ಬಿಬಿಎಂಪಿ ವಿಭಜನೆ : ಸದನದಲ್ಲಿ ಹೇಳಿದ್ದು, ಕೇಳಿದ್ದು?
ಬೆಂಗಳೂರು, ಏ. 20 : ಹಠ ಬಿಡದ ಸರ್ಕಾರ. ಪಟ್ಟು ಬಿಡದ ಪ್ರತಿಪಕ್ಷಗಳು. ಆಡಳಿತ ಮತ್ತು ವಿರೋಧ ಪಕ್ಷದವರ ನಡುವೆ ಮಾತಿನ ಚಕಮಕಿ. ರಮಾನಾಥ ರೈ ಸಮಾಧಾನ ಪಡಿಸಿದ ಖಾದರ್. ಅಧಿಕಾರಿ ದೇವಲೋಕದಿಂದ ಬಂದರೋ? ಎಂಬ ಕುತೂಹಲ. ಸ್ವ ಪಕ್ಷೀಯರ ವಿರುದ್ಧ ಶಾಸಕರು ಗರಂ ಇದು ಇಂದಿನ ವಿಧಾನಮಂಡಲ ಕಲಾಪದ ಮುಖ್ಯಾಂಶಗಳು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ವಿಭಜಿಸಬೇಕು ಎಂದು ಹಠ ಹಿಡಿದಿದ್ದ ಕಾಂಗ್ರೆಸ್ ಸರ್ಕಾರ ಸೋಮವಾರ ವಿಶೇಷ ವಿಧಾನಸಭೆ ಅಧಿವೇಶನ ಕರೆದಿತ್ತು. ಆದರೆ, ಪ್ರತಿಪಕ್ಷಗಳು ಬಿಬಿಎಂಪಿಯನ್ನು ವಿಭಜನೆ ಮಾಡಬಾರದು ಎಂದು ಪಟ್ಟು ಹಿಡಿದಿದ್ದವು. ಈ ಕುರಿತು ಬಿಸಿ-ಬಿಸಿ ಚರ್ಚೆಗೆ ಸದನ ಸಾಕ್ಷಿಯಾಯಿತು. [ಸೋಮವಾರದ ಕಲಾಪದ ಮುಖ್ಯಾಂಶಗಳು]
ಸೋಮವಾರ ಬೆಳಗ್ಗೆ 11 ಗಂಟೆಗೆ ವಿಧಾನ ಸಭೆ ಕಲಾಪ ಆರಂಭವಾಯಿತು. ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು ಪ್ರತಿಪಕ್ಷಗಳ ವಿರೋಧದ ನಡುವೆಯೇ 'ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ-2015'ವನ್ನು ಸದನಲ್ಲಿ ಮಂಡಿಸಿದರು. [ಬಿಬಿಎಂಪಿ ವಿಭಜನೆ ಸುಗ್ರೀವಾಜ್ಞೆಯಲ್ಲೇನಿದೆ?]
ಸದನದಲ್ಲಿ 'ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ-2015'ದ ಕುರಿತು ಚರ್ಚೆ ನಡೆಯುವಾಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸದನದಲ್ಲಿ ನಡೆದ ಚರ್ಚೆಗಳ ಪ್ರಮುಖ ಅಂಶಗಳು ಇಲ್ಲಿವೆ.
ಬಿಜೆಪಿಗೆ ನೈತಿಕತೆ ಇದ್ದರೆ ವಿರೋಧಿಸಬಾರದು
ಪಾಲಿಕೆ ವಿಭಜನೆಯನ್ನು ವಿರೋಧಿಸುತ್ತಿರುವ ಬಿಜೆಪಿ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದರು. 'ಬಿಜೆಪಿ ಅಧಿಕಾರದಲ್ಲಿದ್ದಾಗ ಪಾಲಿಕೆ ವಿಭಜನೆ ಪರವಾಗಿದ್ರು. ಈಗ ರಾಜಕೀಯ ಕಾರಣಕ್ಕಾಗಿ ವಿಧೇಯಕ ವಿರೋಧ ಮಾಡುತ್ತಿದ್ದಾರೆ. ನೈತಿಕತೆ ಇದ್ದರೆ ಪಕ್ಷ ವಿಭಜನೆಯನ್ನು ಒಪ್ಪಿಕೊಳ್ಳಬೇಕು' ಎಂದು ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ಕೊಟ್ಟರು.
