ಚಿಂತೆ ಬೇಡ, SSLC ಜೀವನ ಬದಲಿಸುವ ನಿರ್ಣಾಯಕ ಮಜಲಲ್ಲ
ಇಂದು ರಾಜ್ಯದಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಿದೆ . ವರ್ಷವಿಡೀ ಖುಷಿಯಿಂದ ಪರೀಕ್ಷೆಯಲ್ಲಿ ಪಾಸಾಗಲೇಬೇಕು, ಹೆಚ್ಚು ಅಂಕ ಪಡೆಯಲೇಬೇಕು ಎಂಬ ಹಂಬಲದಿಂದ ಓದಿದ ಮುಗ್ದ ಮನಸುಗಳಿಗೆ ಏನೋ ಆತಂಕ, ದುಗುಡ ಪ್ರಾರಂಭವಾಗಿದೆ.
ಮಂಗಳೂರು, ಮಾರ್ಚ್ 30: ಇಂದು ರಾಜ್ಯದಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಿದೆ . ವರ್ಷವಿಡೀ ಖುಷಿಯಿಂದ ಪರೀಕ್ಷೆಯಲ್ಲಿ ಪಾಸಾಗಲೇಬೇಕು, ಹೆಚ್ಚು ಅಂಕ ಪಡೆಯಲೇಬೇಕು ಎಂಬ ಹಂಬಲದಿಂದ ಓದಿದ ಮುಗ್ದ ಮನಸುಗಳಿಗೆ ಏನೋ ಆತಂಕ, ದುಗುಡ ಪ್ರಾರಂಭವಾಗಿದೆ.
ಎಲ್ಲಿ ಪಶ್ನೆ ಪತ್ರಿಕೆ ಕಠಿಣವಾಗಿರುತ್ತದೋ, ಓದಿದ ಉತ್ತರಗಳು ಮರೆತು ಹೋಗಿಬಿಡುತ್ತದೋ, ಕಡಿಮೆ ಅಂಕ ಬಂದು ಸಹಪಾಠಿಗಳ ಮಧ್ಯೆ ಅಪಹಾಸ್ಯಕ್ಕಿಡಾಗುತ್ತೇನೋ, ಒಳ್ಳೆಯ ಕಾಲೇಜಿನಲ್ಲಿ ಸೀಟು ಮಿಸ್ ಆಗಿಬಿಡುತ್ತದೋ, ಎಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿ ಪರೀಕ್ಷೆ ಮುಂದೂಡಲ್ಪಡುತ್ತದೋ ಹೀಗೆ ಹತ್ತು ಹಲವು ಆತಂಕಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮನೆ ಮಾಡಿವೆ.[ಅರಮನೆ ನಗರಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಹವಾ!]
ಇವುಗಳ ಮಧ್ಯೆ ತಲೆ ನೋವು, ಕಣ್ಣುರಿ, ಸುಸ್ತೆನಿಸುವುದು, ವಾಂತಿ, ಮೈಕೈ ನೋವು ಪರೀಕ್ಷಾ ಸಮಯದಲ್ಲಿ ಕಾಣಿಸಿಕೊಳ್ಳುತ್ತವೆ. ಮನಸಿನ ಮೇಲೆ ಒತ್ತಡ ಬಿದ್ದಾಗ ಅನುಭವಕ್ಕೆ ಬರುವ ಈ ಕಾಯಿಲೆ ರೂಪದ ಶೂಲೆಗಳನ್ನು ಮನಶಾಸ್ತ್ರಜ್ಞರು ಮನೋದೈಹಿಕ ಕಾಯಿಲೆಗಳು ಎಂದು ಕರೆಯುತ್ತಾರೆ. ಇವು ನಿಜದಲ್ಲಿ ಕಾಯಿಲೆಗಳಾಗಿರದೇ ಕೇವಲ ಮಾನಸಿಕ ಒತ್ತಡವಷ್ಟೆ. ಈ ರೀತಿಯ ಸಮಸ್ಯೆಗಳಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದೇ ಸೂಕ್ತ ಮತ್ತು ಸಮರ್ಪಕ ಪರಿಹಾರ. ಅಷ್ಟೊಂದು ಅಗತ್ಯವೆನಿಸಿದರೆ ಒಮ್ಮೆ ವೈದ್ಯರನ್ನು ಭೇಟಿ ಮಾಡಿ ನಾನು ನಿರೋಗಿ ಎಂದು ದೃಢಪಡಿಸಿಕೊ0ಡರೆ ಇನ್ನೂ ಒಳಿತು.[ಸದ್ದು. ನಮ್ಮ ಹುಡುಗರು, ಹುಡುಗಿಯರು ಪರೀಕ್ಷೆ ಬರೀತಾಯಿದಾರೆ]
ವಿದ್ಯಾರ್ಥಿಗಳೇ, ನೀವು ಬರೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರೌಢ ಶಿಕ್ಷಣದಿಂದ ಕಾಲೇಜು ಶಿಕ್ಷಣ ಸೇರಲು ಅರ್ಹತೆಯೇ ಹೊರತು ಜೀವನ ಬದಲಿಸುವ ಯಾವುದೇ ನಿರ್ಣಾಯಕ ಮಜಲಲ್ಲ. ವಾಸ್ತವವಾಗಿ ಪರೀಕ್ಷೆ ಎಂದರೆ ನೀವು ಓದಿರೋದನ್ನ ಸ್ಥಳ, ಪರಿಸರದ, ಸುತ್ತಲಿರುವ ಅಪರಿಚಿತರ ಬಗ್ಗೆ ತಲೆಕೆಡಿಸಿಕೊಳ್ಳದೇ ಪ್ರಶ್ನೆಗಳನ್ನು ಅರ್ಥೈಸಿಕೊ0ಡು ಸಂಬಂಧಿಸಿದ ವಿಷಯಗಳನ್ನು ಮುಕ್ತ ಮನಸ್ಸಿನಿಂದ ಬರವಣಿಗೆಯಲ್ಲಿ ವ್ಯಕ್ತಪಡಿಸುವುದಷ್ಟೆ. ಈ ಕಾರ್ಯಕ್ಕಾಗಿ ವ್ಯರ್ಥ, ವಿಪರೀತ ಯೋಚನೆಮಾಡಿ ಮಾನಸಿಕ ಒತ್ತಡಕ್ಕಿಡಾಗುವ ಅಗತ್ಯವಿಲ್ಲ.
