ಡೊನೇಷನ್ ಗೇಟ್ ಹಗರಣ : ರಾಜಕಾರಣಿಗಳ ವಾಗ್ಬಾಣ
ಕಪ್ಪ ಕಾಣಿಕೆಯ ವಿವರಗಳಿರುವ ಡೈರಿ ಕರ್ನಾಟಕ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ವಿಧಾನಪರಿಷತ್ ಸದಸ್ಯ ಗೋವಿಂದರಾಜ್ ಅವರ ಬಳಿ ಸಿಕ್ಕಿತೆನ್ನಲಾದ ಡೈರಿಯಲ್ಲಿ ಹಲವು ನಾಯಕರ ಹೆಸರು ಕೇಳಿಬಂದಿದೆ. ಬಿಜೆಪಿ ನಾಯಕರು ಏನು ಹೇಳುತ್ತಿದ್ದಾರೆ?
ಬೆಂಗಳೂರು, ಫೆಬ್ರವರಿ 24 : ಕರ್ನಾಟಕದ ರಾಜಕಾರಣಿಗಳ ಪಾಲಿಗೆ #DonationGate ನಿಜವಾದ 'ಶಿವರಾತ್ರಿ'. ಎಲ್ಲ ಬಾಯಲ್ಲಿ 'ಕಪ್ಪ ಕಾಣಿಕೆ'ಯ ಪಾರಾಯಣ. ಈ ಹಗರಣ ನಿದ್ದೆಗೆಡಿಸಿರುವುದರಿಂದ ಅನುದಿನವೂ ಜಾಗರಣೆಯೇ!
ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ 'ಕಪ್ಪು ಕಾಣಿಕೆ'ಯ ಆರೋಪ ಪ್ರತ್ಯೋರೋಪಗಳ ನಡುವೆ ಸ್ಫೋಟಗೊಂಡಿರುವ ಈ ಹಗರಣ ರಾಜ್ಯ ರಾಜಕೀಯದ ದಿಕ್ಕನ್ನೇ ಬದಲಿಸಬಲ್ಲದು. ಮುಂದಿನ ವರ್ಷ ಜರುಗಲಿರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯೂ ಆಗಬಲ್ಲದು.
ಕಾಂಗ್ರೆಸ್ ಆರೋಪಗಳಿಂದ ಬಸವಳಿದಿದ್ದ ಬಿಜೆಪಿ ನಾಯಕರಿಗೆ, ಕಾಂಗ್ರೆಸ್ನ ಯಾವ್ಯಾವ ನಾಯಕರಿಗೆ ಎಷ್ಟೆಷ್ಟು ಕಪ್ಪ ಕಾಣಿಕೆ ಸಂದಾಯವಾಗಿದೆ ಎಂದು ಬಹಿರಂಗವಾಗಿರುವ ಮಾಹಿತಿಗಳು ಟಾನಿಕ್ಕಿನಂತೆ ಬಂದಿವೆ. ಮತ್ತೆ ಚಿಗಿತುಕೊಂಡಿರುವ ಬಿಜೆಪಿ ನಾಯಕರು, ಸಮಯಸಾಧಿಸಿ ಕಾಂಗ್ರೆಸ್ ನಾಯಕರ ಮೇಲೆ ವಾಗ್ದಾಳಿ ಶುರು ಮಾಡಿದ್ದಾರೆ.
ಸಿದ್ದರಾಮಯ್ಯನವರ ಅತ್ಯಾಪ್ತ ಎಂಎಲ್ಸಿ ಗೋವಿಂದರಾಜ್ ಅವರ ಬಳಿ ಸಿಕ್ಕಿದೆಯೆನ್ನಲಾದ ಈ ಡೈರಿಯಲ್ಲಿ ಹಲವಾರು ನಾಯಕರ ಹೆಸರುಗಳು ಸಾಂಕೇತಾಕ್ಷರಗಳಲ್ಲಿ ಅಡಕವಾಗಿವೆ. ರಾಜ್ಯ ನಾಯಕರಿಂದ ಹಿಡಿದು ರಾಷ್ಟ್ರ ರಾಜಕಾರಣದಲ್ಲಿ ಮಿನುಗುತ್ತಿರುವ ಹಲವರ ಹೆಸರುಗಳು ಕರ್ನಾಟಕದಲ್ಲಿ ಕೋಲಾಹಲವನ್ನೆಬ್ಬಿಸಿವೆ.
