ದೊಡ್ಡಬಳ್ಳಾಪುರ: ಮ್ಯಾನ್ಹೋಲ್ ದುರಂತಕ್ಕೆ ನಾಲ್ವರು ಬಲಿ
ದೊಡ್ಡಬಳ್ಳಾಪುರ, ಏಪ್ರಿಲ್, 04: ಬೆಂಗಳೂರು ಹೊರವಲಯದಲ್ಲಿ ಮ್ಯಾನ್ ಹೋಲ್ ದುರಂತ ಸಂಭವಿಸಿದ್ದು ಇಬ್ಬರು ಕಾರ್ಮಿಕರು ಸೇರಿದಂತೆ ನಾಲ್ವರು ದಾರುಣ ಸಾವಿಗೀಡಾಗಿದ್ದಾರೆ.
ಮುಖ್ಯ ರಸ್ತೆಯ ದರ್ಗಾಪುರದಲ್ಲಿ ಒಳಚರಂಡಿ ಸ್ವಚ್ಛಗೊಳಿಸಲು ಇಳಿದಿದ್ದ ಇಬ್ಬರು ಕಾರ್ಮಿಕರು ಹಾಗೂ ಅವರನ್ನು ರಕ್ಷಿಸಲು ಹೋದ ಇಬ್ಬರು ದಾರಿಹೋಕರು ಮ್ಯಾನ್ಹೋಲ್ನಲ್ಲಿ ಉಸಿರುಕಟ್ಟಿ ಭಾನುವಾರ ಸಾವನ್ನಪ್ಪಿದ್ದಾರೆ.[ಅಸಂಘಟಿತ ಕಾರ್ಮಿಕರಿಗೂ ವೈದ್ಯಕೀಯ ವಿಮೆ]
ಮೃತಪಟ್ಟ ಕಾರ್ಮಿಕರನ್ನು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಶ್ರವಣೂರು ಗ್ರಾಮದ ಗೌಂಡರ್ (45) ಹಾಗೂ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಪಲಮನೇರು ತಾಲ್ಲೂಕಿನ ಮೂಲತಿಮ್ಮನಹಳ್ಳಿ ಗ್ರಾಮದ ಜಗನ್ನಾಥ್(24) ಎಂದು ಗುರುತಿಸಲಾಗಿದೆ. ಕಾರ್ಮಿಕರನ್ನು ರಕ್ಷಿಸಲು ಹೋದ ದೊಡ್ಡಬಳ್ಳಾಪುರ ನಗರದ ವನ್ನಿಗರಪೇಟೆ ನಿವಾಸಿ ಮಧು(21) ಮತ್ತು ಹಮಾಮ್ ಗ್ರಾಮದ ಮುನಿರಾಜು (22) ಸಹ ಮೃತಪಟ್ಟಿದ್ದಾರೆ.
ಹೊಸದಾಗಿ ನಿರ್ಮಾಣವಾಗಿರುವ ಒಳಚರಂಡಿ ಮುಖ್ಯಲೈನ್ಗೆ ಮನೆಗಳ ಸಂಪರ್ಕ ನೀಡಲಾಗುತ್ತಿದ್ದು, ಇದಕ್ಕಾಗಿ ಮ್ಯಾನ್ ಹೋಲ್ಗಳನ್ನು ಸ್ವಚ್ಛಗೊಳಿಸುವ ಮತ್ತು ನೀರು ಹರಿಯುವ ಮಾರ್ಗ ತೆರವು ಮಾಡುವ ಕೆಲಸ ನಡೆಯುತ್ತಿತ್ತು. ಹೈದರಾಬಾದ್ ಮೂಲದ ರಾವೂಸ್ ಕಂಪನಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿತ್ತು. ಮ್ಯಾನ್ಹೋಲ್ ಸ್ವಚ್ಛ ಮಾಡಲು ಜಗನ್ನಾಥ್ ಮತ್ತು ಗೌಂಡರ್ ಮಧ್ಯಾಹ್ನ 1.30ರ ವೇಳೆಯಲ್ಲಿ ಇಳಿದಿದ್ದರು.[ಕಾರ್ಮಿಕರ ಭದ್ರತೆಯ ವಿಮಾ ಯೋಜನೆ ಬಗ್ಗೆ ತಿಳಿದುಕೊಳ್ಳಿ]
8 ಅಡಿಗೂ ಹೆಚ್ಚು ಆಳ ಇದ್ದ ಮ್ಯಾನ್ ಹೋಲ್ ಗೆ ಯಾವ ಪೂರ್ವ ಸಿದ್ಧತೆ ಇಲ್ಲದೆ ಇಳಿಯಲಾಗಿತ್ತು. ಈ ವೇಳೆ ಇಬ್ಬರಿಗೂ ಉಸಿರು ಕಟ್ಟಿದೆ. ರಕ್ಷಣೆಗೆಂದು ಕೂಗಿಕೊಂಡಿದ್ದಾರೆ. ಅದೇ ಮಾರ್ಗದಲ್ಲಿ ಬರುತ್ತಿದ್ದ ಮಧು ಕಾರ್ಮಿಕರನ್ನು ರಕ್ಷಿಸಲು ಮ್ಯಾನ್ಹೋಲ್ಗೆ ಇಳಿದಿದ್ದಾರೆ. ಮಧು ಸಹ ಮೇಲೆ ಬರದ್ದನ್ನು ಕಂಡು ಮುನಿರಾಜು ರಕ್ಷಣೆಗೆ ತೆರಳಿದ್ದು ಅವರು ಸಾವನ್ನಪ್ಪಿದ್ದಾರೆ.