ಚಿತ್ರದುರ್ಗದ ಚಳ್ಳಕೆರೆಯ 'ಡಿಆರ್ಡಿಒ ಎಟಿಆರ್'ಗೆ ಜೇಟ್ಲಿ ಚಾಲನೆ
ಚಿತ್ರದುರ್ಗ, ಮೇ 28: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕುದಾಪುರ ಬಳಿ ವಿಜ್ಞಾನ ನಗರಿಯಲ್ಲಿ ತಲೆ ಎತ್ತಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ)ದ ಮಾನವ ರಹಿತ (ಯುಎವಿ) ಯುದ್ಧ ವಿಮಾನಗಳ ಪರೀಕ್ಷಾರ್ಥ ವಾಯುನೆಲೆಯನ್ನು (ಎಟಿಆರ್) ರಕ್ಷಣಾ ಸಚಿವ ಅರುಣ್ ಜೇಟ್ಲಿ ಉದ್ಘಾಟಿಸಿದರು.
ಇಲ್ಲಿ ಸುಮಾರು 4,290 ಎಕರೆ ಪ್ರದೇಶದಲ್ಲಿ ಡಿಆರ್ಡಿಒ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಮಾನವ ರಹಿತ ಯುದ್ಧ ವಿಮಾನಗಳನ್ನು ಪರೀಕ್ಷಾರ್ಥ ಹಾರಾಟ ನಡೆಸಲು ಸುಸಜ್ಜಿತ ವಾಯುನೆಲೆ ನಿರ್ಮಿಸಿದೆ. ವಿಮಾನಗಳ ಟೇಕಾಫ್, ಲ್ಯಾಂಡಿಂಗ್ ಮತ್ತು ಹಾರಾಟ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡುವ ಕೇಂದ್ರ ಇದು.
ಎಟಿಆರ್ ಉದ್ಘಾಟಿಸಿ ಮಾತನಾಡಿದ ಅರುಣ್ ಜೇಟ್ಲಿ, "ಭಾರತ ಭೌಗೋಳಿಕವಾಗಿ ಸಮಸ್ಯೆಯ ಪ್ರದೇಶದಲ್ಲಿದೆ. ನಮಗೆ ಅಕ್ಕಪಕ್ಕದಲ್ಲಿರುವವರು ಕಳೆದ 7 ದಶಕಗಳಿಂದ ದೇಶದ ಭದ್ರತೆಗೆ ಕಂಟಕವಾಗಿದ್ದಾರೆ," ಎಂದು ಹೇಳಿದ್ದಾರೆ.
ಎಟಿಆರ್ ವಿಶೇಷತೆಗಳು
ಕಳೆದ 9 ತಿಂಗಳ ನಿರ್ಮಾಣದ ನಂತರ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್) ಕಾಮಗಾರಿ ಕೆಲವು ತಿಂಗಳ ಹಿಂದೆಯೇ ಪೂರ್ಣಗೊಂಡಿದೆ. ಇದು ಪ್ರಯೋಗಕ್ಕೆ ಮುಕ್ತವಾಗಿದ್ದು ಈಗಾಗಲೇ ವಿಮಾನಗಳ ಹಾರಾಟ ಪರೀಕ್ಷೆ ನಡೆಯುತ್ತಿದೆ. ಹಲವು ವಿಜ್ಞಾನಿಗಳು ಇಲ್ಲಿ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಚ್ಚಿನ ವಿಜ್ಞಾನಿಗಳು ಚಳ್ಳಕೆರೆಯ ಸುತ್ತಮುತ್ತ ನೆಲೆಸಿದ್ದಾರೆ. ಹಿರಿಯ ಅಧಿಕಾರಿಗಳು ಮಾತ್ರ ಬೆಂಗಳೂರಿನಿಂದ ನಿಯಮಿತವಾಗಿ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.
28 ಕಿ.ಮೀ ಸುತ್ತಳತೆಯ ಭದ್ರ ಕೋಟೆ
ಈ ವಾಯನೆಲೆ 28 ಕಿ.ಮೀ ಸುತ್ತಳತೆ ಹೊಂದಿದೆ. ಸುಮಾರು 10,500 ಎಕರೆ ಪ್ರದೇಶದಲ್ಲಿ ಈ ವಿಜ್ಞಾನ ನಗರಿ ತಲೆ ಎತ್ತಿದ್ದು ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ 35 ಕಿಮೀ ದೂರದಲ್ಲಿದೆ. ಇದಕ್ಕೆ ಎಲ್ಲಾ ಭಾಗಗಳಿಂದಲೂ ರಾಡಾರ್ ನಿಗಾವಿದೆ. ಈ ಕೇಂದ್ರಕ್ಕೆ ಸೇನಾ ಭದ್ರತೆ ನೀಡುತ್ತದೆ.