ಈ ಬಿಗ್ಗೆಸ್ಟ್ ಸ್ಕ್ಯಾಮ್ ಬಗ್ಗೆ ಯಾವ ನಾಯಕರು ಏನು ಹೇಳುತ್ತಿದ್ದಾರೆ ಮುಂದೆ ಓದಿ. [ಗೋವಿಂದರಾಜ್ ಡೈರಿ ಸ್ಪೋಟ: ಕೋಟಿ ಕೋಟಿ ಹಣದ ಸಂಪೂರ್ಣ ವಿವರ]
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ
ಅಂಥದೊಂದು ಡೈರಿಯೇ ಇಲ್ಲವೆಂದು ಸಾಬೀತಾದರೆ ನಾನು ರಾಜಕೀಯದಿಂದಲೇ ನಿವೃತ್ತನಾಗುತ್ತೇನೆ. ಆದರೆ, ಡೈರಿಯಲ್ಲಿದ್ದದ್ದು ನಿಜವೇ ಆಗಿದ್ದರೆ ಸಿದ್ದರಾಮಯ್ಯ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತಾರಾ? ಯಾರ್ಯಾರಿಗೆ ಹಣ ಹೋಗಿದೆಯೋ ಆ ಎಲ್ಲ ನಾಯಕರ ಹೆಸರುಗಳು ಆ ಡೈರಿಯಲ್ಲಿವೆ. ಆ ಹೆಸರುಗಳನ್ನು ಸಿದ್ದರಾಮಯ್ಯ ಅಲ್ಲಗಳೆಯಲಿ ಎಂದು ಸವಾಲು ಹಾಕುತ್ತೇನೆ. ನಾನು ಮತ್ತೆ ಒತ್ತಿ ಹೇಳಬಯಸುತ್ತೇನೆ. ಸಿದ್ದರಾಮಯ್ಯನವರ ಅತ್ಯಾಪ್ತ ಗೋವಿಂದರಾಜ್ ಅವರಿಂದ ವಶಪಡಿಸಿಕೊಳ್ಳಲಾದ ಡೈರಿ ಸತ್ಯ ಸತ್ಯ ಸತ್ಯ.
ಸುರೇಶ್ ಕುಮಾರ್, ರಾಜಾಜಿನಗರ ಶಾಸಕ
ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಮುಖ್ಯಮಂತ್ರಿಗಳ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಕಾರ್ಯ ಮಾಡುವ ಬದಲು 'ವ್ಯವಹಾರಗಳ ಕಾರ್ಯದರ್ಶಿ' ಕೆಲಸ ಮಾಡಿದ್ದಕ್ಕೇ ಬಂತು ಗ್ರಹಚಾರ. ಹಿಟ್ ಅಂಡ್ ರನ್ ನಂಥ ಇಂದಿನ ರಾಜಕಾರಣದಲ್ಲಿ ಡೈರಿಗೇಟ್ ಒಂದು ಅಪವಾದ. [ಡೈರಿಯಲ್ಲಿ ಕಂಡ ಡೊನೆಷನ್ ಆರ್ ಜಿ ಟೂರಿಗೆ ವಿನಿಯೋಗ: ಸಿಟಿಆರ್]
ಅರವಿಂದ ಲಿಂಬಾವಳಿ, ಮಹದೇವಪುರ ಶಾಸಕ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡೈರಿಗೇಟ್ ಹೊಣೆ ಹೊತ್ತು ರಾಜೀನಾಮೆ ನೀಡಿ, ವಿಚಾರಣೆಯನ್ನು ಎದುರಿಸುತ್ತಾರೋ ಅಥವಾ ತಮ್ಮ ಭ್ರಷ್ಟ ಆಡಳಿತವನ್ನು ಮುಂದುವರಿಸುತ್ತಾರೋ?
ಸಿಟಿ ರವಿ, ಚಿಕ್ಕಮಗಳೂರು ಶಾಸಕ
ಡೈರಿಗೇಟ್ ಹಗರಣ ಸಾರ್ವಜನಿಕವಾಗಿರುವುದರಿಂದ ರಾಹುಲ್ ಗಾಂಧಿ ಬಂಡವಾಳ ಬಯಲಾಗಿದೆ. 'ಪಪ್ಪು' ಅವರ ವಿದೇಶ ಪ್ರಯಾಣವನ್ನು ಮುಖ್ಯಮಂತ್ರಿಗಳೇ ಆಯೋಜಿಸಿದ್ದರು ಎಂಬುದೂ ಸಾಬೀತಾಗಿದೆ. ನಾನು ಭ್ರಷ್ಟ ಮುಖ್ಯಮಂತ್ರಿಯ ರಾಜೀನಾಮೆ ನೀಡುತ್ತೇನೆ. ಅವರ ಮಂತ್ರಿಗಳೂ ಕಾಂಗ್ರೆಸ್ ಹೈಕಮಾಂಡಿಗೆ ಕಪ್ಪ ನೀಡಿದೆ. ಕಾಂಗ್ರೆಸ್ ಹೈಕಮಾಂಡಿಗೆ 1000 ಕೋಟಿ ಹಣ ರವಾನೆಯಾಗಿದೆ ಎಂದು ಯಡಿಯೂರಪ್ಪನವರು ಹೇಳಿದ್ದು ರುಜುವಾತಾಗಿದೆ. ಭ್ರಷ್ಟ ಕಾಂಗ್ರೆಸ್ಸಿಗರಿಗೆ ಇನ್ನೂ ಸಾಕ್ಷಿ ಬೇಕೆ? ಗಣಪತಿ ಅವರ ಆತ್ಮಹತ್ಯೆ ಕೇಸಿನಿಂದ ಜಾರ್ಜ್ ಅವರಿಗೆ ಸಿದ್ದರಾಮಯ್ಯನವರು ತ್ವರಿತಗತಿಯಲ್ಲಿ ಕ್ಲೀನ್ ಚಿಟ್ ನೀಡಿದ್ದರಲ್ಲಿ ಅಚ್ಚರಿಯೇನಿಲ್ಲ.
