ಗೋವಿಂದ ರಾಜು ಡೈರಿ ಎಫೆಕ್ಟ್: ಮಂತ್ರಿ ಮಂಡಲದಿಂದ ಪ್ರಭಾವಿ ಸಚಿವರು ಔಟ್?
ಎಂಎಲ್ ಸಿ ಗೋವಿಂದ ರಾಜು ಅವರ ಡೈರಿಯಲ್ಲಿನ ಸ್ಫೋಟಕ ಮಾಹಿತಿಗಳು ಮಾಧ್ಯಮಗಳ ಮೂಲಕ ಬಹಿರಂಗಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ.
ಬೆಂಗಳೂರು, ಫೆಬ್ರವರಿ 25: ಕಾಂಗ್ರೆಸ್ ಕಪ್ಪ ಪ್ರಕರಣ ಕುರಿತಂತೆ ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು ಅವರ ಡೈರಿಯ ವಿವರಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆನ್ನಲಾಗಿದೆ.
ಸುಮಾರು 20 ಸಚಿವರನ್ನು ಸಂಪುಟದಿಂದ ಕೈಬಿಡಲು ನಿರ್ಧರಿಸಲಾಗಿದೆ ಎಂದೂ ಹೇಳಲಾಗಿದೆ.
ಈ ನಿಟ್ಟಿನಲ್ಲಿ ಈಗಾಗಗಲೇ ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಶೀಘ್ರದಲ್ಲೇ ಮಂತ್ರಿ ಮಂಡಲ ಪುನರಾಚನೆಯಾಗಲಿದೆ ಎಂದು ಹೇಳಲಾಗಿದೆ. ಇದಕ್ಕೆ ಪೂರಕವಾಗಿ ಹಿರಿಯ ಸಚಿವರಿಗೆ ಮಂತ್ರಿ ಮಂಡಲ ಪುನಾರಾಚನೆಗೆ ಸಿದ್ಧರಾಗಿ ಎಂದು ಮಾರ್ಮಿಕವಾದ ಸಂದೇಶವೊಂದು ರವಾನೆಯಾಗಿದೆ ಎಂದು ಹೇಳಲಾಗಿದೆ.[ಡೈರಿಯಲ್ಲಿ ಕಂಡ ಡೊನೆಷನ್ ಆರ್ ಜಿ ಟೂರಿಗೆ ವಿನಿಯೋಗ: ಸಿಟಿಆರ್]
ಮೂಲಗಳ ಪ್ರಕಾರ, ಮಂತ್ರಿ ಮಂಡಲ ಪುನಾರಚನೆ ವೇಳೆ ಕಿರಿಯ ನಾಯಕರಿಗೆ ಪ್ರಾಮುಖ್ಯತೆ ನೀಡಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ, ಹಾಲಿ ಹಿರಿಯ ಸಚಿವರಾದ ಎಚ್. ಆಂಜನೇಯ, ಎಚ್.ಕೆ. ಪಾಟೀಲ್, ಡಿ.ಕೆ. ಶಿವಕುಮಾರ್, ರಾಮಲಿಂಗಾ ರೆಡ್ಡಿ ಮೊದಲಾದವರು ಸ್ಥಾನ ಕಳೆದುಕೊಳ್ಳಲಿದ್ದಾರೆಂದು ಹೇಳಲಾಗಿದೆ. ಹೀಗಾದಲ್ಲಿ, ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತ ಭುಗಿಲೆೇಳಲಿದೆ ಎಂದೂ ಹೇಳಲಾಗುತ್ತಿದೆ.[ಕಾಂಗ್ರೆಸ್ ಅಧಿಕಾರದಲ್ಲಿರುವ ಯಾವ ರಾಜ್ಯವೂ ಉದ್ಧಾರವಾಗಲ್ಲ: ಮೋದಿ]
ಫೆ. 25ರಂದು ಸಮನ್ವಯ ಸಮಿತಿ ಸಭೆ: ಮಂತ್ರಿಮಂಡಲ ಪುನಾರಚನೆಗೆ ಸಂಬಂಧಿಸಿದಂತೆ, ಫೆ. 25ರಂದು ರಾಜ್ಯ ಕಾಂಗ್ರೆಸ್ ನ ಸಮನ್ವಯ ಸಮಿತಿ ಸಭೆ ಕರೆಯಲಾಗಿದ್ದು, ಮಂತ್ರಿಮಂಡಲದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಹೊರಹಾಕಬೇಕು ಎಂಬುದರ ಬಗ್ಗೆ ತೀರ್ಮಾನವಾಗುವ ನಿರೀಕ್ಷೆಯಿದೆ.