'ಡೊನೇಶನ್ ಗೇಟ್' ಹಗರಣದ ಕೇಂದ್ರ ಬಿಂದು, ಯಾರು ಈ ಗೋವಿಂದರಾಜ್?
ಹೆಸರು ಕೆ. ಗೋವಿಂದರಾಜ್. ಸದ್ಯ ಕೇಳಿ ಬರುತ್ತಿರುವ 'ಡೊನೇಶನ್ ಗೇಟ್' ಹಗರಣದ ಕೇಂದ್ರ ಬಿಂದು. ಸದಾ ಮುಖ್ಯಮಂತ್ರಿಗಳ ಜತೆ ಕಾಣಿಸಿಕೊಳ್ಳುವ ಇವರನ್ನು ಮುಖ್ಯಮಂತ್ರಿಗಳ ಆಪ್ತ ಎಂದೇ ಗುರುತಿಸುತ್ತಾರೆ.
ಬೆಂಗಳೂರು, ಫೆಬ್ರವರಿ 24: ಹೆಸರು ಕೆ. ಗೋವಿಂದರಾಜ್. ಸದ್ಯ ಕೇಳಿ ಬರುತ್ತಿರುವ 'ಡೊನೇಶನ್ ಗೇಟ್' ಹಗರಣದ ಕೇಂದ್ರ ಬಿಂದು. ಸದಾ ಮುಖ್ಯಮಂತ್ರಿಗಳ ಜತೆ ಕಾಣಿಸಿಕೊಳ್ಳುವ ಇವರನ್ನು ಮುಖ್ಯಮಂತ್ರಿಗಳ ಆಪ್ತ ಎಂದೇ ಗುರುತಿಸುತ್ತಾರೆ.
2016ರಲ್ಲಿ ಇವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಸಿಕ್ಕಿದ್ದು ಎನ್ನಲಾದ ಡೈರಿಯ ಹಾಳೆಗಳು ಗುರುವಾರ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಹಿರಂಗವಾಗಿ ಗೋವಿಂದರಾಜ್ ಹೆಸರು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಹಾಗಾದರೆ ಐ ಗೋವಿಂದರಾಜ್ ಯಾರು? ವಿವರಗಳು ಇಲ್ಲಿವೆ.[ಡೊನೇಷನ್ ಗೇಟ್ ಹಗರಣ : ಯಾರು ಏನು ಹೇಳುತ್ತಿದ್ದಾರೆ?]
ಯಾರು ಈ ಗೋವಿಂದರಾಜ್?
ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರು ಎಂಬುದನ್ನು ಬಿಟ್ಟರೆ ಗೋವಿಂದರಾಜ್ ಹೆಚ್ಚಾಗಿ ಕಾಣಿಸಿಕೊಳ್ಳುವುದು ಕ್ರೀಡಾ ಕ್ಷೇತ್ರದಲ್ಲಿ. ಸದ್ಯ ಅವರು ಹಲವು ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರಾಗಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ಹಲವು ಪ್ರಶಸ್ತಿಗಳೂ ಇವರಿಗೆ ಸಂದಿವೆ.[ಕಾಂಗ್ರೆಸ್ 'ಸತ್ಯಮೇವ ಜಯತೆ' ಬಲೂನಿಗೆ 'ಡೊನೇಶನ್ ಗೇಟ್' ಪಿನ್ ಚುಚ್ಚಿದ ಬಿಜೆಪಿ]
ಕರ್ನಾಟಕ ಒಲಂಪಿಕ್ ಸಮಿತಿ ಅಧ್ಯಕ್ಷ
ಕರ್ನಾಟಕ ಒಲಂಪಿಕ್ ಸಮಿತಿ ಅಧ್ಯಕ್ಷ, ಭಾರತೀಯ ಒಲಂಪಿಕ್ ಸಮಿತಿಯ ಸಹಾಯಕ ಉಪಾಧ್ಯಕ್ಷ, ಕರ್ನಾಟಕ ಬಾಸ್ಕೆಟ್ ಬಾಲ್ ಫೆಡರೇಶನ್ ಹಾಗೂ ಪೆನ್ಸಿಂಗ್ ಫೆಡರೇಶನಿನಲ್ಲಿ ಹಿರಿಯ ಉಪಾಧ್ಯಕ್ಷ, ಕರ್ನಾಟಕ ಫೂಟ್ಬಾಲ್ ಅಸೋಸಿಯೇಶನ್ ಉಪಾಧ್ಯಕ್ಷ, ಕರ್ನಾಟಕ ಬಾಸ್ಕೆಟ್ ಬಾಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ, ಕಳೆದ 10 ವರ್ಷಗಳಿಂದ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಸದಸ್ಯರಾಗಿ ಗೋವಿಂದರಾಜ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕ್ರೀಡಾ ಕಾರ್ಯಕ್ರಮಗಳ ಆಯೋಜನೆ
ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಗೋವಿಂದರಾಜು ಆಯೋಜಿಸಿದ್ದಾರೆ ಎಂದು ಅವರ ವೆಬ್ಸೈಟ್ ಹೇಳುತ್ತದೆ. ಬೆಂಗಳೂರಿನಲ್ಲಿ 2004ರಲ್ಲಿ ನಡೆದ ಫಿಬಾ ಏಷ್ಯನ್ ಬಾಸ್ಕೆಟ್ ಬಾಲ್ ಜೂನಿಯರ್ ಚಾಂಪಿಯನ್ ಶಿಪ್ ಸೇರಿದಂತೆ ಹಲವು ಕ್ರೀಡಾಕೂಟಗಳ ಆಯೋಜನೆಯಲ್ಲಿ ಗೋವಿಂದರಾಜ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಸಿಂಡಿಕೇಟ್ ಸದಸ್ಯ
ಇದಿಷ್ಟೆ ಅಲ್ಲ, ಗೋವಿಂದರಾಜ್ ಹುದ್ದೆಗಳ ಪಟ್ಟಿ ಮತ್ತೂ ಬೆಳೆಯುತ್ತದೆ. ಕಳೆದ 8 ವರ್ಷಗಳಿಂದ ಏಕಲವ್ಯ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ, ಭಾರತೀಯ ಕಾಸ್ಟ್ ಅಕೌಂಟ್ಸ್ ಇನ್ಸಿ ಟ್ಯೂಟ್ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೂ ಹೌದು.