ಕೆಎಸ್ ಈಶ್ವರಪ್ಪ, ವಿಧಾನಪರಿಷತ್ ಸದಸ್ಯ
ಈ ಹಗರಣದ ಉನ್ನತಮಟ್ಟದ ತನಿಖೆಯಾದರೆ ಮಾತ್ರ ಸತ್ಯಾಂಶ ಹೊರಬೀಳುತ್ತದೆ. ಸಿದ್ದರಾಮಯ್ಯನವರು ಮೊದಲಿಗೆ ತನಿಖೆಗೆ ಆದೇಶಿಸಬೇಕು ಮತ್ತು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಯಡಿಯೂರಪ್ಪನವರು ಈ ಮಾತು ಹೇಳಿದಾಗ ಬಾಯಿಗೆ ಬಂದಂತೆ ಮಾತನಾಡಿದರೆ, ದಿನೇಶ್ ಗುಂಡೂರಾವ್ ಅವರು ಅಸಂಬದ್ಧ ಪದಗಳನ್ನು ಬಳಸಿದರು. ಈಗ ಅವರು ಏನು ಹೇಳುತ್ತಾರೆ?
ಎಚ್ ಡಿ ದೇವೇಗೌಡ, ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಈ ಡೈರಿಯನ್ನು ಕೈಯಲ್ಲಿ ಹಿಡಿದುಕೊಂಡು ಜನರ ಮುಂದೆ ಹೋಗಲಿದ್ದಾರೆ. ಇದಕ್ಕೆ ಜನರೇ ಉತ್ತರ ಕೊಡಲಿದ್ದಾರೆ. ಅವರದು ರಾಷ್ಟ್ರೀಯ ಪಕ್ಷ, ನಮ್ಮದು ಪ್ರಾದೇಶಿಕ ಪಕ್ಷ. ನಾವು ಯಾವ ಹೈಕಮಾಂಡಿಗೂ ಕಪ್ಪಕಾಣಿಕೆ ಕೊಡುವ ಅಗತ್ಯವಿಲ್ಲ.
ನವರಸ ನಾಯಕ ಜಗ್ಗೇಶ್
ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಗೆ ಹೋಗುವಮುನ್ನ ಸತ್ಯಹೊರಬರಲಿ ಅಂತ ರಾಯರಸ್ತೋತ್ರ ಓದಿಹೋದೆ ಸಂಜೆಗೆ ರಾಯರು ಕಣ್ಣುಬಿಟ್ಟರು:) ಧನ್ಯ!ಸರ್ವಂ ರಾಘವೇಂದ್ರಮಯಂ:) ಉಪ್ಪು ತಿಂದವ ನೀರುಕುಡಿಯಲೇಬೇಕು!
ಡಾ. ಜಿ ಪರಮೇಶ್ವರ, ಗೃಹ ಸಚಿವ
ವಿಧಾನ ಪರಿಷತ್ ಸದಸ್ಯ ಕೆ ಗೋವಿಂದರಾಜ್ ಅವರಿಗೆ ಡೈರಿ ಸೇರಿದ್ದು ಎಂಬುದು ಇನ್ನೂ ಸಾಬೀತಾಗಿಲ್ಲ. ಅವರು ತಮ್ಮದಲ್ಲ ಎಂದು ಹೇಳುತ್ತಿದ್ದಾರೆ. ಹಾಗಾಗಿ, ಏನೂ ಸಾಬೀತಾಗದೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ['ಡೈರಿ ನನ್ನದಲ್ಲ, ಮನೆಗೆ ಬಂದವರು ಬಿಟ್ಟು ಹೋಗಿರಬಹುದು' ಗೋವಿಂದರಾಜ್]
ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ
ಸ್ಟೀಲ್ ಬ್ರಿಜ್ ಯೋಜನೆಯೇ ಭ್ರಷ್ಟಾಚಾರದಿಂದ ಕೂಡಿದೆ ಎಂದು ಮೊದಲೇ ಹೇಳಿದ್ದೆ. ಈಗ ಆ ಮಾತು ನಿಜವಾಗಿದೆ. ನಮ್ಮ ಮುಂದೆ ಜಯಚಂದ್ರ, ಚಿಕ್ಕರಾಯಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಜಾರಕಿಹೊಳಿ ಮುಂತಾದವರು ನಡೆಸಿರುವ ಭ್ರಷ್ಟಾಚಾರವನ್ನು ಐಟಿ ಇಲಾಖೆ ಬಯಲಿಗೆಳೆದಿದೆ. ಇದರ ಜೊತೆ ಇದೂ ಸೇರಿದೆ.