ರವಿ ಕೇಸ್ : ಸಿಬಿಐಗೆ ಷರತ್ತು ರಹಿತ ಸೂಚನೆ ಕೊಟ್ಟ ಸಿದ್ದು
ಬೆಂಗಳೂರು, ಏ.6: ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೋಮವಾರ ಹೊಸ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಈಗ ಸಿಬಿಐ ಯಾವುದೇ ಷರತ್ತುಗಳಿಲ್ಲದೆ ಮುಕ್ತವಾಗಿ ತನಿಖೆ ನಡೆಸಬಹುದಾಗಿದೆ.
ಡಿಕೆ ರವಿ ಸಾವಿನ ಪ್ರಕರನವನ್ನು ಸಿಬಿಐಗೆ ವಹಿಸಲು ಹಿಂದು ಮುಂದು ನೋಡುತ್ತಿದ್ದ ಕಾಂಗ್ರೆಸ್ ಸರ್ಕಾರ ಈಗ ತ್ವರಿತ ಗತಿಯನ್ನು ಅಚ್ಚರಿಯ ನಡೆ ಇಡುತ್ತಿದೆ.
ಮಾ.23ರಂದು ಕರ್ನಾಟಕ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಲ್ಲಿದ್ದ ಷರತ್ತುಗಳಿಗೆ ಸಿಬಿಐ ಒಪ್ಪಿರಲಿಲ್ಲ. ಮುಖ್ಯವಾಗಿ ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳ್ಳಬೇಕು ಎಂಬ ಷರತ್ತಿಗೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿ ಅಧಿಸೂಚನೆ ಹಿಂತಿರುಗಿಸಿತ್ತು. [ಡಿಕೆ ರವಿ ಕೇಸ್: ಸಿಬಿಐ ಪ್ರಕರಣ ಕೈ ಬಿಡುವ ಸಾಧ್ಯತೆ?]
ಯಾವುದೇ ಷರತ್ತುಗಳಿಲ್ಲ: ಆದರೆ, ಈ ಬಗ್ಗೆ ತಕ್ಷಣವೇ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗೃಹ ಸಚಿವಾಲಯದಿಂದ ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಇದರಲ್ಲಿ ಯಾವುದೇ ಷರತ್ತುಗಳನ್ನು ಕರ್ನಾಟಕ ಸರ್ಕಾರ ವಿಧಿಸಿಲ್ಲ, ಮುಕ್ತ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದೇ ನಾವು ಸಿಬಿಐಗೆ ಈ ಪ್ರಕರಣವನ್ನು ವಹಿಸಿದ್ದು ಎಂದರು.
ಹೊಸ ಅಧಿಸೂಚನೆಯಲ್ಲಿ ಯಾವುದೇ ಕಾಲಮಿತಿಯನ್ನು ನೀಡಲಾಗಿಲ್ಲ. ಹೀಗಾಗಿ ಸಿಬಿಐ ತಂಡ ಮುಕ್ತವಾಗಿ ಬೇಕಾದಷ್ಟು ಸಮಯವನ್ನು ತೆಗೆದುಕೊಂಡು ತನಿಖೆ ಮುಂದುವರೆಸಬಹುದಾಗಿದೆ. ಈ ಪ್ರತಿ ಕೇಂದ್ರ ಗೃಹ ಸಚಿವಾಲಯದ ಕೈ ಸೇರಲಿದೆ. ನಂತರ ಸಚಿವಾಲಯದ ಸೂಚನೆ ಸಿಕ್ಕದ ಕೂಡಲೇ ಸಿಬಿಐ ತನ್ನ ತನಿಖೆ ಮುಂದುವರೆಸಲಿದೆ. [ರವಿ ಕೇಸ್: ಸಾವು, ಸಿಐಡಿ, ಸಿಬಿಐ ತನಕ ಟೈಮ್ ಲೈನ್]
ಕರ್ನಾಟಕ ಸರ್ಕಾರ ಕಳಿಸಿರುವ ಹೊಸ ಅಧಿಸೂಚನೆ ಪ್ರತಿ ಇಲ್ಲಿದೆ:
ಸಿದ್ದರಾಮಯ್ಯ ಸರ್ಕಾರ ಮಾ.23ರಂದು ಅಧಿಸೂಚನೆ ಹೊರಡಿಸಿದರೂ ಅಧಿಕೃತ ಪತ್ರ ಸಿಬಿಐ ಕಚೇರಿ ತಲುಪಲು ವಿಳಂಬವಾಗಿತ್ತು. ಅಲ್ಲದೆ, ಸಿಬಿಐ ತಂಡಕ್ಕೆ ಕರ್ನಾಟಕ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಪಾಲಿಸಿಕೊಂಡು ಮುಕ್ತವಾಗಿ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸಿಬಿಐ ತಂಡ ಸೋಮವಾರ ಹೇಳಿತ್ತು.
ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸುವ ತಂಡದ ವಿವರ ಈಗ ಪ್ರಕಟವಾಗಿದೆ. ಚೆನ್ನೈ ಸಿಬಿಐ ಘಟಕದ ಡಿಐಜಿ ಸೆಲ್ವರಾಜ್ ಸೆಂಗತ್ತೀರ್ ಹಾಗೂ ವಿಶೇಷ ಬ್ರ್ಯಾಂಚಿನ ಎಸ್ಪಿ ಶರವಣನ್ ಅವರ ನೇತೃತ್ವದ ವಿಶೇಷ ತಂಡ ತನಿಖೆ ನಡೆಸುತ್ತಿದೆ.