ಬಾಗಲಕೋಟೆಯಲ್ಲಿ ಪ್ರತಿಸ್ಪಂದನಾ ಸಹಾಯವಾಣಿ, ತಪ್ಪದೇ ಕರೆಮಾಡಿ
ಬಾಗಲಕೋಟೆ,ಮಾರ್ಚ್,16: ಜಿಲ್ಲೆಯ ರೈತರು, ಜನಸಾಮಾನ್ಯರು ಸರಕಾರಿ ಸೇವೆ ಹಾಗೂ ಮಾಹಿತಿ, ಸಮಸ್ಯೆಗಳಿಗಾಗಿ ಜಿಲ್ಲಾಡಳಿತ ಭವನದಲ್ಲಿ ಸ್ಥಾಪಿಸಲಾದ ಪ್ರತಿಸ್ಪಂದನಾ ಸಹಾಯವಾಣಿ ನಿಮ್ಮ ನೆರವಿಗೆ ಬರಲಿದೆ ಎಂದು ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಮೊದಲನೇ ಮಹಡಿಯಲ್ಲಿ ಬುಧವಾರ ಸಹಾಯವಾಣಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, 'ಈ ಪ್ರತಿಸ್ಪಂದನಾ ಸಹಾಯವಾಣಿ ಕೇಂದ್ರವು 1800 208 1237 ಜನರ ಹಲವಾರು ಸಮಸ್ಯೆಗಳಿಗೆ ದನಿಯಾಗಲಿದೆ. ಸಾರ್ವಜನಿಕರು ಯಾವುದೇ ಮಾಹಿತಿಗಾಗಿ, ಸೇವೆ ಸೌಲಭ್ಯಗಳಿಗಾಗಿ ಕರೆ ಮಾಡಬಹುದಾಗಿದೆ ಎಂದರು.[ಕುಡಿಯುವ ನೀರಿಗಾಗಿ ಸಹಾಯವಾಣಿ]
ಚಾಲುಕ್ಯ ಅಭಿವೃದ್ದಿ ಪ್ರಾಧಿಕಾರದ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವರೊಂದಿಗೆ ಚರ್ಚಿಸಲಾಗುತ್ತಿದೆ. ಬಾಗಲಕೋಟೆ ಐಟಿ ಪಾರ್ಕನ್ನು ಸದ್ಯಕ್ಕೆ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಗುತ್ತದೆ. ತಾರಾಲಯ ನಿರ್ಮಾಣಕ್ಕೆ 5 ಕೋಟಿ ರೂ. ವೆಚ್ಚದ ಟೆಂಡರ್ ತಯಾರಾಗಿದೆ.
ಅಕ್ಷರಧಾಮ ಮಾದರಿಯಲ್ಲಿ ಕೂಡಲಸಂಗಮ ಅಭಿವೃದ್ದಿಗೆ ಬಜೆಟ್ ನಲ್ಲಿ 100 ಕೋಟಿ ರೂ.ಗಳಿಗಿಂತ ಹೆಚ್ಚಿನ ಅನುದಾನದ ಪ್ರಸ್ತಾವನೆ ಸಿದ್ದವಾಗಿದೆ. 2 ಮೆಡಿಕಲ್ ಕಾಲೇಜಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಕೋರಲಾಗಿದೆ. ಲೋಕಾಪೂರ ಹತ್ತಿರದ ಚೌಡಾಪೂರದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದರು.[ಹೆಸ್ಕಾಂನ ಸಹಾಯವಾಣಿ ಉದ್ಘಾಟಿಸಿದ ಡಿಕೆ ಶಿವಕುಮಾರ್]
ಶಾಸಕ ಎಚ್.ವೈ.ಮೇಟಿ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ, ಕಿಯೋನಿಕ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ರಾಜಕುಮಾರ ಶ್ರೀವಾತ್ಸವ, ಅಶೋಕ ಗಿರಿ ಹಾಗೂ ಪವಿತ್ರ ಇತರರು ಉಪಸ್ಥಿತರಿದ್ದರು.
ಸಹಾಯವಾಣಿಯಲ್ಲಿ ಎಷ್ಟು ಮಂದಿ ಕಾರ್ಯನಿರ್ವಹಿಸಲಿದ್ದಾರೆ?
ಈ ಕೇಂದ್ರದಲ್ಲಿ 5 ಜನ ಬಾಗಲಕೋಟೆ ಹಾಗೂ 6 ಜನ ಬೆಂಗಳೂರಿನ ಅಂಗವಿಕಲರು ಕಾರ್ಯನಿರ್ವಹಿಸುತ್ತಿದ್ದಾರೆ. ಇದು ದೇಶದಲ್ಲಿಯೇ ಪ್ರಥಮ. ಸಹಾಯವಾಣಿಯ ಸಂಖ್ಯೆ ಈ ರೀತಿ ಇದೆ - 1800 208 1237
ಯಾವ ಅವಧಿಯಲ್ಲಿ ಕರೆ ಮಾಡಬೇಕು?
ರೈತರು ಹಾಗೂ ಸಾರ್ವಜನಿಕರು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕರೆ ಮಾಡಬಹುದಾಗಿದೆ. ಭಾನುವಾರ ಮತ್ತು ಸರಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿ ಈ ದೂರವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಪ್ರತಿಸ್ಪಂದನಾ ಸಹಾಯವಾಣಿ ಕಾರ್ಯಗಳೇನು?
ಪ್ರತಿಸ್ಪಂದನಾ ಸಹಾಯವಾಣಿ ಕೇಂದ್ರದಲ್ಲಿ ಅರ್ಜಿಗಳು ಮತ್ತು ಅಹವಾಲು ಸ್ವೀಕರಣೆ, ಜಿಲ್ಲಾ ಕೇಂದ್ರದಲ್ಲಿರುವ ಕಚೇರಿ ಅಧಿಕಾರಿಗಳೊಡನೆ ಸಂದರ್ಶನ, ಎಪಿಎಂಸಿ ಮಾರುಕಟ್ಟೆ ದರಗಳು, ಬಿಪಿಎಲ್ ಚೀಟಿ ಹೊಂದಿರುವವರಿಗೆ ಆಸ್ಪತ್ರೆ ಹಾಗೂ ಚಿಕಿತ್ಸೆಗೆ ಸಲಹೆಗಳು ದೊರೆಯಲಿವೆ.
ಪ್ರತಿಸ್ಪಂದನಾ ಸಹಾಯವಾಣಿಯ ಇನ್ನಷ್ಟು ಸೇವೆಗಳು?
ಜಿಲ್ಲಾಧಿಕಾರಿ ಕೇಂದ್ರದಲ್ಲಿ ಪ್ರಮಾಣಪತ್ರ ನೀಡಿಕೆ, ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಸೇವೆಗಳು, ಆರ್ ಟಿಐ ಹಾಗೂ ಕುಂದುಕೊರತೆಗಳು, ಪರವಾನಗಿ ಸೇವೆಗಳು, ವಿದ್ಯಾರ್ಥಿ ವೇತನ ಸಂಬಂಧಿತ, ಕಂದಾಯ ಸೇವೆ, ರೈತರಿಗೆ ಮಣ್ಣಿನ ಆರೋಗ್ಯ ಚೀಟಿಗಳು ಹಾಗೂ ಶಿಕ್ಷಣ ಹಾಗೂ ಆರ್ಟಿಇ ಸಂಬಂಧಿತ ಸೇವೆಗಳು ಲಭ್ಯವಿರುವ ಸೇವೆಗಳಾಗಿವೆ.