ಕೇಂದ್ರದ ಒಳಭಾಗದಲ್ಲಿ ವಿಮಾನಗಳ ಪರೀಕ್ಷೆಗಾಗಿ ಸುಮಾರು 2.3 ಕಿಮೀ ಉದ್ದದ ರನ್ವೇ ನಿರ್ಮಿಸಲಾಗಿದೆ. ಇದರ ಹೊರಭಾಗದಲ್ಲಿ ಸುಮಾರು 3 ಕಿ.ಮೀ ಅಂತರದಲ್ಲಿ ಶಾಲೆ, ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡ 200 ಎಕರೆ ಪ್ರದೇಶದ ಟೌನ್ಶಿಪ್ ನಿರ್ಮಾಣವಾಗಿದೆ.
ಯಶಸ್ವೀ ಪ್ರಯೋಗ
ಈ ವಾಯುನೆಲೆ ಉದ್ಘಾಟನೆ ಆಗುವ ಮೊದಲೇ ಅಂದರೆ ಕಳೆದ ನವೆಂಬರಿನಲ್ಲಿ ಇಲ್ಲಿ ಮಾನವರಹಿತ ವಿಮಾನ 'ತಪಸ್ 201'ವಿಮಾನದ ಪರೀಕ್ಷಾರ್ಥ ಹಾರಾಟ ನಡೆದು ಯಶಸ್ವಿಯಾಗಿತ್ತು. ಈ ವಿಮಾನಕ್ಕೆ ರುಸ್ತುಂ- 2 ಎಂದೂ ಕರೆಯುತ್ತಾರೆ.
ಗಡಿಯಾಚೆ ಬೇಹುಗಾರಿಕೆ ನಡೆಸುವ ಜತೆಗೆ ಶತ್ರುಪಡೆಗಳನ್ನು ಹೊಡೆದುರುಳಿಸುವ ವಿಶೇಷ ವಿಮಾನ ಇದು. ಸುಮಾರು 200 ಕಿ.ಮೀ ದೂರದವರೆಗಿನ ಪ್ರದೇಶದಲ್ಲಿ ದಿನದ 24 ಗಂಟೆಯೂ ಹದ್ದಿನ ಕಣ್ಣಿಟ್ಟು, ಸೇನೆಯ ಮೂರೂ ಪಡೆಗಳಿಗೆ ಚಿತ್ರ ಸಹಿತ ಮಾಹಿತಿ ರವಾನಿಸುವ ಕೆಲಸವನ್ನು ಇದು ಮಾಡಲಿದೆ.
ಚಳ್ಳಕೆರೆಯೇ ಯಾಕೆ?
ರಕ್ಷಣಾ ವ್ಯವಸ್ಥೆಗೆ ಪೂರಕವಾದ ವೈಮಾನಿಕ ಪ್ರಯೋಗಗಳನ್ನು ನಡೆಸಲು ವಿಶಾಲ ಪ್ರದೇಶದ ಅಗತ್ಯವಿದೆ. ಜತೆಗೆ ಕಡಿಮೆ ಮಳೆ ಬೀಳುವ ಪ್ರದೇಶಗಳೂ ಆಗಬೇಕು. ಈ ಕಾರಣಕ್ಕೆ ಚಳ್ಳಕೆರೆಯನ್ನು ಆಯ್ಕೆ ಮಾಡಿಕೊಂಡು ಇಲ್ಲಿ ಈ ವಿಜ್ಞಾನ ನಗರ ನಿರ್ಮಿಸಲಾಗಿದೆ.
ಮುಂದಿನ ದಿನಗಳಲ್ಲಿ, ದೇಶೀಯ ನಿರ್ಮಾಣದ ಮಾನವರಹಿತ ಯುದ್ಧ ವಿಮಾನಗಳ ಪರೀಕ್ಷಾರ್ಥ ಹಾರಾಟ ಇಲ್ಲಿ ನಡೆಯಲಿದೆ.
ಜನಾರ್ಧನ ಸ್ವಾಮಿ ಶ್ರಮದ ಫಲ
ಚಿತ್ರದುರ್ಗ ಜಿಲ್ಲೆಗೆ ಇಂಥಹದ್ದೊಂದು ಬೃಹತ್ ಯೋಜನೆ ಬರಬೇಕು ಎಂದು ಕನಸು ಕಂಡವರು ಮಾಜಿ ಸಂಸದ ಜನಾರ್ಧನ ಸ್ವಾಮಿ. ಅವರು ಕನಸೀಗ ನನಸಾಗಿದೆ.
ಡಿಆರ್ ಡಿಒ ಮುಂತಾದ ವೈಜ್ಞಾನಿಕ ಕೇಂದ್ರಗಳ ಸ್ಥಾಪನೆಗೆ ಅವಿರತ ಶ್ರಮಿಸಿದ, ಚಿತ್ರದುರ್ಗದ ಅಭಿವೃದ್ಧಿಯನ್ನು ಅತೀವವಾಗಿ ಪ್ರೀತಿಸುವ ಮಾಜಿ ಸಂಸದ ಜನಾರ್ಧನ ಸ್ವಾಮಿ ಎಟಿಆರ್ ಉದ್ಘಾಟನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.