ಪಿಐಎಲ್ ದುರ್ಬಳಕೆ : ಹೈಕೋರ್ಟ್ ಕೆಂಡಾಮಂಡಲ
ಬೆಂಗಳೂರು, ಏ 22: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಎಂಬ ವ್ಯವಸ್ಥೆ ದುರ್ಬಳಕೆಯಾಗುತ್ತಿದೆ. ಇದರಲ್ಲಿ ವಕೀಲರೂ ಪಾಲ್ಗೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅಂಥವರನ್ನು ಬಾರ್ ಕೌನ್ಸಿಲ್ನಿಂದ ಹೊರಹಾಕಲು ನಿರ್ದೇಶನ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ನ ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಡಿ ಎಚ್ ವಘೇಲಾ ಎಚ್ಚರಿಕೆ ನೀಡಿದ್ದಾರೆ.
ಶ್ರೀರಾಮಚಂದ್ರಾಪುರಮಠದ ವಿರುದ್ಧ ಹಾಕಲಾದ ಪಿಐಎಲ್ ಕೇಸನ್ನು ಉಲ್ಲೇಖಿಸಿ ಹೇಳಿಕೆ ನೀಡಿದ ವಘೇಲಾ, ಪಿಐಎಲ್ ದುರ್ಬಳಕೆ ಆಗುತ್ತಿರುವುದನ್ನು ಸಹಿಸಲಾಗದು. ಪಿಐಎಲ್ ಉದ್ದೇಶಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಶ್ರೀರಾಮಚಂದ್ರಾಪುರಮಠದ ವಿರುದ್ಧ ಅಸ್ತ್ರ ಎನ್ನುವ NGO ಮತ್ತು ಗೋಕರ್ಣ ರಕ್ಷಣಾ ಸಮಿತಿ ಎಂಬ ಸಂಘಟನೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟಿನಲ್ಲಿ ದಾಖಲಿಸಿದ್ದವು. ಶ್ರೀಗಳು, ಶ್ರೀಮಠ ಮತ್ತು ಧರ್ಮಚಕ್ರ ಟ್ರಸ್ಟಿನ ಮೇಲೆ ಸಿಬಿಐ ತನಿಖೆ ನಡೆಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.
ತದನಂತರ ಅಸ್ತ್ರದ ಮುಖ್ಯಸ್ಥ ಚಂದನ್ ಮತ್ತು ವಕೀಲ ಮಲ್ಲಿಕಾರ್ಜುನ ಪಾಟೀಲ ಎನ್ನುವ ಇಬ್ಬರು ಶ್ರೀಗಳು ಮತ್ತು ಶ್ರೀಮಠವನ್ನು ಬೆದರಿಸಿ ಹತ್ತು ಕೋಟಿ ರೂಪಾಯಿಯ ಬೇಡಿಕೆಯಿಟ್ಟಿದ್ದರು. ಹಣ ಕೊಟ್ಟರೆ ಪಿಐಎಲ್ ಸಹಿತ ಗೋಕರ್ಣ ದೇವಾಲಯಕ್ಕೆ ಸಂಬಂಧಿಸಿದ ಎಲ್ಲಾ ಕೇಸುಗಳನ್ನು ಹಿಂಪಡೆಯುವುದಾಗಿಯೂ, ಹಣ ಕೊಡದೇ ಇದ್ದರೆ ಮತ್ತಷ್ಟು ಕೇಸುಗಳನ್ನು ಹೂಡುವುದಾಗಿಯೂ ಬೆದರಿಸಿದ್ದರು.
ಆ ನಂತರ ನಡೆದ ಬೆಳವಣಿಗೆಯಲ್ಲಿ ಪೊಲೀಸ್ ಕಾರ್ಯಾಚರಣೆ ನಡೆದು ಬ್ಲಾಕ್ ಮೇಲ್ ಮಾಡಿ ಹಣದ ಬೇಡಿಕೆಯಿಟ್ಟಿದ್ದ ಚಂದನ್ ಮತ್ತು ಪಾಟೀಲ್ ಹತ್ತು ಲಕ್ಷ ರೂಪಾಯಿ ಮುಂಗಡ ಹಣ ಪಡೆಯುವಾಗ ಬಂಧಿಸಲ್ಪಟ್ಟಿದ್ದರು. ಈ ಪ್ರಕರಣದಲ್ಲಿ ಚಂದನ್ ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದರೆ, ಮಲ್ಲಿಕಾರ್ಜುನ ಪಾಟೀಲ್ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು.
ಪಾಟೀಲ್ ಅವರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಶ್ರೀಮಠದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ ಜಿ ಭಟ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸೋಮವಾರ (ಏ 21) ಪಿಐಎಲ್ ವಿಚಾರಣೆ ನಡೆಯಿತು. ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಕೆ ಎನ್ ಪ್ರವೀಣ್ ಕುಮಾರ್ ಪ್ರಕರಣದಿಂದ ನಿವೃತ್ತಿ ಹೊಂದಲು ಬಯಸಿ ವಿಭಾಗೀಯ ಪೀಠದಲ್ಲಿ ಮನವಿ ಸಲ್ಲಿಸಿದ್ದರು. (ರಾಘವೇಶ್ವರ ಶ್ರೀಗಳಿಗೆ ಬ್ಲ್ಯಾಕ್ ಮೇಲ್: ಸರಕಾರಕ್ಕೆ ನೋಟೀಸ್)
ಗೋಕರ್ಣ ರಕ್ಷಣಾ ಸಮಿತಿ ಅಧ್ಯಕ್ಷ ಗಣಪತಿ ಗಜಾನನ ಹಿರೇ ಪಿಐಎಲ್ ನನ್ನು ಹಿಂಪಡೆಯಲು ವಿಭಾಗೀಯ ಪೀಠದಲ್ಲಿ ಅವಕಾಶ ಕೋರಿದ್ದರು. ಈ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ ಎಚ್ ವಘೇಲಾ ಮತ್ತು ಬಿ ವಿ ನಾಗರತ್ನ ಇವರನ್ನೊಳಗೊಂಡ ವಿಭಾಗೀಯ ಪೀಠ ಎರಡೂ ಅರ್ಜಿದಾರರ ಮನವಿಗಳನ್ನು ತಿರಸ್ಕರಿಸಿ, ಪಿಐಎಲ್ ಬಗ್ಗೆ ಮೇಲಿನಂತೆ ಆಕ್ರೋಶ ವ್ಯಕ್ತ ಪಡಿಸಿದರು.
ಶ್ರೀಮಠದ ಪರ ನ್ಯಾಯವಾದಿಗಳಾದ ಅಶೋಕ್ ಹಾರ್ನಳ್ಳಿ ಅವರನ್ನು ಉದ್ದೇಶಿಸಿ ಮುಖ್ಯ ನ್ಯಾಯಾಧೀಶರು, ಶ್ರೀಮಠ ಈ ಪ್ರಕರಣದಲ್ಲಿ ಗಂಭೀರವಾಗಿ ಇದ್ದರೆ ಮಾತ್ರ ನಾವೂ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಈ ಪ್ರಕರಣದ ಪೂರ್ವಾಪರಗಳ ಸಂಪೂರ್ಣ ಮಾಹಿತಿಯನ್ನು ತಕ್ಷಣ ತಮ್ಮ ಮುಂದೆ ಅಫಿಡವಿಟ್ ಮೂಲಕ ಸಲ್ಲಿಸಬೇಕು ಎಂದು ಆದೇಶ ನೀಡಿ, ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 28ಕ್ಕೆ ಮುಂದೂಡಿದರು.