ಮಡಿಕೇರಿ ಗಲಭೆ : ಡಿಸಿ, ಎಸ್ಪಿ ಕರ್ತವ್ಯ ಲೋಪ
ಬೆಂಗಳೂರು, ಜೂನ್ 16 : ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವೇಳೆ ಮಡಿಕೇರಿಯಲ್ಲಿ ನಡೆದ ಗಲಭೆಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕರ್ತವ್ಯ ಲೋಪವೇ ಕಾರಣ ಎಂದು ಮ್ಯಾಜಿಸ್ಟ್ರೇಟ್ ತನಿಖೆ ಹೇಳಿದೆ.
ಬುಧವಾರ ವಿಧಾನಸೌಧದಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, 'ಮಡಿಕೇರಿ ಗಲಭೆ ಕುರಿತು ಸಲ್ಲಿಕೆಯಾಗಿರುವ ಮ್ಯಾಜಿಸ್ಟ್ರೇಟ್ ವರದಿಯನ್ನು ಜಾರಿಗೆ ತರಲು ಮಂತ್ರಿ ಪರಿಷತ್ ಸಭೆಯಲ್ಲಿ ನಿರ್ಧರಿಸಲಾಗಿದೆ' ಎಂದರು. [ಕುಟ್ಟಪ್ಪ ಸಾವು: ಆಕಸ್ಮಿಕವೋ, ಪೂರ್ವ ನಿಯೋಜಿತವೋ?]
'ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸಂದರ್ಭದಲ್ಲಿ ರಜೆ ಮೇಲೆ ತೆರಳಿದ್ದ ಅಂದಿನ ಕೊಡಗು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇರ ಜನ ಸಂಪರ್ಕ ಇಲ್ಲದ ಹುದ್ದೆಗಳಿಗೆ ವರ್ಗಾವಣೆ ಮಾಡುವಂತೆ ತನಿಖಾ ವರದಿ ಶಿಫಾರಸು ಮಾಡಿದೆ' ಎಂದು ಸಚಿವರು ಹೇಳಿದರು. [ಕುಟ್ಟಪ್ಪ ಸಾವಿನ ಪ್ರತೀಕಾರಕ್ಕೆ ಹಮೀದ್ ಹತ್ಯೆ]
'ರಜೆ ಮೇಲೆ ತೆರಳಿದ್ದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಷೋಕಾಸ್ ನೋಟಿಸ್ ನೀಡಬೇಕು. ಅಗತ್ಯವಿದ್ದರೆ ಇಲಾಖಾ ತನಿಖೆ ನಡೆಸಬೇಕು. ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕರಿಗೂ ಕಾರಣ ಕೇಳಿ ನೋಟಿಸ್ ನೀಡಲು ವರದಿ ಶಿಫಾರಸು ಮಾಡಿದೆ' ಎಂದು ಜಯಚಂದ್ರ ವಿವರಣೆ ನೀಡಿದರು. [ಕೊಡವರು ಟಿಪ್ಪುವನ್ನು ವಿರೋಧಿಸುವುದೇಕೆ?]
ಗಲಭೆಯಲ್ಲಿ ಮೃತಪಟ್ಟ ವಿಶ್ವ ಹಿಂದೂ ಪರಿಷತ್ ಮುಖಂಡ ಕುಟ್ಟಪ್ಪ ಅವರ ಸಾವಿಗೆ ಕಾರಣವೇನು? ಎಂದು ತಿಳಿಯಲು ಇನ್ನಷ್ಟು ತನಿಖೆಯಾಗಬೇಕು ಎಂದು ವರದಿ ಹೇಳಿದೆ. ತನಿಖಾ ವರದಿಯಲ್ಲಿರುವ ಶಿಫಾರಸುಗಳನ್ನು ಜಾರಿಗೊಳಿಸಲು ಮಂತ್ರಿ ಪರಿಷತ್ ಸಭೆ ನಿರ್ಧರಿಸಿದೆ.
2015ರ ನ.10ರಂದು ಟಿಪ್ಪು ಜಯಂತಿ ಆಚರಣೆ ವೇಳೆ ಮಡಿಕೇರಿಯಲ್ಲಿ ಗಲಭೆ ನಡೆದಿತ್ತು. ಅಂದು ಕೊಡಗು ಜಿಲ್ಲಾಧಿಕಾರಿಯಾಗಿದ್ದ ಮೀರ್ ಅನೀಸ್ ಅಹ್ಮದ್ ಅವರು ಮೇ 31ರಂದು ನಿವೃತ್ತರಾಗಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವರ್ಟಿಕಾ ಕಟಿಯಾರ್ ಅವರನ್ನು ಕಳೆದ ತಿಂಗಳು ಗುಪ್ತದಳದ ಎಸ್ಪಿ ವರ್ಗಾವಣೆ ಮಾಡಲಾಗಿದೆ. [ಪಿಟಿಐ ಚಿತ್ರ]