ಅಗತ್ಯ ಪೂರ್ವಸಿದ್ಧತೆ ಇಲ್ಲದ ವಿದ್ಯಾರ್ಥಿಗಳು ಪಾಸಾಗಲೇ ಬೇಕು, ಇಲ್ಲದಿದ್ದರೆ ನನ್ನ ಜೀವನವೇ ವ್ಯರ್ಥ, ನನ್ನ ಮರ್ಯಾದೆ ಪ್ರಶ್ನೆ ಎಂದು ನಕಲು ಮಾಡುವ ದುಸ್ಸಾಹಸಕ್ಕೆ ಕೈಹಾಕಿ ಪರೀಕ್ಷೆಯಿಂದ ಅಮಾನತುಗೊ0ಡು ನಿಮ್ಮ ಮತ್ತು ನಿಮ್ಮನ್ನು ನಂಬಿದವರ ಗೌರವಕ್ಕೆ ಧಕ್ಕೆ ತರದಿರಿ.[ಪರೀಕ್ಷೆಗೆ ತೆರಳುವ ಮುನ್ನ ಈ 10 ಅಂಶಗಳನ್ನು ಮರೆಯಲೇಬೇಡಿ]
ನಾನು ನಿಜವಾಗಲೂ ಪಾಸಾಗಲು ಸಾಧ್ಯವಿಲ್ಲ, ನನ್ನಿಂದ ನನ್ನ ಪೋಷಕರು-ಶಿಕ್ಷಕರು ನಿರೀಕ್ಷಿಸಿದ ಅಂಕ ಗಳಿಸಲು ಸಾಧ್ಯವಿಲ್ಲ. ಅಥವಾ ಒಂದು ವೇಳೆ ನಾನು ಅನುತ್ತೀರ್ಣಗೊಂಡರೆ ಎಂಬ ಆತಂಕದಿ0ದ ಅಥವಾ ಒಂದು ಪಕ್ಷ ಅನುತ್ತೀರ್ಣಗೊಂಡರೂ ಆತ್ಮಹತ್ಯೆಯಂತಹ ಮಹಾ ಪಾಪದ ಕಾರ್ಯಕ್ಕೆ ಮುಂದಾಗುವುದು ಮಹಾ ಮೂರ್ಖತನ. ಟೀವಿ, ಮೊಬೈಲುಗಳಿ0ದ ದೂರವಿದ್ದು, ಸ್ವಲ್ಪ ಸಮಯವಾದರೂ ಪ್ರಾರ್ಥನೆ, ಧ್ಯಾನದ ಮೂಲಕ ಮನಸ್ಸಿಗೆ ಚೈತನ್ಯ ತುಂಬಿ.
ಕೆಲಸಕ್ಕೆ ಬಾರದ ಯೋಚನೆಗಳನ್ನು ಬಿಟ್ಟು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಿ. ಆತ್ಮ ವಿಶ್ವಾಸದಿಂದ ಪರೀಕ್ಷೆಯನ್ನು ಕಲಿಕೆಯ ಮಹತ್ವದ ಭಾಗವೆಂದು ಭಾವಿಸಿ ಸಕಾರಾತ್ಮಕ ಯೋಚನೆಯಿಂದ ಸಂತೋಷದಿಂದ ಎದುರಿಸುವುದೇ ಬುದ್ಧಿವಂತಿಕೆ. ಪರೀಕ್ಷೆ ಮುಗಿದ ಮೇಲೆ ಪುನಃ ಪರೀಕ್ಷೆ ಬರುತ್ತದೆ. ನಿರೀಕ್ಷಿತ ಫಲಿತಾಂಶ ಬರದಿದ್ದರೂ ಯಶಸ್ಸು ಹುಡುಕುವವನಿಗೆ ಹಲವು ದಾರಿಗಳಿವೆ. ದುಡುಕಿ ಅಪರೂಪಕ್ಕೆ ದೊರೆತ ಮಾನವ ಜೀವನವನ್ನು ಹಾಳು ಮಾಡಿಕೊಳ್ಳದಿರಿ. ಮುಂದಿದೆ ಸುಂದರ ಬದುಕು. ಯೋಜಿಸಿ ಉತ್ತಮ ನಾಳೆಗಾಗಿ.