್ಯಕ್ತಿಯಿಂದ ಮೂರು ಬಾರಿ ಡಿಕೆಶಿಗೆ ಹಣ
ಒಂದು ಮನೆಯಿಂದ ಇನ್ನೊಂದು ಮನೆಗೆ ಹಣ ಸಾಗಾಣೆ ಮಾಡುವುದು, ಶೈಲೇಂದರ್ ಎನ್ನುವ ವ್ಯಕ್ತಿ ಮೂರು ಬಾರಿ (1, 1.5 ಮತ್ತು 2.5 ಕೋಟಿ) ಡಿಕೆಶಿ ಮನೆಗೆ ಬಂದು ಹಣ ನೀಡಿದ್ದಾರೆ. ನಾನೇ ಐದು ಕೋಟಿ ರೂಪಾಯಿಯನ್ನು ಸಾಗಿಸಿದ್ದೇನೆಂದು ಶಿವಕುಮಾರ್ ಪಿಎ, ಹೇಳಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ.
ಬಿಡಿಬಿಡಿಯಾಗಿ ವರದಿ ಮಾಡಿದ ಟೈಮ್ಸ್ ನೌ ವಾಹಿನಿ
ಕಾಂಗ್ರೆಸ್ ಹೈಕಮಾಂಡ್'ಗೆ ಕಪ್ಪ ಕೊಟ್ಟಿರುವ ಮಾಹಿತಿ ಗೋವಿಂದರಾಜ್ ಡೈರಿಯಲ್ಲಿತ್ತು. ಈ ಡೈರಿಯಲ್ಲಿನ ಕೆಲ ಕಾಗದಗಳನ್ನು ಡಿಕೆಶಿ ಹರಿದುಹಾಕಿದರೆನ್ನಲಾಗಿದೆ. ಜನವರಿ 5ರಂದು ಎಐಸಿಸಿಗೆ 3 ಕೋಟಿ ರೂ ಹಣ ಸಂದಾಯವಾಗಿರುವ ಬಗ್ಗೆ ಈ ಡೈರಿಯಲ್ಲಿ ಬರೆಯಲಾಗಿದೆ ಎಂದು ಟೈಮ್ಸ್ ನೌನಲ್ಲಿ ವರದಿಯಾಗಿದೆ. ಟೈಮ್ಸ್ ನೌ ವಾಹಿನಿ ಗುರುವಾರ ಡೈರಿ ಬಗ್ಗೆ ಬಿಡಿಬಿಡಿಯಾಗಿ ವರದಿ ಮಾಡಿದೆ.