ನಾನು ಅವರ ಹಾದಿ ಹಿಡಿಯಬೇಕಾ?: ಪಾವನಾ ಗಣಪತಿ
ಕುಶಾಲನಗರ, ಜುಲೈ 17: ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಸಾವಿನ ಬಳಿಕ ಹುಟ್ಟೂರು ರಂಗಸಮುದ್ರತ್ತ ಎಲ್ಲರ ಕಣ್ಣು ನೆಟ್ಟಿದೆ. ಅಲ್ಲಿ ನೀರವ ಮೌನ ಮನೆ ಮಾಡಿದೆ. ಪತಿ ಸಾವಿನ ನಂತರದ ಬೆಳವಣಿಗೆ ಪತ್ನಿ ಪಾವನಾರನ್ನು ನೋವಿನ ಕಡಲಿಗೆ ತಳ್ಳಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸದಿರುವುದಕ್ಕೆ ಬೇಸತ್ತು, 'ನಾನು ಅವರ ಹಾದಿ ಹಿಡಿಯಬೇಕಾ?' ಎಂದು ಪ್ರಶ್ನಿಸಿದ್ದಾರೆ.
ಭಾನುವಾರ ರಂಗಸಮುದ್ರದ ಮೃತ ಡಿವೈಎಸ್ಪಿ ಗಣಪತಿ ಅವರ ಹನ್ನೊಂದನೇ ದಿನದ ಕಾರ್ಯವನ್ನು ಮಾಡಲಾಗುತ್ತಿದ್ದು, ಕುಟುಂಬಸ್ಥರು ಮತ್ತು ಬಂಧುಬಳಗದವರು ನೆರೆದು ಕೊಡವ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದಾರೆ.
ಕೊಡಗು ಸೇರಿದಂತೆ ಹಲವೆಡೆ ಸಾವಿಗೆ ಸಂಬಂಧಿಸಿದಂತೆ ನ್ಯಾಯ ದೊರೆಯಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಹೋರಾಟಗಳು ನಡೆಯುತ್ತಿವೆ. [ಗಣಪತಿ ಆತ್ಮಹತ್ಯೆ: 6 ತಿಂಗಳೊಳಗೆ ನ್ಯಾಯಾಂಗ ವರದಿ ಸಲ್ಲಿಕೆ]
ಪ್ರತಿಭಟನೆಗೆ ಸರ್ಕಾರ ಬಗ್ಗುತ್ತಿಲ್ಲ: ಪ್ರತಿಪಕ್ಷಗಳು ಆಹೋರಾತ್ರಿ ಧರಣಿ ನಡೆಸಿದರೂ ಸರ್ಕಾರ ಮಾತ್ರ ಮಣಿಯುತ್ತಿಲ್ಲ. ತನ್ನ ಮೊಂಡುತನವನ್ನು ಪ್ರದರ್ಶಿಸುತ್ತಲೇ ಇದೆ. ಕೊಡಗಿನಲ್ಲಿ ಬಂದ್, ವಾಹನ ಜಾಥಾ, ಪಂಜಿನ ಮೆರವಣಿಗೆಯಂತಹ ಪ್ರತಿಭಟನೆ ನಡೆದರೂ ಸರ್ಕಾರ ಬಗ್ಗಿದಂತೆ ಕಾಣುತ್ತಿಲ್ಲ.
ಗಣಪತಿ ವರ ಆತ್ಮಹತ್ಯೆಗೆ ಕಾರಣಕರ್ತರು ಎನ್ನಲಾದ ಸಚಿವ ಜಾರ್ಜ್ ಹಾಗೂ ಪೊಲೀಸ್ ಅಧಿಕಾರಿಗಳಿಬ್ಬರ ಮೇಲೆ ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ರಕ್ಷಿಸುವ ಕೆಲಸ ಸರ್ವ ರೀತಿಯಿಂದಲೂ ನಡೆಯುತ್ತಿದೆ.
ಪ್ರತಿಪಕ್ಷದ ನಾಯಕರು ಸೇರಿದಂತೆ ಹಲವರು ಈಗಾಗಲೇ ರಂಗಸಮುದ್ರದ ಮನೆಗೆ ತೆರಳಿ ಪತ್ನಿ ಪಾವನ ಮತ್ತು ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ಇತ್ತೀಚೆಗೆ ಸಾಂತ್ವನ ಹೇಳಲು ಬಂದ ಉಸ್ತುವಾರಿ ಸಚಿವ ಸೀತಾರಾಂ ಅವರಿಗೆ ಪ್ರತಿಭಟನೆಯ ಸ್ವಾಗತ ದೊರೆತಿದ್ದರಿಂದ ಸರ್ಕಾರದ ಕಡೆಯಿಂದ ಯಾವುದೇ ನಾಯಕರು ಇತ್ತ ಸುಳಿದಿಲ್ಲ. ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಪಾವನ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಇದೆಲ್ಲದರ ಮಧ್ಯೆ ಪತಿಯ ಸಾವಿಗೆ ನ್ಯಾಯ ದೊರಕುವ ಲಕ್ಷಣಗಳು ಕಾಣದಿರುವ ಕಾರಣ ನೊಂದ ಪತ್ನಿ ಪಾವನ ತಾನು ಕೂಡ ಪತಿಯ ಹಾದಿ ಹಿಡಿಯ ಬೇಕೆ ಎಂಬ ನೋವಿನ ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.