ಸರ್ಕಾರದ ವಿರುದ್ಧ ಅಸಮಾಧಾನ
'ಸರ್ಕಾರ ಉತ್ತರ ಕರ್ನಾಟಕವನ್ನು ಅಭಿವೃದ್ಧಿ ವಿಷಯದಲ್ಲಿ ಕಡೆಗಣಿಸುತ್ತಿದೆ. ಗೋವಾ ಕನ್ನಡಿಗರ ಸಮಸ್ಯೆ ಪರಿಹರಿಸಲು ಸಚಿವರೂ ಮುಂದೆ ಬಂದಿಲ್ಲ. ಕರ್ನಾಟಕಕ್ಕಿಂತ ಬೆಂಗಳೂರು ದೊಡ್ಡದೇ?. ಬಿಬಿಎಂಪಿ ವಿಭಜನೆಗೆ ವಿಶೇಷ ಅಧಿವೇಶನ ಕರೆಯಬೇಕಿತ್ತೇ? ಎಂದು ದೇವರಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎ.ಎಸ್.ಪಾಟೀಲ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ತುರ್ತು ಅಗತ್ಯಕ್ಕಾಗಿಯೇ ವಿಧೇಯಕ ಮಂಡಿಸಿದ್ದೇವೆ
ವಿಧೇಯಕದ ಕುರಿತು ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ 'ತೂಕಕ್ಕೆ ಹಾಕಲು ಈ ವಿಧೇಯಕ ಯೋಗ್ಯವಲ್ಲ. ಸರ್ಕಾರಕ್ಕೆ ದೂರದೃಷ್ಟಿ ಇದೆಯಾ?' ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿಗಳು ತುರ್ತು ಅಗತ್ಯ ಇರುವುದರಿಂದಲೇ ವಿಧೇಯಕ ಮಂಡಿಸಿದ್ದೇವೆ. ಬಿಬಿಎಂಪಿ ವಿಭಜನೆಯಾಗಬೇಕು ಎಂದು ಬಿಜೆಪಿಯವರು ಹೇಳಿದ್ದರು ಎಂದು ತಿರುಗೇಟು ಕೊಟ್ಟರು.
ರೈ ಸಮಾಧಾನ ಪಡಿಸಿದ ಸಚಿವ ಖಾದರ್
ವಿಧೇಯಕದ ಮೇಲಿನ ಚರ್ಚೆ ವೇಳೆ ಅರಣ್ಯ ಸಚಿವ ರಮಾನಾಥ ರೈ ತಾಳ್ಮೆ ಕಳೆದುಕೊಂಡ ಪ್ರಸಂಗ ನಡೆಯಿತು. ವಿಧೇಯಕದ ಕುರಿತು ಅಶೋಕ್ ಮಾತನಾಡುತ್ತಿದ್ದರು. ಈ ವೇಳೆ ರಮಾನಾಥ ರೈ ಆಗಾಗ ಮಧ್ಯ ಪ್ರವೇಶ ಮಾಡುತ್ತಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮಲ್ಲೇಶ್ವರಂ ಶಾಸಕ ಅಶ್ವತ್ಥನಾರಾಯಣ ಮಂಗಳೂರಿನವರಿಗೇನು ಗೊತ್ತು? ಎಂದು ಕೇಳಿದರು. ಇದರಿಂದ ತಾಳ್ಮೆ ಕಳೆದುಕೊಂಡ ಸಚಿವರನ್ನು ಯು.ಟಿ.ಖಾದರ್ ಸಮಾಧಾನ ಪಡಿಸಿದರು.
