ಚಿತ್ರದುರ್ಗದಲ್ಲಿ ಡೆಂಗ್ಯೂ ಮುನ್ಸೂಚನೆ; ಸ್ವಚ್ಛತೆಗೆ ಡಿಸಿ ಸೂಚನೆ
ಇಷ್ಟು ದಿನ ಬಿರು ಬೇಸಿಗೆಯಿಂದ ತತ್ತರಿಸಿದ್ದ ಚಿತ್ರದುರ್ಗದಲ್ಲಿ ಈಗ ಮಳೆಗಾಲ ಆರಂಭಕ್ಕೂ ಮುನ್ನವೇ ಡೆಂಗ್ಯೂ ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವ ಸಲುವಾಗಿ ಸರ್ಕಾರ ಜನರ ಆರೋಗ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಲ್ಲೂ ಮುಖ್ಯವಾಗಿ ಡೆಂಗ್ಯೂ ತಡೆಗಟ್ಟಲು ಪರಿಸರವನ್ನು ಸ್ವಚ್ಚವಾಗಿಡುವಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ನೀಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಪತ್ರಿಕಾಗೋಷ್ಟಿಯನ್ನು ನಡೆಸಿದರು.
ಮಳೆಗಾಲ ಆರಂಭವಾಗುತ್ತಿದ್ದು ಡೆಂಗ್ಯೂ ಜ್ವರ ಬಾರದಂತೆ ನೋಡಿಕೊಳ್ಳಲು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯನವರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಾರ್ವಜನಿಕರಿಗೆ ಅವರು ಕರೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಡೆಸಲಾದ ಪತ್ರಿಕಾಗೋಷ್ಠಿಯ ವಿವರಗಳು ಇಲ್ಲಿವೆ.
ಗ್ರಾಮೀಣ ಪ್ರದೇಶಗಳಿಗೆ ಕಾಯಿಲೆ ಹಬ್ಬುವ ಸಾಧ್ಯತೆ
ಹಿಂದೆ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಡೆಂಗಿ ಜ್ವರವು ಗ್ರಾಮೀಣ ಪ್ರದೇಶದಲ್ಲಿಯು ಕಾಣಿಸಿಕೊಳ್ಳುತ್ತಿದೆ. ಮಳೆಗಾಲದಲ್ಲಿ ಇದರ ಪ್ರಮಾಣ ಹೆಚ್ಚಲಿದ್ದು ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ನಿಂತ ನೀರಲ್ಲಿ ಡೆಂಗಿ ಜ್ವರವು ಈಡೀಸ್ ಈಜಿಪ್ಟೈ ಸೊಳ್ಳೆಯಿಂದ ಬರಲಿದ್ದು ನಿಂತ ನೀರಲ್ಲಿ ಈ ಸೊಳ್ಳೆಯ ಉತ್ಪತ್ತಿಯಾಗಲಿದೆ. ಆದ್ದರಿಂದ ನೀರನ್ನು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಸುತ್ತಮುತ್ತ ತೆಂಗಿನ ಚಿಪ್ಪು, ಟೈರ್, ಪ್ಲಾಸ್ಟಿಕ್, ಚರಂಡಿಯಲ್ಲಿ ನೀರು ನಿಂತಲ್ಲಿ ಇದರಲ್ಲಿ ಲಾರ್ವ ಉತ್ಪತ್ತಿಯಾಗಿ ನಂತರ ಇದರ ಮೊಟ್ಟೆಯಿಂದ ಸೊಳ್ಳೆಗಳ ಉತ್ಪತ್ತಿಯಾಗುತ್ತದೆ ಎಂದರು.
ರೋಗವಾಹಕಗಳೂ ವೃದ್ಧಿ
ಡೆಂಗಿ ಜ್ವರವು ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತಲೂ ಡೆಂಗಿ ಬಾರದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು ಮುಂದಾಗಬೇಕಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಈ ವರ್ಷ ಡೆಂಗಿ ಪ್ರಕರಣಗಳು ಇಳಿಕೆಯಾಗಿವೆ. ಕಳೆದ ವರ್ಷ ಮೇ ವರೆಗೆ 63 ಇದ್ದರೆ ಈ ವರ್ಷ 40 ಡೆಂಗಿ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದಿವೆ. ಚಿಕನ್ಗುನ್ಯಾ 38, ಮಲೇರಿಯಾ 5, ಹೆಚ್1ಎನ್1 35 ಪ್ರಕರಣಗಳು ಕಂಡು ಬಂದಿದ್ದು ಎಲ್ಲಾ ರೋಗಗಳು ನಿಯಂತ್ರಣದಲ್ಲಿವೆ. ಆದರೆ ಈಗ ಮಳೆಗಾಲ ಆರಂಭವಾಗುತ್ತಿರುವುದರಿಂದ ರೋಗವಾಹಕ ಪ್ರಕರಣಗಳು ಹೆಚ್ಚಾಗಬಹುದೆಂದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಉಸ್ತುವಾರಿಗೆ ನೇಮಕ
ಚಿತ್ರದುರ್ಗಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜ್ ಮಂಜೂರಾಗಿದ್ದು ಇದಕ್ಕೆ ಬೇಕಾದ ಅನುದಾನ ಒದಗಿಸಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಮತ್ತು ಮಡಿಕೇರಿ ಹಾಗೂ ಶಿವಮೊಗ್ಗ ಮೆಡಿಕಲ್ ಕಾಲೇಜಿನಿಂದ ಇಬ್ಬರು ಪ್ರೊಫೆಸರ್ ಗಳನ್ನು ಉಸ್ತುವಾರಿಗೆ ನೇಮಕ ಮಾಡಿದೆ. ಈ ವರ್ಷವೇ ಕಾಲೇಜು ಆರಂಭವಾಗಲಿದ್ದು ಇದಕ್ಕೆ ಬೇಕಾದ ನಿರ್ವಹಣೆಗೆ ಟೆಂಡರ್ ಕರೆಯಲಾಗುತ್ತದೆ ಎಂದರು.
ವ್ಯವಸ್ಥಿತ ನಿರ್ವಹಣೆಗೆ ಕ್ರಮ
ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್ ಮತ್ತು ನವಜಾತ ಶಿಶುಗಳ ವಾರ್ಡ್ಗಳಲ್ಲಿ ಅನಾವಶ್ಯಕವಾಗಿ ರೋಗಿಗಳ ಸಂಬಂಧಿಕರು ಹೆಚ್ಚು ಜನರು ಆಗಮಿಸುವುದರಿಂದ ತಾಯಿ, ಮಗುವಿನ ಆರೈಕೆಗೆ ತೊಂದರೆಯಾಗಲಿದೆ. ಇದನ್ನು ನಿಯಂತ್ರಿಸಲು ರೋಗಿಗಳ ಜೊತೆ ಒಬ್ಬರು ಮಾತ್ರ ಇರಲು ಗುರುತಿನ ಚೀಟಿಯನ್ನು ನೀಡಲು ಮತ್ತು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಅತ್ಯುತ್ತಮ ವೈದ್ಯಕೀಯ ಸೇವೆ
ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭವಾಗುತ್ತಿರುವುದರಿಂದ ಇಲ್ಲಿ ಹೊಸ ಕಟ್ಟಡಗಳು ಪ್ರಾರಂಭವಾಗಲಿದೆ. ಆದ್ದರಿಂದ ಇಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಅತ್ಯುತ್ತಮ ವೈದ್ಯಕೀಯ ಸೇವೆಗಳು ದೊರಕಲಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.