ಮಡಿಕೇರಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ
ಮಡಿಕೇರಿ, ಫೆಬ್ರವರಿ,04: ಕಾವೇರಿ ತವರಿನಲ್ಲಿ ನೀರಿಗೆ ಹಾಹಾಕಾರ ಎದ್ದಿದೆ. ಇದರ ಬಿಸಿ ಮಡಿಕೇರಿ ನಗರ ನಿವಾಸಿಗಳಿಗೆ ತಟ್ಟಿದೆ. ಪ್ರತಿದಿನವೂ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಗಾಳಿಬೀಡಿನ ಕೂಟುಹೊಳೆಯಲ್ಲಿ ನೀರಿನ ಪ್ರಮಾಣ ಕುಸಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನಗರಸಭೆ ಇದೀಗ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲು ನಿರ್ಧಾರ ಕೈಗೊಂಡಿದೆ.
ಇದೀಗ ಮುಂದಿನ 20 ದಿನಗಳಿಗೆ ಸಾಕಾಗುವಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ಹತ್ತಾರು ವರ್ಷಗಳಿಂದ ನಗರದ ಬಹುತೇಕ ಭಾಗಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವ ಕೂಟುಹೊಳೆ ನೀರು ಸಂಗ್ರಹಗಾರದಲ್ಲಿ ನೀರಿನ ಪ್ರಮಾಣ ಕುಸಿದಿದ್ದು, ಬೇಸಿಗೆಯಲ್ಲಿ ನಗರದ ನಾಗರಿಕರ ಬೇಡಿಕೆ ಪೂರೈಸುವಲ್ಲಿ ವಿಫಲವಾಗುತ್ತಿದೆ.[ಟಾಟಾ ಸಂಸ್ಥೆಯಿಂದ 4 ಸಾವಿರ ಹಳ್ಳಿಗರಿಗೆ ನೆರವಾಗುವ ನೀರಿನ ಘಟಕ]
ಹೊಳೆಗೆ ಅಡ್ಡಲಾಗಿ ಕುಂಡಾಮೇಸ್ತ್ರಿ ಯೋಜನಾ ಪ್ರದೇಶದಲ್ಲಿ ಇನ್ನೂ ಮರಳಿನ ಚೀಲಗಳ ತಡೆಗೋಡೆ ನಿರ್ಮಾಣವಾಗಿಲ್ಲ. ನೀರಿನ ಸಂಗ್ರಹವಿಲ್ಲದೆ ಪಂಪಿಂಗ್ ಮಾಡುವುದು ಕಷ್ಟವಾಗಲಿದೆ. ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಕರ್ನಾಟಕ ನೀರು ಸರಬರಾಜು ಮಂಡಳಿ ವಹಿಸಿಕೊಂಡಿರುವುದರಿಂದ ಮಂಡಳಿಯವರು ಕಾಮಗಾರಿ ಕೈಗೆತ್ತಿಕೊಳ್ಳಲಿಲ್ಲ.
ಇಪ್ಪತ್ತು ದಿನಗಳಲ್ಲಿ ತಡೆಗೋಡೆ ನಿರ್ಮಾಣವಾದರೆ ಸಂಗ್ರಹವಾದ ನೀರನ್ನು ಕೂಟುಹೊಳೆಗೆ ಬದಲಾಗಿ ಮೈತ್ರಿ ಭವನದ ಬಳಿಯಲ್ಲಿರುವ ಟ್ಯಾಂಕ್ ಗೆ ಪಂಪ್ ಮಾಡಿ, ನಂತರ ಸ್ಟೋನ್ ಹಿಲ್ ಬಳಿಯಲ್ಲಿರುವ ನೀರಿನ ಸಂಗ್ರಹಾಗಾರಕ್ಕೆ ಸರಬರಾಜು ಮಾಡಲಾಗುವುದೆಂದು ನಗರಸಭಾ ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಮಿನಾಶಕ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆ
ಮೈಸೂರು, ಫೆಬ್ರವರಿ,04: ಗ್ರಾಮದಲ್ಲಿ ನಡೆದ ಗಲಭೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಗೆ ಕರೆದೊಯ್ದರಿಂದ ಮನನೊಂದ ಮೈಸೂರಿನ ಮರದೂರು ಗ್ರಾಮದ ಉಮೇಶ್ ನಾಯಕ (22) ಎಂಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತ ಬಿಳಿಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿ.ಎ.ವ್ಯಾಸಂಗ ಮಾಡುತ್ತಿದ್ದ. ಭಾನುವಾರ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಭೆಯೊಂದರಲ್ಲಿ ಉಮೇಶ್ ಹೆಸರನ್ನು ಸೇರಿಸಿದ್ದರು. ಈ ಕುರಿತಂತೆ ಬಿಳಿಕೆರೆ ಠಾಣೆಯಲ್ಲಿ ಎರಡೂ ಗುಂಪುಗಳ ನಡುವೆ ಸಂಧಾನ ನಡೆದು ಉಮೇಶ್ ಸೇರಿದಂತೆ ಇನ್ನೂ ಮೂವರು ಸ್ನೇಹಿತರು ಗ್ರಾಮದ ಹಿರಿಯ ಆದೇಶದಂತೆ ಕ್ಷಮೆ ಯಾಚಿಸಿದ್ದರು.[ಫೆ. 5ರಿಂದ ಸುತ್ತೂರು ಜಾತ್ರೆ, ಹೋಗೋಣ ಬನ್ನಿ]
ಇದರಿಂದ ಬೇಸತ್ತ ಉಮೇಶ್ ಸೋಮವಾರ ಮಧ್ಯಾಹ್ನ ಮನೆಯಲ್ಲಿದ್ದ ಅವರೆ ಬೆಳೆಗೆ ಬಳಸುವ ಕೀಟನಾಶಕ ಮಾತ್ರೆಗಳನ್ನು ತಿಂದು ಅಸ್ವಸ್ಥನಾದ ಈತನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.