ಅಧಿಕಾರಿಗಳು ದೇವಲೋಕದಿಂದ ಬಂದರೆ
ಬಿಬಿಎಂಪಿ ಅವ್ಯವಹಾರದ ಬಗ್ಗೆ ವರದಿ ನೀಡಿದ ಐಎಎಸ್ ಅಧಿಕಾರಿ ರಾಜೇಂದ್ರ ಕಠಾರಿಯಾ ದೇವಲೋಕದಿಂದ ಬಂದ್ರೋ, ಇಂದ್ರ ಲೋಕದಿಂದ ಬಂದ್ರೋ ಗೊತ್ತಿಲ್ಲ ಎಂದು ಮಾಜಿ ಡಿಸಿಎಂ ಅಶೋಕ್ ಲೇವಡಿ ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಬೆಂಗಳೂರಿನ ಮೂರು ವಿಧಾನಸಭಾ ಕ್ಷೇತ್ರಗಳ 22 ವಾರ್ಡ್ಗಳ ತನಿಖೆ ಮಾಡಲು ರಾಜ್ಯದ 150 ಸಿಐಡಿ ಅಧಿಕಾರಿಗಳು 2 ವರ್ಷ ತಗೆದುಕೊಂಡರು. ಆದರೆ, ರಾಜೇಂದ್ರ ಕಠಾರಿಯಾ ಮಾತ್ರ 198 ವಾರ್ಡ್ಗಳ ವರದಿಯನ್ನು ಕೇವಲ 15 ದಿನದಲ್ಲಿ ನೀಡಿದರು. ಇದು ಹೇಗೆ ಸಾಧ್ಯ? ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಕುಮಾರಸ್ವಾಮಿಗೆ ಡಿಕೆಶಿ ಸವಾಲು
'ನಿಮ್ಮ ಕೈಯಲ್ಲಿ ಏನೂ ಮಾಡಲಿಕ್ಕೆ ಆಗಲ್ಲ. ಏನು ದಾಖಲೆ ತರುತ್ತೀರೋ ತೆಗೆದುಕೊಂಡು ಬನ್ನಿ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು. ಬೆಂಗಳೂರು ಅಭಿವೃದ್ಧಿಗೆ ಜೆಡಿಎಸ್ನಿಂದ ಹಲವು ಕ್ರಮ ಜಾರಿ ಮಾಡಿದ್ದೇವೆ. ನಮ್ಮ ಅವಧಿಯಲ್ಲೇ ಬೆಂಗಳೂರು ಅಭಿವೃದ್ಧಿಯಾಗಿತ್ತು ಎಂದು ಕುಮಾರಸ್ವಾಮಿ ಹೇಳಿದರು. ಡಿಕೆ ಶಿವಕುಮಾರ್, ಕಾಂಗ್ರೆಸ್ ಆಡಳಿತಾವಧಿಯಲ್ಲೇ ಬೆಂಗಳೂರು ಅಭಿವೃದ್ದಿ ಆಗಿತ್ತು ಎಂದರು. ಚರ್ಚೆ ನಡುವೆಯೇ ಸಾರಕ್ಕಿ ಕೆರೆ ಒತ್ತುವರಿ ಹಿಂದೆ ಯಾವ ಅಧಿಕಾರಿ ಇದ್ದಾರೆ ಎಂದು ಗೊತ್ತು ಎಂದು ಕುಮಾರಸ್ವಾಮಿ ಹೇಳಿದಾಗ. ತಾಕತ್ತಿದ್ದರೆ ಅವರ ಹೆಸರನ್ನು ಬಹಿರಂಗಪಡಿಸಿ, ದಾಖಲೆ ತನ್ನಿ' ಎಂದು ಸಚಿವ ಡಿಕೆಶಿ ಸವಾಲು ಹಾಕಿದರು.