ಬರ ಪರಿಹಾರಕ್ಕೆ ಕೇಂದ್ರದ ಮೊರೆ ಹೋದ ರಾಜ್ಯ ಸರ್ಕಾರ
ನವದೆಹಲಿ, ಮೇ 08: ಕರ್ನಾಟಕ ಭೀಕರ ಬರವನ್ನು ಎದುರಿಸುತ್ತಿದ್ದು ಕೇಂದ್ರ ಸರ್ಕಾರ 12,272 ಕೋಟಿ ರುಪಾಯಿ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಪ್ರಧಾನಿಯನ್ನು ಭೇಟಿ ಮಾಡಿದ ಸಿಎಂ, ರಾಜ್ಯದ 27 ಜಿಲ್ಲೆಗಳ 136 ತಾಲೂಕುಗಳಲ್ಲಿ ಬರಗಾಲವಿದೆ. ನೆರವು ಮತ್ತು ಪರಿಹಾರಕ್ಕಾಗಿ 12,272 ಕೋಟಿ ರು. ಬೇಕಿದೆ ಎಂದು ತಿಳಿಸಿದ್ದಾರೆ.[ಉತ್ತರಾಖಂಡ ಒಂದೇ ಅಲ್ಲ ಉತ್ತರ ಕನ್ನಡವು ಸುಡ್ತಿದೆ!]
ಭೇಟಿ ಬಳಿಕ ಮಾತನಾಡಿದ ಸಿಎಂ, ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿ ಬಗ್ಗೆ ಪ್ರಧಾನಿಯೊಂದಿಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ್ದೇವೆ. ಬರ ಪರಿಹಾರಕ್ಕಾಗಿ ಹೆಚ್ಚಿನ ನೆರವು ನೀಡಲು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಶೇ.32ರಷ್ಟು ಬೆಳೆ ನಷ್ಟವಾಗಿದೆ. ಒಟ್ಟಾರೆ ರಾಜ್ಯದಲ್ಲಿ 15,630 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ. ಈ ಎಲ್ಲಾ ಮಾಹಿತಿಯನ್ನು ಪ್ರಧಾನಿಗೆ ನೀಡಿದ್ದೇವೆ ಎಂದು ಹೇಳಿದರು.[ಮಲೆನಾಡಿನಲ್ಲೂ ಜಲಕ್ಷಾಮ! ಇದಕ್ಕೆ ಕಾರಣಗಳು ಇಲ್ಲಿವೆ]
ರಾಜ್ಯದ ಬರಪೀಡಿತ ತಾಲೂಕುಗಳಲ್ಲಿ ಸಿಎಂ ಪ್ರವಾಸ ಮಾಡಿ ನೈಜ ಮಾಹಿತಿಯನ್ನು ಕಲೆಹಾಕಿದ್ದಾರೆ. ಬೀದರ್, ರಾಯಚೂರು, ಗದಗ ಸೇರಿದಂತೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲೂ ಪ್ರವಾಸ ಮಾಡಿದ್ದಾರೆ.