ಇಂದಿರಾ ಪ್ರಿಯದರ್ಶಿನಿ ಗೌರವ
1993ರಲ್ಲಿ ದಸರಾ ಪ್ರಶಸ್ತಿಯನ್ನು ಗೋವಿಂದರಾಜ್ ಅವರಿಗೆ ನೀಡಲಾಗಿದೆ. 2006ರಲ್ಲಿ ಪ್ರತಿಷ್ಠಿತ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿಯನ್ನೂ ಇವರು ಪಡೆದುಕೊಂಡಿದ್ದಾರೆ.
ಚುನಾವಣಾ ಅಖಾಡದಲ್ಲಿ ಗೋವಿಂದರಾಜ್
ಸದ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಗೋವಿಂದರಾಜ್ ಚುನಾವಣಾ ಅಖಾಡಕ್ಕೆ ಇಳಿದಿದ್ದು 1999ರಲ್ಲಿ. ಮೊದಲಬಾರಿಗೆ ಬೆಂಗಳೂರಿನ ಶಿವಾಜಿನಗರದಿಂದ ಅವರು ಚುನಾವಣಾ ಅಖಾಡಕ್ಕೆ ಧುಮುಕಿದರು. ಕಾಂಗ್ರೆಸ್ ಪಕ್ಷದಲ್ಲಿ ಹಲವು ಹುದ್ದೆಗಳನ್ನು ಅವರು ನಿರ್ವಹಿಸಿದ್ದಾರೆ.
ಸಂಸದೀಯ ಕಾರ್ಯದರ್ಶಿ
2012ರಲ್ಲಿ ಗೋವಿಂದರಾಜ್ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. 2018ರ ವರೆಗೆ ಇವರ ಅಧಿಕಾರಾವಧಿ ಇರಲಿದೆ. 2015ರಲ್ಲಿ 10 ಜನ ಸಂಪುಟ ಕಾರ್ಯದರ್ಶಿಗಳನ್ನು ನೇಮಕ ಮಾಡುವಾಗ ಗೋವಿಂದರಾಜ್ ರನ್ನು ಸಿದ್ದರಾಮಯ್ಯ ತಮ್ಮ ಸಂಪುಟ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡರು.
ಸಿದ್ದರಾಮಯ್ಯ ಆಪ್ತ
ಸಿದ್ದರಾಮಯ್ಯನವರ ಸಂಪುಟ ಕಾರ್ಯದರ್ಶಿಯೂ ಆಗಿರುವ ಗೋವಿಂದರಾಜ್ ರನ್ನು ಸದ್ಯ ಸಿದ್ದರಾಮಯ್ಯ ಆಪ್ತ ಎಂದೇ ಗುರುತಿಸಲಾಗುತ್ತೆ. ಅದಕ್ಕೆ ಅವರಿರುವ ಹುದ್ದೆ ಒಂದು ಕಡೆ ಕಾರಣವಾದರೆ, ಇನ್ನೊಂದು ಕಡೆ ಸದ್ದರಾಮಯ್ಯ ಜತೆ ಹಿಂದಿನಿಂದಲೂ ಒಡನಾಟ ಇತ್ತು ಎನ್ನುವುದಕ್ಕೆ ಅವರದ್ದೇ ವೆಬ್ಸೈಟಿನ ಚಿತ್ರಗಳು ಸಾಕ್ಷಿ ನುಡಿಯುತ್ತವೆ.
ಸದ್ಯ ಇದೇ ಗೋವಿಂದರಾಜ್ ಹೆಸರು 'ಡೊನೇಶನ್ ಗೇಟ್' ಹಗರಣದಲ್ಲಿ ಕೇಳಿ ಬಂದಿದೆ. ಗೋವಿಂದರಾಜ್ ಡೈರಿಯಲ್ಲಿ ಕಾಂಗ್ರೆಸ್ ಹೈಕಮಾಂಡಿಗೆ ನೀಡಿದ ಹಣದ ವಿವರಗಳಿವೆ ಎನ್ನಲಾಗಿದೆ.